ಚೆನ್ನೈ: ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ರಚನೆಯ ಹಾದಿ ಮತ್ತಷ್ಟು ಕಠಿಣವಾಗುತ್ತಿದೆ. ಈ ಹಿಂದೆ ನಿಗದಿಯಾಗಿದ್ದ ಪ್ರಮಾಣವಚನ ಸ್ವೀಕಾರ ಸಮಾರಂಭವು ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮತ್ತೆ ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಬಹುಮತ ಸಾಬೀತಿಗೆ ಹೆಚ್ಚಿನ ಪುರಾವೆಗಳನ್ನು ಕೇಳಿರುವುದು ಮತ್ತು ಮಿತ್ರಪಕ್ಷಗಳ ನಡುವಿನ ಗೊಂದಲವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಟಿ.ಟಿ.ವಿ. ದಿನಕರನ್ ಅವರು ಎಐಎಡಿಎಂಕೆ (EPS) ಪಾಳಯಕ್ಕೆ ಬೆಂಬಲ ಘೋಷಿಸಿದ ನಂತರ, ವಿಜಯ್ ಅವರಿಗೆ ಇರುವ ಸಂಖ್ಯಾಬಲದ ಬಗ್ಗೆ ರಾಜ್ಯಪಾಲರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರತಿ ಶಾಸಕರು ಖುದ್ದಾಗಿ ಹಾಜರಾಗಿ ಸಹಿ ಮಾಡಿರುವ ಪತ್ರವನ್ನು ಸಲ್ಲಿಸುವಂತೆ ಅವರು ಸೂಚಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳು ಮೈತ್ರಿಕೂಟದೊಳಗೆ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವುದು ವಿಜಯ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಮಾತುಕತೆಗಳು ಇನ್ನು ಅಂತಿಮವಾಗದ ಕಾರಣ ವಿಜಯ್ ಅವರು ಸದ್ಯಕ್ಕೆ ಪ್ರಮಾಣವಚನದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.
ಶಾಸಕರ ಬೆಂಬಲ ಪತ್ರದ ಸಿಂಧುತ್ವದ ಬಗ್ಗೆ ಎದುರಾಳಿ ಪಕ್ಷಗಳು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇರುವುದರಿಂದ, ವಿಜಯ್ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.








