ಬೆಂಗಳೂರು: ರಾಜ್ಯ ಸರ್ಕಾರಿ ಸೇವೆಗೆ ಸೇರಿದ ನಂತರ ನೌಕರರು ನಡೆದುಕೊಳ್ಳಬೇಕಾದ ಕಡ್ಡಾಯ ಸೇವಾ ನಿಯಮಗಳನ್ನು ‘ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021’ ರಲ್ಲಿ ಪ್ರಕಟಿಸಲಾಗಿದೆ. ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಪಾಲಿಸಲೇಬೇಕಾದ ಸಂಪೂರ್ಣ ನಿಯಮಗಳ ವಿವರ ಇಲ್ಲಿದೆ:
1. ‘ಸರ್ಕಾರಿ ನೌಕರ’ ಎಂದರೆ ಯಾರು?
ಈ ನಿಯಮಗಳ ಪ್ರಕಾರ, ಕರ್ನಾಟಕ ರಾಜ್ಯದ ನಾಗರಿಕ ಸೇವಾ ಸದಸ್ಯನಾಗಿರುವ ಅಥವಾ ಕರ್ನಾಟಕ ರಾಜ್ಯದ ವ್ಯವಹಾರಗಳಿಗೆ ಸಂಬಂಧಪಟ್ಟ ನಾಗರಿಕ ಹುದ್ದೆಯನ್ನು ಹೊಂದಿರುವ ಯಾರೇ ವ್ಯಕ್ತಿಯನ್ನು ‘ಸರ್ಕಾರಿ ನೌಕರ’ ಎಂದು ಪರಿಗಣಿಸಲಾಗುತ್ತದೆ.
ಪ್ರತಿನಿಯೋಜನೆ ನೌಕರರೂ ಭಾಗಿ: ಯಾವ ವ್ಯಕ್ತಿಯ ಸೇವೆಗಳನ್ನು ತಾತ್ಕಾಲಿಕವಾಗಿ ಭಾರತ ಸರ್ಕಾರ, ಮತ್ತೊಂದು ರಾಜ್ಯ ಸರ್ಕಾರ, ಕಂಪನಿ, ನಿಗಮ, ನಿಗಮಿತವಾಗಿರುವ ಮಂಡಳಿ, ಸಂಸ್ಥೆ ಅಥವಾ ನಿಗಮಿತವಾಗಿಲ್ಲದಿರುವ ಸ್ಥಳೀಯ ಪ್ರಾಧಿಕಾರದ ಸೇವೆಗೆ ನಿಯೋಜಿಸಲಾಗಿದೆಯೋ, ಅಂಥ ವ್ಯಕ್ತಿಯು ರಾಜ್ಯದ ಸಂಚಿತ ನಿಧಿಯ ಹೊರತಾದ ಇತರ ಯಾವುದೇ ಮೂಲಗಳಿಂದ ವೇತನ ಪಡೆಯುತ್ತಿದ್ದರೂ ಸಹ, ಅವರನ್ನು ಇದು ಒಳಗೊಳ್ಳುತ್ತದೆ.
ವಿವರಣೆ: ಈ ನಿಯಮಗಳಲ್ಲಿ ಉಲ್ಲೇಖಿಸಲಾಗಿರುವ ‘ಸರ್ಕಾರಿ ನೌಕರ’ ಎಂದರೆ ಈ ನಿಯಮಗಳು ಅನ್ವಯವಾಗುವ ಯಾವುದೇ ವರ್ಗ ಅಥವಾ ಸೇವೆಗೆ ಸೇರಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಎಂದರ್ಥ.
2. ‘ಕುಟುಂಬದ ಸದಸ್ಯರು’ ಎಂದರೆ ಯಾರು?
ಸರ್ಕಾರಿ ನೌಕರನಿಗೆ ಸಂಬಂಧಪಟ್ಟಂತೆ ‘ಕುಟುಂಬದ ಸದಸ್ಯರು’ ಎಂಬ ವ್ಯಾಪ್ತಿಗೆ ಈ ಕೆಳಗಿನವರು ಬರುತ್ತಾರೆ:
(i) ಪತಿ ಅಥವಾ ಪತ್ನಿ: ಸಂದರ್ಭಾನುಸಾರ ಸರ್ಕಾರಿ ನೌಕರನ/ನೌಕರಳ ಪತ್ನಿ ಅಥವಾ ಪತಿಯು, ಅವರ ಜೊತೆ ವಾಸವಾಗಿರಲಿ ಅಥವಾ ಇಲ್ಲದಿರಲಿ ಅವರನ್ನು ಒಳಗೊಳ್ಳುತ್ತದೆ. ಆದರೆ ಸಕ್ಷಮ ನ್ಯಾಯಾಲಯದ ಡಿಕ್ರಿ ಅಥವಾ ಆದೇಶದ ಮೂಲಕ ಸರ್ಕಾರಿ ನೌಕರನಿಂದ/ನೌಕರಳಿಂದ ಕಾನೂನಾತ್ಮಕವಾಗಿ ಬೇರ್ಪಟ್ಟಿರುವ ಪತ್ನಿ ಅಥವಾ ಪತಿಯನ್ನು ಇದು ಒಳಗೊಳ್ಳುವುದಿಲ್ಲ.
(ii) ಮಕ್ಕಳು: ಸರ್ಕಾರಿ ನೌಕರನ ಮತ್ತು ಸಂಪೂರ್ಣವಾಗಿ ಆತನ ಮೇಲೆಯೇ ಅವಲಂಬಿಸಿರುವ ಮಗ, ಮಗಳು, ಮಲ-ಮಗ ಅಥವಾ ಮಲ-ಮಗಳನ್ನು ಒಳಗೊಳ್ಳುತ್ತದೆ. ಆದರೆ ಸರ್ಕಾರಿ ನೌಕರನ ಮೇಲೆ ಯಾವುದೇ ರೀತಿಯಲ್ಲಿ ಅವಲಂಬಿಸಿರದ ಅಥವಾ ಯಾವುದೇ ಕಾನೂನಿನ ಮೂಲಕ/ಅದರ ಮೇರೆಗೆ ಯಾವ ಮಗುವಿನ ಅಥವಾ ಮಲ-ಮಗುವಿನ ಅಭಿರಕ್ಷೆಯನ್ನು (Custody) ಸರ್ಕಾರಿ ನೌಕರನಿಗೆ ನೀಡಲಾಗಿಲ್ಲವೋ, ಅಂಥ ಮಗುವನ್ನು ಅಥವಾ ಮಲ-ಮಗುವನ್ನು ಇದು ಒಳಗೊಳ್ಳುವುದಿಲ್ಲ.
(iii) ಅವಲಂಬಿತ ರಕ್ತಸಂಬಂಧಿಗಳು: ಸರ್ಕಾರಿ ನೌಕರನಿಗೆ ಅಥವಾ ಸರ್ಕಾರಿ ನೌಕರನ/ನೌಕರಳ ಪತ್ನಿಗೆ ಅಥವಾ ಪತಿಗೆ ರಕ್ತ ಸಂಬಂಧದ ಅಥವಾ ವಿವಾಹದ ಮೂಲಕ ಸಂಬಂಧಿಯಾಗಿದ್ದು, ಪೂರ್ಣವಾಗಿ ಸರ್ಕಾರಿ ನೌಕರರನ್ನೇ ಅವಲಂಬಿಸಿರುವ ಯಾರೇ ಇತರ ವ್ಯಕ್ತಿಯನ್ನು ಇದು ಒಳಗೊಳ್ಳುತ್ತದೆ.
3. ‘ನಿಯಮಿಸಿದ ಪ್ರಾಧಿಕಾರ’ ಎಂದರೆ ಯಾರು?
ವಿವಿಧ ವರ್ಗದ ನೌಕರರಿಗೆ ಸಂಬಂಧಿಸಿದಂತೆ ‘ನಿಯಮಿಸಿದ ಪ್ರಾಧಿಕಾರ’ ಎಂದರೆ ಈ ಕೆಳಗಿನಂತಿರುತ್ತದೆ:
(i) ಕರ್ನಾಟಕ ನ್ಯಾಯಿಕ ಸೇವೆಗೆ ಸೇರಿದ ವ್ಯಕ್ತಿಗಳ ಸಂದರ್ಭದಲ್ಲಿ: ಕರ್ನಾಟಕದ ಉಚ್ಚ ನ್ಯಾಯಾಲಯ (High Court).
(ii) ಸಮೂಹ ‘ಎ’ (Group A) ದರ್ಜೆಯ ಯಾವುದೇ ಹುದ್ದೆ ಮತ್ತು ಸಮೂಹ ‘ಬಿ’ (Group B) ಯಲ್ಲಿ ತಹಶೀಲ್ದಾರ್ ದರ್ಜೆ-1 ರ ಹುದ್ದೆಯನ್ನು ಹೊಂದಿರುವ ನೌಕರರ ಸಂಬಂಧದಲ್ಲಿ: ಸರ್ಕಾರ.
(iii) ಸಮೂಹ ‘ಬಿ’ ಯಲ್ಲಿನ ತಹಶೀಲ್ದಾರ್ ದರ್ಜೆ-1 ಅನ್ನು ಹೊರತುಪಡಿಸಿ, ಸಮೂಹ-ಬಿ, ಸಮೂಹ-ಸಿ ಹಾಗೂ ಸಮೂಹ-ಡಿ ಯಲ್ಲಿನ ಯಾವುದೇ ಹುದ್ದೆಯನ್ನು ಹೊಂದಿರುವ ನೌಕರರ ಸಂಬಂಧದಲ್ಲಿ: ಇಲಾಖೆಯ ಮುಖ್ಯಸ್ಥರು.
(ಪರಂತು, ಇಲಾಖಾ ಮುಖ್ಯಸ್ಥರು ಆದೇಶದ ಮೂಲಕ ತಮ್ಮ ಆಡಳಿತ ನಿಯಂತ್ರಣಕ್ಕೆ ಒಳಪಡುವ ಯಾವುದೇ ಇತರೆ ಪ್ರಾಧಿಕಾರಿಗಳನ್ನು ಈ ಉದ್ದೇಶಕ್ಕಾಗಿ ನಿಯಮಿತ ಪ್ರಾಧಿಕಾರವೆಂದು ನಿರ್ದಿಷ್ಟಪಡಿಸಬಹುದು).
ವಿವರಣೆ: ಅನ್ಯ ಸೇವೆಯ ಮೇಲಿರುವ ಅಥವಾ ಇತರ ಯಾವುದೇ ಇಲಾಖೆಗೆ ಅಥವಾ ಇತರ ಯಾವುದೇ ಸರ್ಕಾರಕ್ಕೆ ಪ್ರತಿನಿಯೋಜನೆಗೊಂಡಿರುವ (Deputation) ಸರ್ಕಾರಿ ನೌಕರನ ಸಂದರ್ಭದಲ್ಲಿ, ಸಂದರ್ಭಾನುಸಾರ ಮೇಲಿನ (ii)ನೇ ಅಥವಾ (iii)ನೇ ಉಪ-ಖಂಡದಲ್ಲಿ ನಿರ್ದಿಷ್ಟಪಡಿಸಿದ ಪ್ರಾಧಿಕಾರಗಳೇ ನಿಯಮಿಸಿದ ಪ್ರಾಧಿಕಾರವಾಗಿರತಕ್ಕದ್ದು.
(iv) ಅಂಥ ಪ್ರಾಧಿಕಾರವನ್ನು ಸರ್ಕಾರವು ಆ ಬಗ್ಗೆ ಹೊರಡಿಸಲಾದ ಆದೇಶದ ಮೂಲಕ ಗೊತ್ತುಪಡಿಸತಕ್ಕದ್ದು. ಈ ನಿಯಮಗಳ ವಿವಿಧ ಉಪಬಂಧಗಳ ಉದ್ದೇಶಕ್ಕಾಗಿ ವಿವಿಧ ಪ್ರಾಧಿಕಾರಿಗಳನ್ನು ನಿರ್ದಿಷ್ಟಪಡಿಸಬಹುದು.
ಗಮನಿಸಿ: ಈ ನಿಯಮಗಳಲ್ಲಿ ಬಳಸಿದ ಆದರೆ ಪರಿಭಾಷಿಸಿರದ ಇನ್ನಿತರ ಎಲ್ಲಾ ಪದಗಳು ಮತ್ತು ಪದಾವಳಿಗಳು, ಕರ್ನಾಟಕ ನಾಗರಿಕ ಸೇವಾ ನಿಯಮಗಳಲ್ಲಿ (KCSR) ಅಥವಾ ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978ರ (1990ರ ಕರ್ನಾಟಕ ಅಧಿನಿಯಮ 14) ಅಡಿಯಲ್ಲಿ ರಚಿಸಲಾದ ಅಥವಾ ರಚಿಸಲಾಗಿದೆಯೆಂದು ಭಾವಿಸಲಾದ ಯಾವುದೇ ಇತರ ನಿಯಮಗಳಲ್ಲಿ ಅವುಗಳಿಗೆ ನೀಡಲಾದ ಅರ್ಥವನ್ನೇ ಇವುಗಳಿಗೂ ನೀಡಲಾಗಿದೆ ಎಂದು ಭಾವಿಸತಕ್ಕದ್ದು.
4. ಪಾಲಿಸಲೇಬೇಕಾದ ಸಾಮಾನ್ಯ ತತ್ತ್ವಗಳು ಮತ್ತು ನಡಾವಳಿಗಳು
ಪ್ರತಿಯೊಬ್ಬ ಸರ್ಕಾರಿ ನೌಕರನು ಎಲ್ಲ ಕಾಲಗಳಲ್ಲಿಯೂ ಈ ಕೆಳಗಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು:
ಕಡ್ಡಾಯ ಪಾಲನೆಗಳು (ಭಾಗ 1):
(i) ಸಂಪೂರ್ಣ ನೀತಿ ನಿಷ್ಠೆಯನ್ನು ಹೊಂದಿರತಕ್ಕದ್ದು.
(ii) ಕರ್ತವ್ಯ ಶ್ರದ್ಧೆಯನ್ನು ಹೊಂದಿರತಕ್ಕದ್ದು.
(iii) ಸರ್ಕಾರಿ ನೌಕರನಿಗೆ ತಕ್ಕದ್ದಲ್ಲದ ಯಾವುದನ್ನೂ ಮಾಡತಕ್ಕದ್ದಲ್ಲ.
(iv) ಯಾವುದೇ ಅಪರಾಧಿಕ ಚಟುವಟಿಕೆಯಲ್ಲಿ ತೊಡಗತಕ್ಕದ್ದಲ್ಲ.
ನೈತಿಕ ಮತ್ತು ವೃತ್ತಿಪರ ಜವಾಬ್ದಾರಿಗಳು (ಭಾಗ 2):
(i) ಉನ್ನತ ನೈತಿಕ ಆದರ್ಶಗಳನ್ನು ಹೊಂದಿರತಕ್ಕದ್ದು.
(ii) ರಾಜಕೀಯವಾಗಿ ತಟಸ್ಥನಾಗಿರತಕ್ಕದ್ದು (Political Neutrality).
(iii) ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ, ಅರ್ಹತಾದಾಯಕ, न्याय ಸಮ್ಮತ ಮತ್ತು ನಿಷ್ಪಕ್ಷಪಾತತೆಯ ಮೂಲ ತತ್ತ್ವಗಳನ್ನು ಅಳವಡಿಸಿಕೊಂಡಿರತಕ್ಕದ್ದು.
(iv) ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ನಿರ್ವಹಿಸತಕ್ಕದ್ದು.
(v) ಸಾರ್ವಜನಿಕರಿಗೆ ಸ್ಪಂದನಾಶೀಲನಾಗಿರತಕ್ಕದ್ದು.
(vi) ಸಾರ್ವಜನಿಕರೊಂದಿಗೆ ಸೌಜನ್ಯ ಹಾಗೂ ವಿನಯದಿಂದ ವರ್ತಿಸತಕ್ಕದ್ದು.
ಮೇಲ್ವಿಚಾರಣಾ ಅಧಿಕಾರಿಗಳ ಜವಾಬ್ದಾರಿ (ಭಾಗ 3):
ಮೇಲ್ವಿಚಾರಣಾ (Supervisory) ಹುದ್ದೆಯನ್ನು ಹೊಂದಿರುವ ಪ್ರತಿಯೊಬ್ಬ ಸರ್ಕಾರಿ ನೌಕರನು, ತತ್ಕಾಲದಲ್ಲಿ ತನ್ನ ನಿಯಂತ್ರಣಕ್ಕೆ ಮತ್ತು ಅಧಿಕಾರಕ್ಕೆ ಒಳಪಟ್ಟಿರುವ ಎಲ್ಲಾ ಸರ್ಕಾರಿ ನೌಕರರ ನೀತಿ ನಿಷ್ಠೆಯನ್ನು ಮತ್ತು ಕರ್ತವ್ಯ ಶ್ರದ್ಧೆಯನ್ನು ಸುನಿಶ್ಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.
ವರ್ತನೆ ಮತ್ತು ಸೌಜನ್ಯ (ಭಾಗ 4):
ಪ್ರತಿಯೊಬ್ಬ ಸರ್ಕಾರಿ ನೌಕರನು, ತನ್ನ ಕರ್ತವ್ಯಗಳನ್ನು ನಿರ್ವಹಿಸುವಾಗ ಸೌಜನ್ಯಯುತವಾದ ವರ್ತನೆಯನ್ನು ಹೊಂದಿರತಕ್ಕದ್ದು.
ದೇಶದ ಸಂವಿಧಾನ ಮತ್ತು ಸಾರ್ವಜನಿಕ ಹಿತಾಸಕ್ತಿ ಬದ್ಧತೆ (ಭಾಗ 5):
(i) ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಸರ್ವೋಚ್ಛತೆಗೆ ಸ್ವತಃ ಬದ್ಧನಾಗಿರತಕ್ಕದ್ದು ಮತ್ತು ಅದನ್ನು ಎತ್ತಿ ಹಿಡಿಯತಕ್ಕದ್ದು.
(ii) ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆ, ರಾಷ್ಟ್ರದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಯನ್ನು ಸಮರ್ಥಿಸತಕ್ಕದ್ದು ಮತ್ತು ಎತ್ತಿ ಹಿಡಿಯತಕ್ಕದ್ದು.
(iii) ಸಾರ್ವಜನಿಕ ಹಿತದೃಷ್ಟಿಯಿಂದ ಮಾತ್ರವೇ ನಿರ್ಧಾರಗಳನ್ನು ತೆಗೆದುಕೊಳ್ಳತಕ್ಕದ್ದು ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಮತ್ತು ಮಿತವ್ಯಯಕರವಾಗಿ ಬಳಸತಕ್ಕದ್ದು ಅಥವಾ ಬಳಸುವಂತೆ ಮಾಡತಕ್ಕದ್ದು.









