ಲೂಧಿಯಾನ: ಪಂಜಾಬಿ ಸಂಗೀತ ಲೋಕವನ್ನು ಬೆಚ್ಚಿಬೀಳಿಸುವ ಆಘಾತಕಾರಿ ಘಟನೆಯೊಂದರಲ್ಲಿ, ಕಳೆದ ಆರು ದಿನಗಳ ಹಿಂದೆ ಗನ್ ಪಾಯಿಂಟ್ನಲ್ಲಿ ಅಪಹರಣಕ್ಕೊಳಗಾಗಿದ್ದ ಪ್ರಸಿದ್ಧ ಪಂಜಾಬಿ ಗಾಯಕಿ ಇಂದರ್ ಕೌರ್ (ಯಶಿಂದರ್ ಕೌರ್) ಅವರ ಮೃತದೇಹ ಮಂಗಳವಾರ (ಮೇ 19) ಲೂಧಿಯಾನದ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ.
29 ವರ್ಷದ ಯುವ ಗಾಯಕಿಯ ನಿಗೂಢ ನಾಪತ್ತೆ ಮತ್ತು ಕೊಲೆ ಪ್ರಕರಣವು ಪಂಜಾಬ್ನಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು, ಚಿತ್ರರಂಗ ಹಾಗೂ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಘಟನೆಯ ಹಿನ್ನೆಲೆ:
ಪೊಲೀಸರು ಮತ್ತು ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ಇಂದರ್ ಕೌರ್ ಮೇ 13 ರಂದು ರಾತ್ರಿ 8:30 ರ ಸುಮಾರಿಗೆ ತಮ್ಮ ಫೋರ್ಡ್ ಫಿಗೋ ಕಾರಿನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಮನೆಯಿಂದ ಹೊರಟಿದ್ದರು. ಆದರೆ ತಡರಾತ್ರಿಯಾದರೂ ಅವರು ಮನೆಗೆ ಮರಳದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಮೇ 15 ರಂದು ಅವರ ಸಹೋದರ ಜೋತಿಂದರ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದರು.
ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಕೊಲೆ?
ಇಂದರ್ ಕೌರ್ ಅವರ ಕುಟುಂಬಸ್ಥರು ಇದೊಂದು ವ್ಯವಸ್ಥಿತ ಸಂಚು ಮತ್ತು ಆಕೆಯ ಇಷ್ಟಕ್ಕೆ ವಿರುದ್ಧವಾಗಿ ನಡೆದ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮೋಹಾದ ನಿವಾಸಿ, ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ ಸುಖ್ವಿಂದರ್ ಸಿಂಗ್ (ಸುಖಾ) ಎಂಬಾತನೊಂದಿಗೆ ಇಂದರ್ ಕೌರ್ ಪರಿಚಯ ಹೊಂದಿದ್ದರು. ಸುಖ್ವಿಂದರ್ ಸಿಂಗ್ಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದರೂ, ಆತ ಇಂದರ್ ಕೌರ್ ಅವರನ್ನು ಮದುವೆಯಾಗುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
ಆದರೆ, ಆತ ವಿವಾಹಿತನೆಂಬ ಸತ್ಯ ತಿಳಿದ ಇಂದರ್ ಕೌರ್ ಆತನ ಮದುವೆ ಪ್ರಸ್ತಾಪವನ್ನು ಕಡಾಖಂಡಿತವಾಗಿ ತಿರಸ್ಕರಿಸಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಸುಖ್ವಿಂದರ್ ಸಿಂಗ್ ಮತ್ತು ಆತನ ಸಹಚರ ಕರಮ್ಜೀತ್ ಸಿಂಗ್ ಎಂಬುವವರು ಮೇ 13 ರಂದು ಇಂದರ್ ಕೌರ್ ಅವರನ್ನು ಗನ್ ಪಾಯಿಂಟ್ನಲ್ಲಿ ಅಪಹರಿಸಿ, ಮದುವೆಗೆ ಒಪ್ಪದಿದ್ದಾಗ ಕೊಲೆ ಮಾಡಿ ಕಾಲುವೆಗೆ ಎಸೆದಿದ್ದಾರೆ ಎಂದು ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೆನಡಾಕ್ಕೆ ಪರಾರಿಯಾದ ಆರೋಪಿ:
ಮೂಲಗಳ ಪ್ರಕಾರ, ಕೃತ್ಯ ಎಸಗುವುದಕ್ಕೂ ಮುನ್ನ ಆರೋಪಿ ಸುಖ್ವಿಂದರ್ ಸಿಂಗ್ ಕೆನಡಾದಿಂದ ಪಂಜಾಬ್ಗೆ ಬಂದಿದ್ದನು. ಇಂದರ್ ಕೌರ್ ಅವರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಆತ ನೇಪಾಳದ ಮಾರ್ಗವಾಗಿ ಮತ್ತೆ ಕೆನಡಾಕ್ಕೆ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಈ ಇಡೀ ಅಪಹರಣ ಮತ್ತು ಕೊಲೆಯ ಸಂಚನ್ನು ಆತ ವಿದೇಶದಲ್ಲೇ ಕುಳಿತು ರೂಪಿಸಿದ್ದ ಎನ್ನಲಾಗಿದೆ.
ತನಿಖೆ ಚುರುಕುಗೊಳಿಸಿದ ಪೊಲೀಸರು:
ಮಂಗಳವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಲೂಧಿಯಾನದ ‘ನೀಲೋ ಕಾಲುವೆ’ಯಲ್ಲಿ ಇಂದರ್ ಕೌರ್ ಅವರ ಶವ ತೇಲುತ್ತಿರುವುದು ಪತ್ತೆಯಾಗಿದೆ. ಪೊಲೀಸರು ಶವವನ್ನು ಹೊರತೆಗೆದು ಸಮ್ರಾblacklist ತಾಲೂಕಿನ ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಕುಟುಂಬ ಸದಸ್ಯರು ಮೃತದೇಹ ಇಂದರ್ ಕೌರ್ ಅವರದ್ದೇ ಎಂದು ಗುರುತಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪ್ರಮುಖ ಆರೋಪಿ ಸುಖ್ವಿಂದರ್ ಸಿಂಗ್ನನ್ನು ಭಾರತಕ್ಕೆ ಹಸ್ತಾಂತರಿಸುವ ಮತ್ತು ಪ್ರಕರಣದ ಹಿಂದಿರುವ ಎಲ್ಲಾ ಆಯಾಮಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪಂಜಾಬ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
BREAKING: ಇಂದಿನಿಂದ ಮಳೆಗಾಲ ಮುಗಿಯೋವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗೆ ನಿರ್ಬಂಧ








