ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಆಟವಾಡುತ್ತಾ ವಿದ್ಯುತ್ ತಂತಿ ತುಳಿದು ಸದಲಗಾ ಪಟ್ಟಣದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಮೊರಾರ್ಜಿ ವಸತಿ ಶಾಲೆ ಏಳನೇ ತರಗತಿ ವಿದ್ಯಾರ್ಥಿ ಕೃಷ್ಣಾ ಹೆಗಡೆ (13) ಸಾವನ್ನಪ್ಪಿದ ಬಾಲಕ. ಗುರುವಾರ ಸಂಜೆ ಹಾಸ್ಟೆಲ್ನಲ್ಲಿರುವ ಕೆಲವು ವಿದ್ಯಾರ್ಥಿಗಳು ಕ್ರಿಕೆಟ್ ಆಟವಾಡುತ್ತಿದ್ದರು. ಮೃತಪಟ್ಟ ವಿದ್ಯಾರ್ಥಿ ಬಾಲ್ ತರಲು ಹೋದಾಗ ವಿದ್ಯುತ್ ವೈರ್ ಮೇಲೆ ಕಾಲು ಇಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ವಿದ್ಯುತ್ ವೈರ್ ಕಟ್ಟಾಗಿ ಬಿದ್ದಿದ್ದನ್ನು ಗಮನಿಸದೆ ಇರುವುದರಿಂದ ಈ ಅವಘಡ ಸಂಭವಿಸಿದೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಳಿಹಾಳ ಗ್ರಾಮದ ಬಾಲಕ ಎರಡು ವರ್ಷಗಳಿಂದ ಹಾಸ್ಟೆಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸದಲಗಾ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.








