ಗುಂಡ್ಲುಪೇಟೆ: ತಂದೆ-ತಾಯಿಯ ಕಣ್ಣೆದುರೇ ವಿದ್ಯುತ್ ಶಾಕ್ ತಗುಲಿ ನಾಲ್ಕು ವರ್ಷದ ಹೆಣ್ಣು ಮಗುವೊಂದು ಮೃತಪಟ್ಟಿರುವ ಅತ್ಯಂತ ಕರುಣಾಜನಕ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಸಂಭವಿಸಿದೆ.
ಬಂಡೀಪುರದ ಕಾಡಂಚಿನ ಗ್ರಾಮವಾದ ಕಲೀಗೌಡನಹಳ್ಳಿಯಲ್ಲಿ ಈ ದುರಂತ ನಡೆದಿದೆ. ಗ್ರಾಮದ ನಿವಾಸಿಗಳಾದ ಪುಟ್ಟಮ್ಮ ಹಾಗೂ ಆನಂದ್ ದಂಪತಿಯ ಪುತ್ರಿ ಅದ್ವಿತಾ (4) ಮೃತಪಟ್ಟ ದುರ್ದೈವಿ.
ಮನೆಯಲ್ಲಿ ಗ್ರೈಂಡರ್ ಆನ್ ಮಾಡಲಾಗಿದ್ದ ವೇಳೆ ಮಗು ಆಕಸ್ಮಿಕವಾಗಿ ಅದನ್ನು ಮುಟ್ಟಿದೆ ಎನ್ನಲಾಗಿದೆ. ಈ ವೇಳೆ ಗ್ರೈಂಡರ್ನಿಂದ ತೀವ್ರವಾಗಿ ವಿದ್ಯುತ್ ಪ್ರವಹಿಸಿದ್ದರಿಂದ ಮಗು ಸ್ಥಳದಲ್ಲೇ ಕುಸಿದು ಬಿದ್ದಿದೆ. ತಂದೆ-ತಾಯಿಯ ಕಣ್ಣೆದುರೇ ಈ ಘಟನೆ ನಡೆದಿದ್ದು, ಮಗುವನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಕಣ್ಣಮುಂದೇ ಆಟವಾಡಿಕೊಂಡಿದ್ದ ಪುಟ್ಟ ಕಂದಮ್ಮ ಜವರಾಯನ ಪಾಲಾಗಿದ್ದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.








