ಶಿವಮೊಗ್ಗ: ಒಬ್ಬ ಅಧಿಕಾರಿಗೆ ಇರಬೇಕಾದ ಅತ್ಯುನ್ನತ ಗುಣ ಯಾವುದು? ನಿಯಮಗಳ ಪಾಲನೆಯೋ ಅಥವಾ ಸಮಯಕ್ಕೆ ತಕ್ಕಂತೆ ತೋರುವ ಜಾಣ್ಮೆಯೋ? ಸಾಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (BEO) ಸದಾನಂದ ಸ್ವಾಮಿ.ಸಿ ಅವರು ಇಂದು ತೋರಿರುವ ಮಾನವೀಯತೆ ಮತ್ತು ಸಮಯ ಪ್ರಜ್ಞೆ ಇವೆರಡನ್ನೂ ಮೀರಿದ್ದು. ಎದೆ ನೋವಿನಿಂದ ನರಳುತ್ತಿದ್ದ ಶಾಲಾ ಬಾಲಕನೊಬ್ಬನಿಗೆ ತಕ್ಷಣವೇ ಸ್ಪಂದಿಸಿ, ತಮ್ಮದೇ ಇಲಾಖಾ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಮೂಲಕ ಆತನ ಪ್ರಾಣ ರಕ್ಷಿಸಿ ಇಡೀ ಸಾರ್ವಜನಿಕ ವಲಯದ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ನೋವಿನ ಹಿನ್ನೆಲೆ, ಸಾಂತ್ವನದ ಜರ್ನಿ:
ಕೆಲವೇ ದಿನಗಳ ಹಿಂದಷ್ಟೇ ಸಾಗರ ತಾಲೂಕಿನ ಹಾಳಸಸಿ ಶಾಲೆಯ ಒಂದನೇ ತರಗತಿಯ ಮುಗ್ಧ ಬಾಲಕ ತ್ರಿಲೋಕ ಜೈನ್ ಎಂಬಾತ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಈ ಕರುಣಾಜನಕ ಘಟನೆಯಿಂದ ನೊಂದಿದ್ದ ಬಿಇಓ ಸದಾನಂದ ಸ್ವಾಮಿ.ಸಿ ಹಾಗೂ ಅವರ ಸಿಬ್ಬಂದಿ ವರ್ಗದವರು ಬುಧವಾರ ತ್ರಿಲೋಕ ಜೈನ್ ಅವರ ಮನೆಗೆ ಭೇಟಿ ನೀಡಿ, ಹೆತ್ತವರಿಗೆ ಸಾಂತ್ವನ ಹೇಳಿ ಭಾರವಾದ ಮನಸ್ಸಿನಿಂದ ಹಿಂತಿರುಗುತ್ತಿದ್ದರು.
ಹಾಗೆ ಮರಳುವಾಗ ಸಂಜೆ ವೇಳೆ ಮಾರ್ಗಮಧ್ಯದಲ್ಲಿದ್ದ ಬ್ಯಾಕೋಡು ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ಶಾಲೆಯಲ್ಲೇ ಎದುರಾದ ಮತ್ತೊಂದು ಆತಂಕ!
ಬಿಇಓ ಅವರು ಶಾಲಾ ಆವರಣಕ್ಕೆ ಕಾಲಿಡುತ್ತಿದ್ದಂತೆ ಅಲ್ಲಿ ಮತ್ತೊಂದು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆ ಶಾಲೆಯ ವಿದ್ಯಾರ್ಥಿಯಾದ ಏಕಾಂತ ಎಂಬಾತ ತನಗೆ ತೀವ್ರವಾಗಿ ‘ಎದೆ ನೋವು’ ಕಾಣಿಸಿಕೊಳ್ಳುತ್ತಿದೆ ಎಂದು ನರಳಾಡುತ್ತಿದ್ದ. ಇತ್ತೀಚೆಗಷ್ಟೇ ಪುಟ್ಟ ಮಗುವೊಂದನ್ನು ಹೃದಯಾಘಾತಕ್ಕೆ ಕಳೆದುಕೊಂಡಿದ್ದ ಬಿಇಓ ಅವರಿಗೆ ಈ ಪರಿಸ್ಥಿತಿಯ ಗಂಭೀರತೆ ತಕ್ಷಣವೇ ಅರ್ಥವಾಯಿತು.
ಆಂಬುಲೆನ್ಸ್ ಅಥವಾ ಪೋಷಕರಿಗಾಗಿ ಕಾಯುತ್ತಾ ಕಾಲಹರಣ ಮಾಡದ ಬಿಇಓ ಸದಾನಂದ ಸ್ವಾಮಿ, ತಕ್ಷಣವೇ ಕಾರ್ಯಪ್ರವೃತ್ತರಾದರು.
ಬಿಇಓ ವಾಹನವೇ ಆಯಿತು ಜೀವವಾಹಿನಿ!
ನೋವಿನಿಂದ ನರಳುತ್ತಿದ್ದ ವಿದ್ಯಾರ್ಥಿ ಏಕಾಂತನನ್ನು ತಕ್ಷಣವೇ ತಮ್ಮದೇ ಇಲಾಖಾ ಅಧಿಕೃತ ವಾಹನಕ್ಕೆ ಹತ್ತಿಸಿಕೊಂಡ ಬಿಇಓ ತಂಡ, ನೇರವಾಗಿ ಬ್ಯಾಕೋಡು ಸರ್ಕಾರಿ ಆಸ್ಪತ್ರೆಗೆ ಧಾವಿಸಿತು. ಅಲ್ಲಿ ಬಾಲಕನಿಗೆ ತುರ್ತು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಆದರೂ ಸಮಾಧಾನಗೊಳ್ಳದ ಬಿಇಓ, ಮಗುವಿನ ಸಂಪೂರ್ಣ ಸುರಕ್ಷತೆಗಾಗಿ ಅಲ್ಲಿಂದ ತುಮರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ತಜ್ಞ ವೈದ್ಯರ ಮೂಲಕ ಇಸಿಜಿ (ECG) ಪರೀಕ್ಷೆಯನ್ನು ಮಾಡಿಸಿದರು.
ಬಾಲಕನ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿ, ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ಧೃಢಪಡಿಸುವವರೆಗೂ ಬಿಇಓ ಸದಾನಂದ ಸ್ವಾಮಿ ಹಾಗೂ ಅವರ ತಂಡ ಆಸ್ಪತ್ರೆಯಲ್ಲೇ ಜೊತೆಗಿದ್ದು ಮಗುವಿಗೆ ಧೈರ್ಯ ತುಂಬಿತು. ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಯನ್ನು ಬ್ಯಾಕೋಡು ಹಾಸ್ಟೆಲ್ ಸಹಾಯಕ ಮಂಜಪ್ಪ ಹಾಗೂ ಪ್ರೌಢಶಾಲಾ ಶಿಕ್ಷಕ ಶ್ರೀಧರ ಅವರ ಜವಾಬ್ದಾರಿಗೆ ಒಪ್ಪಿಸಿ ಸುರಕ್ಷಿತವಾಗಿ ಕಳುಹಿಸಿಕೊಟ್ಟ ಬಳಿಕವೇ ಬಿಇಓ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಸಾಥ್ ನೀಡಿದ ಇಲಾಖಾ ತಂಡ ಮತ್ತು ವೈದ್ಯಕೀಯ ಸಿಬ್ಬಂದಿ:
ಈ ಇಡೀ ರಕ್ಷಣಾ ಕಾರ್ಯಾಚರಣೆಯಲ್ಲಿ ಬಿಇಓ ಅವರಿಗೆ ತಾಲೂಕು ದೈಹಿಕ ಶಿಕ್ಷಣಾಧಿಕಾರಿ (TPEO) ರಮೇಶ್, ಇಸಿಓ ದಿನೇಶ್, ವಿ.ಟಿ. ಸ್ವಾಮಿ, ಸಿಆರ್ಪಿ ಪ್ರಸನ್ನ, ಚಂದ್ರಪ್ಪ ಹಾಗೂ ಮಹಾಬಲೇಶ ಅವರು ಹೆಗಲಿಗೆ ಹೆಗಲು ಕೊಟ್ಟು ಸಾಥ್ ನೀಡಿದರು. ಹಾಗೆಯೇ ವಿಷಯ ತಿಳಿದ ತಕ್ಷಣವೇ ಅತ್ಯಂತ ವೇಗವಾಗಿ ಸ್ಪಂದಿಸಿ ಸೂಕ್ತ ಚಿಕಿತ್ಸೆ ನೀಡಿದ ಬ್ಯಾಕೋಡು ಹಾಗೂ ತುಮರಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರ ಕರ್ತವ್ಯ ನಿಷ್ಠೆಯೂ ಈ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಒಂದು ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದ ಶಿಕ್ಷಣ ಇಲಾಖೆಗೆ, ಮತ್ತೊಂದು ಮಗುವಿನ ಪ್ರಾಣ ಉಳಿಸಲು ಭಗವಂತನೇ ಕಳುಹಿಸಿಕೊಟ್ಟಂತೆ ಬಿಇಓ ತಂಡದ ಸಮಯಪ್ರಜ್ಞೆ ಕೆಲಸ ಮಾಡಿದೆ. “ಅಧಿಕಾರಿಗಳೆಂದರೆ ಕೇವಲ ಆದೇಶ ಮಾಡುವವರಲ್ಲ, ಜನರ ಕಷ್ಟಕ್ಕೆ ಕರಗುವ ಹೃದಯವಂತರು” ಎಂಬುದನ್ನು ಸಾಬೀತುಪಡಿಸಿದ ಸದಾನಂದ ಸ್ವಾಮಿ ಅವರ ಈ ಮಾನವೀಯ ಕಾರ್ಯ ಸಮಾಜಕ್ಕೆ ದೊಡ್ಡ ಮಾದರಿಯಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
‘ಸಾಗರ ತಹಶೀಲ್ದಾರ್ ಡಾ.ಪ್ರತಿಭಾ’ಗೆ ಗ್ರೇಡ್-2 ಹುದ್ದೆಯಿಂದ ಗ್ರೇಡ್-1 ಹುದ್ದೆಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ.ದೇವರಾಜನ್ ತಂಗುದೊರೈ ಸಸ್ಪೆಂಡ್








