ಶಿವಮೊಗ್ಗ: “ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿ ಪರಿಷ್ಕರಣೆ ಆಂದೋಲನದಲ್ಲಿ ಕಾಂಗ್ರೆಸ್ ಬೂತ್ ಮಟ್ಟದ ಅಧ್ಯಕ್ಷರು, ಬಿಎಲ್ಒಗಳು ಹಾಗೂ ಕಾರ್ಯಕರ್ತರು ಪ್ರಾಮಾಣಿಕವಾಗಿ ಜವಾಬ್ದಾರಿ ನಿರ್ವಹಿಸಬೇಕು. ಇದರಲ್ಲಿ ಆಸಕ್ತಿ ವಹಿಸದಿದ್ದರೆ ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊರನಡೆಯಿರಿ” ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕಲಗೋಡು ರತ್ನಾಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ‘ಬಂಗಾರಧಾಮ’ ಆವರಣದಲ್ಲಿ ಆಯೋಜಿಸಲಾಗಿದ್ದ ಮತದಾನ ಪರಿಷ್ಕರಣೆ ಜಾಗೃತಿ ಕುರಿತಾದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪ್ರಮುಖ ಮುಖಂಡರ ತುರ್ತು ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬಿಜೆಪಿಯಿಂದ ಕಾಂಗ್ರೆಸ್ ನಿರ್ಮೂಲನೆಯ ಸಂಚು!
ಸಭೆಯಲ್ಲಿ ಕಾರ್ಯಕರ್ತರನ್ನು ಎಚ್ಚರಿಸಿದ ಕಲಗೋಡು ರತ್ನಾಕರ್, “ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಯನ್ನು (SIR) ಬಿಜೆಪಿ ತನಗೆ ಪೂರಕವಾಗಿ ಬಳಸಿಕೊಳ್ಳಲು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದೆ. ಆ ಪಕ್ಷದ ರಾಷ್ಟ್ರೀಯ ಮುಖಂಡರಾದ ನಿತಿನ್ ನಬಿ ಅವರು ದೇಶದಲ್ಲಿ ಕಾಂಗ್ರೆಸ್ ನಿರ್ಮೂಲನೆ ಮಾಡುವ ಪಣ ತೊಟ್ಟಿದ್ದಾರೆ. ಈ ಹೊತ್ತಿನಲ್ಲಿ ನಮ್ಮ ಮುಖಂಡರು ಮತ್ತು ಕಾರ್ಯಕರ್ತರು ಇಚ್ಛಾಶಕ್ತಿ ಪ್ರದರ್ಶಿಸಿ, ಮನೆಮನೆಗೆ ತೆರಳಿ ಅರ್ಹ ಮತದಾರರ ಹೆಸರನ್ನು ಪಟ್ಟಿಗೆ ಸೇರಿಸದಿದ್ದರೆ ಪಕ್ಷದ ಅಸ್ತಿತ್ವಕ್ಕೇ ಭಾರಿ ಧಕ್ಕೆ ಉಂಟಾಗಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಹೊಸ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಬಳಸಿಕೊಂಡು ದೇಶದಲ್ಲಿ ಮುಂದಿನ 40 ವರ್ಷಗಳ ಕಾಲ ತಾವೇ ಅಧಿಕಾರ ನಡೆಸುವಂತೆ ವ್ಯವಸ್ಥೆಯನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳಲು ಬಿಜೆಪಿ ನಾಯಕರು ಯೋಚಿಸುತ್ತಿದ್ದಾರೆ. ನಾವು ಎಚ್ಚರ ತಪ್ಪಿದರೆ ಇತಿಹಾಸ ನಮಗೆ ಕ್ಷಮಿಸುವುದಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್ ಆದೇಶ ಪಾಲಿಸಿ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ ಮಾತನಾಡಿ, “ರಾಜ್ಯ ಹಾಗೂ ದೇಶದ ರಾಜಕೀಯ ಬೆಳವಣಿಗೆಗಳ ದೃಷ್ಟಿಯಿಂದ ಈ ಮತದಾರರ ಪಟ್ಟಿ ಅತ್ಯಂತ ನಿರ್ಣಾಯಕವಾಗಿದೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಮುಖ ನಾಯಕರಾದ ಬಿ.ಕೆ. ಹರಿಪ್ರಸಾದ್ ಅವರ ಕಟ್ಟುನಿಟ್ಟಿನ ಆದೇಶದಂತೆ, ಯಾವುದೇ ಒಬ್ಬ ಅರ್ಹ ಮತದಾರನೂ ಈ ಹೊಸ ಪಟ್ಟಿಯಿಂದ ವಂಚಿತನಾಗಬಾರದು. ಪ್ರತಿಯೊಬ್ಬ ಕಾರ್ಯಕರ್ತನು ಇದನ್ನು ವೈಯಕ್ತಿಕ ಹೊಣೆಗಾರಿಕೆ ಎಂದು ಭಾವಿಸಿ ವಿಶೇಷ ಕಾಳಜಿ ವಹಿಸಬೇಕು” ಎಂದು ಕರೆ ನೀಡಿದರು.
ಪ್ರಮುಖರ ಉಪಸ್ಥಿತಿ
ಈ ಪ್ರಮುಖ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಭೂಪಾಲ, ತಾಲೂಕು ಸಮಿತಿ ಅಧ್ಯಕ್ಷ ಜೈಶೀಲಗೌಡ ಅಂಕರವಳ್ಳಿ, ಪಕ್ಷದ ಪ್ರಮುಖ ಮುಖಂಡರಾದ ತಬಲಿ ಬಂಗಾರಪ್ಪ, ಗಣಪತಿ ಹುಲ್ತಿಕೊಪ್ಪ, ಕಲ್ಲಂಬಿ ಹಿರಿಯಣ್ಣ, ಪ್ರಭು ಶಿಗ್ಗಾ, ಸುರೇಶ್ ಬಿಳವಾಣಿ, ಶಿವಮೂರ್ತಿ, ಸುನಿಲಗೌಡ, ಜಗದೀಶ್ ಕುಪ್ಪೆ, ಪ್ರಕಾಶ್ ಹಳೇಸೊರಬ ಹಾಗೂ ನೆಹರೂ ಕೊಡಕಣಿ ಸೇರಿದಂತೆ ತಾಲೂಕಿನ ನೂರಾರು ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ; ರಾಘವೇಂದ್ರ ಜಂಗಿನಕೊಪ್ಪ, ಸೊರಬ
‘ಸಾಗರ ತಹಶೀಲ್ದಾರ್ ಡಾ.ಪ್ರತಿಭಾ’ಗೆ ಗ್ರೇಡ್-2 ಹುದ್ದೆಯಿಂದ ಗ್ರೇಡ್-1 ಹುದ್ದೆಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ
ರಾಜ್ಯದ ‘232 ತಹಶೀಲ್ದಾರ್’ಗಳಿಗೆ ಗ್ರೇಡ್-1 ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶ








