ಘಾಜಿಯಾಬಾದ್ನ ಕುಟುಂಬವೊಂದರ ಐವರು ಸದಸ್ಯರ ಮೇಲೆ ‘ಗ್ಯಾಂಗ್ಸ್ಟರ್ ಕಾಯ್ದೆ’ಯನ್ನು ದುರುಪಯೋಗಪಡಿಸಿಕೊಂಡಿರುವ ಗಂಭೀರ ಲೋಪಗಳನ್ನು ಎತ್ತಿ ತೋರಿಸಿರುವ ಅಲಹಾಬಾದ್ ಹೈಕೋರ್ಟ್, ಅಧಿಕಾರಿಗಳು ತಮ್ಮ ವರ್ಗಾವಣೆ, ಹುದ್ದೆ ಮತ್ತು ಬಡ್ತಿಯ ಆಸೆಗಾಗಿ ಸಂವಿಧಾನಕ್ಕಿಂತ ಆಡಳಿತ ವ್ಯವಸ್ಥೆಗೆ (Establishment) ಹೆಚ್ಚು ನಿಷ್ಠರಾಗಿದ್ದಾರೆ ಎಂದು ಕಠಿಣ ಅವಲೋಕನ ಮಾಡಿದೆ.
ರಾಜ್ಯದ ಆಡಳಿತ ಯಂತ್ರವು ಆಡಳಿತಾರೂಢ ವ್ಯವಸ್ಥೆಗೆ ಅಲ್ಲ, ಬದಲಾಗಿ ಕಾನೂನಿಗೆ ಮತ್ತು ಸಂವಿಧಾನಕ್ಕೆ ಉತ್ತರದಾಯಿಯಾಗಿರಬೇಕು ಎಂದು ಪ್ರತಿಪಾದಿಸಿದ ನ್ಯಾಯಮೂರ್ತಿ ವಿನೋದ್ ದಿವಾಕರ್ ಅವರ ಏಕಸದಸ್ಯ ಪೀಠ, “ವರ್ಗಾವಣೆ-ಪೋಸ್ಟಿಂಗ್ ಆರ್ಥಿಕತೆಯ ಬಗ್ಗೆ ಚೆನ್ನಾಗಿ ಅರಿತಿರುವ ಫೀಲ್ಡ್ ಅಧಿಕಾರಿಗಳು, ತಮ್ಮ ರಾಜಕೀಯ ಮೇಲಧಿಕಾರಿಗಳನ್ನು ಮೆಚ್ಚಿಸಲು ತಮ್ಮ ನಡವಳಿಕೆಯನ್ನು ಸರಿಹೊಂದಿಸಿಕೊಳ್ಳುತ್ತಾರೆ. ಯಾರು ನಿಷ್ಠಾವಂತರು ಎಂದು ಪರಿಗಣಿಸಲ್ಪಡುತ್ತಾರೋ, ಅವರಿಗೆ ಇಷ್ಟವಾದ ಹುದ್ದೆಗಳ ಬಹುಮಾನ ಸಿಗುತ್ತದೆ” ಎಂದು ಹೇಳಿದೆ.
2023 ರಲ್ಲಿ ಘಾಜಿಯಾಬಾದ್ನ ನಂದಗ್ರಾಮ್ ಪೊಲೀಸ್ ಠಾಣೆಯಲ್ಲಿ ಉತ್ತರ ಪ್ರದೇಶ ಗ್ಯಾಂಗ್ಸ್ಟರ್ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ದಾಖಲಾದ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಿ ಜೂನ್ 3 ರಂದು ಹೊರಡಿಸಿದ ಆದೇಶದಲ್ಲಿ ಪೀಠವು, “ಅಧಿಕಾರಿಗಳ ಹುಮ್ಮಸ್ಸಿನಿಂದಾಗಿ ಎಫ್ಐಆರ್ಗಳನ್ನು ದುರುದ್ದೇಶದಿಂದ ದಾಖಲಿಸಲಾಗುತ್ತದೆ ಅಥವಾ ಹತ್ತಿಕ್ಕಲಾಗುತ್ತದೆ, ಮತ್ತು ತಡೆಗಟ್ಟುವ ಬಂಧನ ನಿಬಂಧನೆಗಳನ್ನು ಮನಬಂದಂತೆ ಬಳಸಲಾಗುತ್ತದೆ. ನ್ಯಾಯಾಲಯದ ಆದೇಶಗಳನ್ನು ಮೇಲ್ನೋಟಕ್ಕೆ ಪಾಲಿಸಿದಂತೆ ತೋರಿದರೂ, ಅವುಗಳ ಮೂಲ ಉದ್ದೇಶವನ್ನೇ ನಾಶಪಡಿಸಲಾಗುತ್ತದೆ” ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ, ಆರೋಪಿಗಳಲ್ಲಿ ಒಬ್ಬರಾದ ಮಹಿಳೆಯೊಬ್ಬರು ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಉಳಿಯಬೇಕಾಯಿತು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಭೂಮಿ ಖರೀದಿಗೆ ಸಂಬಂಧಿಸಿದ ಹಣಕಾಸಿನ ವಹಿವಾಟಿನ ವಿಷಯದಲ್ಲಿ 2022 ರಲ್ಲಿ ಆ ಕುಟುಂಬದ ಮೇಲೆ ಎರಡು ಎಫ್ಐಆರ್ಗಳು ದಾಖಲಾಗಿದ್ದವು. ಆರೋಪಿಗಳು ದೂರುದಾರರಿಗೆ ಚೆಕ್ಗಳನ್ನು ನೀಡಿದ್ದು, ವಂಚನೆ ಮತ್ತು ಅಕ್ರಮದ ಆರೋಪಗಳನ್ನು ಎದುರಿಸುತ್ತಿದ್ದರು. ಒಂದು ವರ್ಷದ ನಂತರ ಪೊಲೀಸ್ ಮತ್ತು ಆಡಳಿತವು ಅವರ ಮೇಲೆ ಗ್ಯಾಂಗ್ಸ್ಟರ್ ಕಾಯ್ದೆಯನ್ನು ಹೇರಿತು.
ಚಾರ್ಜ್ಶೀಟ್ ಪರಿಶೀಲಿಸಿದ ನಂತರ, “ಜೈಲಿಗೆ ಕಳುಹಿಸಲಾದ ಮೂವರು ಆರೋಪಿಗಳ ವಿರುದ್ಧ ಗ್ಯಾಂಗ್ಸ್ಟರ್ ಕಾಯ್ದೆಯ ಅಂಶಗಳನ್ನು ಪೂರೈಸುವ ಯಾವುದೇ ಆರೋಪಗಳಿಲ್ಲ” ಎಂದು ನ್ಯಾಯಾಲಯ ಹೇಳಿದೆ. “ಆರೋಪಿಗಳು ವಂಚನೆ ಮತ್ತು ಅಕ್ರಮದ ಅಪರಾಧಗಳನ್ನು ಮಾಡಿರಬಹುದು, ಆದರೆ ಅದನ್ನು ‘ಸಂಘಟಿತ ಗ್ಯಾಂಗ್’ ನಡೆಸುತ್ತಿದೆ ಎಂದು ಪರಿಗಣಿಸಲಾಗುವುದಿಲ್ಲ” ಎಂದು ನ್ಯಾಯಾಲಯ ತೀರ್ಪು ನೀಡಿದೆ.
”ಸಾರ್ವಜನಿಕ ಶಾಂತಿಗೆ ಭಂಗ ತರುವ ಅಥವಾ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಹಿಂಸೆ, ಬೆದರಿಕೆ ಅಥವಾ ಬಲವಂತವನ್ನು ಬಳಸಲಾಗಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಗಳು ಇಲ್ಲ” ಎಂದು ಅದು ತಿಳಿಸಿದೆ.
ನ್ಯಾಯಾಲಯವು ತನ್ನ ಆದೇಶದಲ್ಲಿ, “ಉತ್ತರ ಪ್ರದೇಶವು ಐತಿಹಾಸಿಕವಾಗಿ ರಾಜಕೀಯ ಪ್ರಾಬಲ್ಯದ ಕೇಂದ್ರವಾಗಿದೆ. ಆಡಳಿತ ಯಂತ್ರವು ಸತತ ಆಡಳಿತಗಳ ಅಡಿಯಲ್ಲಿ ಆಳವಾದ ರಾಜಕೀಯ ನುಸುಳುವಿಕೆಗೆ ಒಳಗಾಗಿದೆ. ಅಧಿಕಾರಿಗಳ ಒಂದು ಭಾಗವು ಕಾನೂನಿನ ಆಡಳಿತವನ್ನು ಸಾಂವಿಧಾನಿಕ ಬಾಧ್ಯತೆಯಾಗಿ ನೋಡದೆ, ಕಾರ್ಯಾಚರಣೆಯ ಅನಾನುಕೂಲವೆಂದು ಭಾವಿಸುತ್ತದೆ. ಎನ್ಕೌಂಟರ್ ಹತ್ಯೆಗಳು ಮತ್ತು ತಮಗೆ ಒಗ್ಗದ ವ್ಯಕ್ತಿಗಳ ಮೇಲೆ ಗ್ಯಾಂಗ್ಸ್ಟರ್ ಕಾಯ್ದೆಯ ಆಯ್ದ ಬಳಕೆ ನ್ಯಾಯಾಂಗದ ಗಮನ ಸೆಳೆದಿದೆ” ಎಂದು ಪೀಠ ಗಮನಿಸಿದೆ.
ಕನ್ಪುರದ ಬಿಕ್ರು ಗ್ರಾಮದಲ್ಲಿ ಗ್ಯಾಂಗ್ಸ್ಟರ್ ವಿಕಾಸ್ ದುಬೆ ನಡೆಸಿದ ದಾಳಿಯಲ್ಲಿ ಎಂಟು ಪೊಲೀಸರ ಹತ್ಯೆಯ ಘಟನೆಯನ್ನು ಉಲ್ಲೇಖಿಸಿದ ನ್ಯಾಯಪೀಠ, “ಆ ಕಾರ್ಯಾಚರಣೆಯ ಮೇಲ್ವಿಚಾರಣೆಯ ಹೊಣೆ ಹೊತ್ತಿದ್ದ ಪೊಲೀಸ್ ಅಧಿಕಾರಿಗೆ, ವಿಚಾರಣೆಯ ನಂತರ ಕೇವಲ ಒಂದು ಔಪಚಾರಿಕ ಎಚ್ಚರಿಕೆಯಷ್ಟೇ ನೀಡಲಾಯಿತು. ಈ ಸಾಂಸ್ಥಿಕ ದಂಡಮುಕ್ತತೆಯ ಸಂಸ್ಕೃತಿಯು ಅಧಿಕಾರದಲ್ಲಿರುವವರನ್ನು ಜವಾಬ್ದಾರರನ್ನಾಗಿ ಮಾಡುವುದಿಲ್ಲ” ಎಂದು ಹೇಳಿದೆ.
”ಗೃಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಕೆಲವು ಅಧಿಕಾರಿಗಳು ವಾಸ್ತವದಲ್ಲಿ ತಮ್ಮ ಸ್ವಂತ ಹಿತಾಸಕ್ತಿಗಳನ್ನು ಪೂರೈಸುವ ಕೊಂಡಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಗೃಹ ಇಲಾಖೆಯು ತನ್ನ ಅಧಿಕಾರಿಗಳ ಸೂಕ್ತತೆಯನ್ನು ಸ್ವತಂತ್ರವಾಗಿ ಮೌಲ್ಯಮಾಪನ ಮಾಡಬೇಕು. ಸಾಂವಿಧಾನಿಕ ಆಡಳಿತವು ವ್ಯಕ್ತಿಗಳ ಅನುಕೂಲಕ್ಕಾಗಿ ಒತ್ತೆಯಾಳಾಗಬಾರದು ಎಂಬುದು ನ್ಯಾಯಾಂಗದ ಗಂಭೀರ ಎಚ್ಚರಿಕೆಯಾಗಿದೆ” ಎಂದು ಪೀಠ ತಿಳಿಸಿದೆ.








