ಮಂಡ್ಯ : ವಿಶ್ವಗುರು ಸಾಂಸ್ಕೃತಿಕ ನಾಯಕ, ಬಸವಣ್ಣರವರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುವಲ್ಲಿ ನಿರ್ಲಕ್ಷ್ಯ ಧೋರಣೆ ತೋರಿರುವ ತಾಲೂಕು ಆಡಳಿತದ ವಿರುದ್ಧ ಮದ್ದೂರು ತಾಲೂಕು ವೀರಶೈವ ಲಿಂಗಾಯಿತ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಮದ್ದೂರು ತಾಲೂಕು ಕಛೇರಿ ಆವರಣಕ್ಕೆ ಆಗಮಿಸಿದ ಹಲವು ಸಂಘ ಸಂಸ್ಥೆಗಳು ಪದಾಧಿಕಾರಿಗಳು ತಾಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಕಛೇರಿ ಮುಂಭಾಗದಲ್ಲೇ ಬಸವಣ್ಣ ರವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಪ್ರತ್ಯೇಕವಾಗಿ ಆಚರಣೆ ಮಾಡಿದರು.
ಇದೇ ವೇಳೆ ಪ್ರತಿಭಟನೆ ಉದ್ದೇಶಿಸಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಗೌರಿಶಂಕರ್ ಮಾತನಾಡಿ, ವಿಶ್ವಗುರು ಸಾಂಸ್ಕೃತಿಕ ನಾಯಕ, ಬಸವಣ್ಣರವರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುವಲ್ಲಿ ಮದ್ದೂರು ತಾಲೂಕು ಆಡಳಿತ ನಿರ್ಲಕ್ಷ್ಯ ಧೋರಣೆ ತೋರಿದೆ. ಬಸವ ಜಯಂತಿ ಆಚರಣೆ ಕುರಿತು ಯಾವುದೇ ಪೂರ್ವ ಭಾವಿ ಸಭೆ ನಡೆಸಿಲ್ಲ. ನಮ್ಮ ಸಮುದಾಯದ ಯಾವುದೇ ಸಂಘ, ಸಂಸ್ಥೆಗಳ ಗಮನಕ್ಕೂ ತರದೆ ತುಂಭಾ ಸರಳವಾಗಿ ಮತ್ತು ಉಡಾಫೆಯಾಗಿ ನಾಲ್ಕು ಗೋಡೆಗಳ ಮಧ್ಯೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾಟಾಚಾರದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಲಿಂಗಾಯಿತ ಸಮುದಾಯವು ನಾಡಿನಾದ್ಯಂತ ಮಠ ಮಾನ್ಯಗಳಿಂದ ವಿವಿಧೆಡೆ ತ್ರಿವಿಧ ದಾಸೋಹ ಮಾಡುವ ಮೂಲಕ ಸಮಾಜ ಸೇವೆಯನ್ನು ಮಾಡಿಕೊಂಡು ಬರುತ್ತಿದೆ. ಜಿಲ್ಲೆಯ 6 ತಾಲೂಕುಗಳಲ್ಲಿ ವಿಜ್ರಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಆದರೆ, ಮದ್ದೂರು ತಾಲೂಕಿನಲ್ಲಿ ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಿದೆ.
ತಾಲೂಕಿನಲ್ಲಿ ಅಂದಾಜು 25 ಸಾವಿರಕ್ಕೂ ಹೆಚ್ಚು ಲಿಂಗಾಯತ ಧರ್ಮದ ಜನತೆ ಇದ್ದೇವೆ. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ತಾಲೂಕು ಆಡಳಿತ ಒಂದು ಪೂರ್ವಭಾವಿ ಸಭೆ ನಡೆಸಿ ಬಸವಣ್ಣ ರವರ ಜಯಂತಿ ಕಾರ್ಯಕ್ರಮವನ್ನು ನಡೆಸಬೇಕಾಗಿತ್ತು. ಆ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲು ನಾವು ಸಹ ಕೈಜೋಡಿಸುತ್ತಿದ್ದೇವು. ಆದರೆ ಇದ್ಯಾವುದನ್ನು ಮಾಡದೇ ಕಾಟಾಚಾರದ ಕಾರ್ಯಕ್ರಮ ಆಯೋಜಿಸಲಾಗಿದೆ. ಕಳೆದ ಬಾರಿಯೂ ಸಹ ಇದೇ ರೀತಿ ಕಾರ್ಯಕ್ರಮ ನಡೆಸಲಾಗಿತ್ತು. ಆಗಲೂ ಸಹ ನಾವು ವಿರೋಧ ಮಾಡಿದ್ದೇವು. ಆಗ ಮನವೋಲಿಸಿ ಮತ್ತೋಮ್ಮೆ ಈ ರೀತಿ ಲೋಪವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ. ಈ ವರ್ಷವೂ ಜಯಂತಿ ಕಾರ್ಯಕ್ರಮವನ್ನು ಉಡಾಫೆಯಾಗಿ ಆಚರಣೆ ಮಾಡುತ್ತಿರುವುದು ಲಿಂಗಾಯಿತ ಧರ್ಮದ ಜನತೆಗೆ ಬೇಸರವಾಗುತ್ತಿದೆ ಎಂದರು.

ದೇಶದ ವಿವಿಧ ಮಹಾನ್ ನಾಯಕರುಗಳ ಜಯಂತಿ ಆಚರಣೆಗೂ ಮುನ್ನವೇ ಪೂರ್ವ ಭಾವಿ ಸಭೆಗಳನ್ನು ನಡೆಸಿ ತಮಟೆ, ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿದಂತೆ ಅತೀ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ವೇದಿಕೆ ಕಾರ್ಯಕ್ರಮ ಆಯೋಜಿಸಿ ಆಚರಣೆ ಮಾಡಲಾಗುತ್ತದೆ. ಆದರೆ, ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆಯನ್ನು ಕಾಟಾಚಾರದ ಕಾರ್ಯಕ್ರಮವಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಾಡುತ್ತಿರುವುದು ಎಷ್ಟು ಸರಿ ಎಂದು ವಿ.ಬಿ.ಮಂಜುನಾಥ್ ತಾಲೂಕು ಆಡಳಿತವನ್ನು ಪ್ರಶ್ನಿಸಿದರು.
ಇನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ಕಳೆದ ವರ್ಷ ನಡೆದ ಬಸವಣ್ಣನವರ ಜಯಂತಿ ಕಾರ್ಯಕ್ರಮಕ್ಕಿಂತ ಈ ಬಾರಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಕಳೆದ ವರ್ಷ ನಡೆದ ಘಟನೆ ಬಗ್ಗೆ ನಮ್ಮ ಸಿಬ್ಬಂದಿ ಸರಿಯಾದ ಮಾಹಿತಿ ನೀಡದ ಕಾರಣ ನನಗೆ ಈ ಬಗ್ಗೆ ತಿಳಿದಿರಲಿಲ್ಲ. ಮುಂದೆಂದೂ ಈ ರೀತಿ ಲೋಪವಾಗದಂತೆ ಮತ್ತು ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈ ಬಿಟ್ಟು ತಾಲೂಕು ಆಡಳಿತದ ವತಿಯಿಂದ ನಡೆದ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಟನಾಕಾರರು ಭಾಗವಹಿಸಿದರು.
ಮದ್ದೂರು ವೀರಶೈವ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಹೇಶ್, ನಂದೀಶ್, ಗಿರೀಶ್, ಪಿ.ರಾಜಶೇಖರ್, ಗಂಗಾಧರ್, ನವೀನ್, ಗುರುಮಲೇಶ್, ತ್ರಿವೇಣಿ, ಸಿದ್ದಮ್ಮ, ರಶ್ಮಿ, ಕವಿತ, ಬಸವರಾಜು, ಮಹಾದೇವಸ್ವಾಮಿ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
JOB FAIR: ನಾಳೆ ಮಂಡ್ಯದ ಮದ್ದೂರಿನಲ್ಲಿ ‘ಬೃಹತ್ ಉದ್ಯೋಗ ಮೇಳ’: 5,000ಕ್ಕೂ ಹೆಚ್ಚು ಉದ್ಯೋಗಾವಕಾಶ








