ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗಗಳ ಸಮಗ್ರ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ಇದಕ್ಕಾಗಿ ವಿವಿಧ ಇಲಾಖೆಗಳಿಂದ ನೂರಾರು ಕೋಟಿ ರೂಪಾಯಿಗಳ ಅನುದಾನ ಈಗಾಗಲೇ ಬಿಡುಗಡೆಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರದ ಚಿತ್ರಣವನ್ನೇ ಬದಲಿಸುವಂತಹ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದರು.
ಪ್ರಮುಖ ಯೋಜನೆಗಳು ಮತ್ತು ಅನುದಾನದ ವಿವರ:
- ಹೈಟೆಕ್ ರಂಗಮಂದಿರ: ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸೂಕ್ತ ವೇದಿಕೆಯ ಕೊರತೆ ನೀಗಿಸಲು ₹4.80 ಕೋಟಿ ವೆಚ್ಚದಲ್ಲಿ 900 ರಿಂದ 1000 ಆಸನಗಳ ಸಾಮರ್ಥ್ಯವಿರುವ ಅತ್ಯಾಧುನಿಕ ರಂಗಮಂದಿರ ನಿರ್ಮಿಸಲಾಗುವುದು. ಇದರ ಟೆಂಡರ್ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ.
- ಗಣಪತಿ ಕೆರೆ ಪಾರ್ಕ್: ಗಣಪತಿ ಕೆರೆಯ ಮೇಲ್ಭಾಗದಲ್ಲಿ ಸಾರ್ವಜನಿಕರು ಮತ್ತು ಮಕ್ಕಳಿಗಾಗಿ ₹4 ಕೋಟಿ ವೆಚ್ಚದಲ್ಲಿ ಸುಂದರವಾದ ಉದ್ಯಾನವನ (High Quality Park) ನಿರ್ಮಾಣವಾಗಲಿದೆ. ಇಲ್ಲಿ ಮ್ಯೂಸಿಕ್ ಸಿಸ್ಟಮ್ ಹಾಗೂ ವಾಕಿಂಗ್ ಪಾತ್ಗಳ ಸೌಲಭ್ಯವಿರಲಿದೆ.
- ಫುಡ್ ಕೋರ್ಟ್ ಅಭಿವೃದ್ಧಿ: ಸಾಗರಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಆಸ್ಪತ್ರೆ ಹತ್ತಿರ, ಬಸ್ ಸ್ಟ್ಯಾಂಡ್ ಬಳಿ ಹಾಗೂ ಧ್ವಜಸ್ತಂಭದ ಬಳಿ ಒಟ್ಟು ₹75 ಲಕ್ಷ ವೆಚ್ಚದಲ್ಲಿ ಮೂರು ಫುಡ್ ಕೋರ್ಟ್ಗಳನ್ನು ನಿರ್ಮಿಸಲಾಗುತ್ತಿದೆ.
- ಕೆಎಸ್ಆರ್ಟಿಸಿ ಬಸ್ ನಿಲ್ದಾಣ: ಸಾಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ನವೀಕರಣ ಮತ್ತು ಆಧುನೀಕರಣಕ್ಕಾಗಿ ₹2 ಕೋಟಿ ಮೀಸಲಿಡಲಾಗಿದೆ.
- ನೀಲಿ ನಕ್ಷೆಯ ಇತರ ಯೋಜನೆಗಳು:
- ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ (CMIDF) ₹50 ಕೋಟಿ.
- ಪ್ರವಾಹ ಪರಿಹಾರ ನಿಧಿಯಡಿ ₹18 ಕೋಟಿ.
- ನೀರಾವರಿ ಇಲಾಖೆಯಿಂದ ಕಾಲುಸಂಕಗಳ ನಿರ್ಮಾಣಕ್ಕೆ ₹42 ಕೋಟಿ.
- ಮೀನು ಮಾರುಕಟ್ಟೆಯ ಅಭಿವೃದ್ಧಿ ಹಾಗೂ ಸುತ್ತಮುತ್ತಲಿನ ಸ್ವಚ್ಛತೆಗಾಗಿ ₹1.29 ಕೋಟಿ.
- ಸಾಗರ ಪಟ್ಟಣದ ಪಶು ಆಸ್ಪತ್ರೆ ಅಭಿವೃದ್ಧಿಗೆ ₹50 ಲಕ್ಷ ಹಾಗೂ ಮಹಿಳಾ ಕಾಲೇಜಿನಲ್ಲಿ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ₹1 ಕೋಟಿ.
ಸಾಗರ ಪ್ರವಾಸಿ ತಾಣವಾಗಿ ಅಭಿವೃದ್ಧಿ:
”ಸಿಗಂದೂರು, ಜೋಗ್ ಜಲಪಾತ, ಶ್ರೀಧರ ಆಶ್ರಮ ಹಾಗೂ ವರದಾಪುರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಸಾಗರವನ್ನು ಒಂದು ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸಲು ರಸ್ತೆ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ನಗರೋತ್ಥಾನ ಯೋಜನೆಯಡಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ರಸ್ತೆಗಳ ಡಾಂಬರೀಕರಣಕ್ಕೆ ಕೋಟ್ಯಂತರ ರೂಪಾಯಿ ಬಿಡುಗಡೆಯಾಗಿದೆ” ಎಂದು ಶಾಸಕರು ಮಾಹಿತಿ ನೀಡಿದರು.
ಅಣುಸ್ಥಾವರ ನಿರ್ಮಾಣಕ್ಕೆ ಅದೇಶವಾಗಿಲ್ಲ
ಸಾಗರ ತಾಲೂಕಿನಲ್ಲಿ ಅಣುಸ್ಥಾವರ ನಿರ್ಮಾಣದ ವಿಚಾರ ಗಮನಕ್ಕೆ ಬಂದಿದೆ. ಅಣುಸ್ಥಾವರ ನಿರ್ಮಾಣಕ್ಕೆ ಯಾವುದೇ ಅದೇಶ ಆಗಿಲ್ಲ. ಕೇವಲ ಜಮೀನು ಅಲ್ಲಿ ಸಿಗಬಹುದು, ಇಲ್ಲಿ ಸಿಗಬಹುದು ಎನ್ನುವ ವರದಿಯನ್ನು ತಹಶಿಲ್ದಾರರು ನೀಡಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗಬಾರದು ಎಂಬುದಾಗಿ ಹೇಳಿದರು.
ಸೊರಬ ರಸ್ತೆ ಅಗಲೀಕರಣಕ್ಕೆ ಮುಹೂರ್ತ ಫಿಕ್ಸ್
ಸೊರಬ ರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಲೀಕರು ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅಭಿನಂದನೆ
ಇದೇ ಸಂದರ್ಭದಲ್ಲಿ ನಿನ್ನೆ ಪ್ರಕಟವಾದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಗರ ತಾಲ್ಲೂಕಿನ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಶಿಕ್ಷಕರಿಗೆ, ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಶ್ಲಾಘಿಸಿದರು.








