ರಾಜಸ್ಥಾನದ ದಂಪತಿಯೊಬ್ಬರು ಕೇರಳಕ್ಕೆ ಹೋಗಲು ಬುಕ್ ಮಾಡಿದ್ದ ವಿಮಾನವನ್ನು, ರಾಜಧಾನಿ ಎಕ್ಸ್ಪ್ರೆಸ್ ರೈಲು ತಡವಾದ ಕಾರಣ ತಪ್ಪಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಮಾರು ಒಂಬತ್ತು ವರ್ಷಗಳ ನಂತರ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ. ಆರ್ಥಿಕ ನಷ್ಟ ಮತ್ತು ಮಾನಸಿಕ ಕಿರುಕುಳಕ್ಕಾಗಿ ರೈಲ್ವೆ ಇಲಾಖೆಯು ಸುಮಾರು 69,000 ರೂಪಾಯಿ ಪರಿಹಾರವನ್ನು ನೀಡಬೇಕೆಂದು ಆಯೋಗ ಆದೇಶಿಸಿದೆ.
ನ್ಯಾಯಾಂಗ ಸದಸ್ಯ ನಿರ್ಮಲ್ ಸಿಂಗ್ ಮೆಡ್ವಾಲ್ ಮತ್ತು ಸದಸ್ಯ ಕರುಣಾ ಜೈನ್ ಅವರನ್ನೊಳಗೊಂಡ ಪೀಠವು, ಪಶ್ಚಿಮ ಮಧ್ಯ ರೈಲ್ವೆಯು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ಕೋಟಾ ನಿವಾಸಿ ಅನಿಲ್ ಕುಮಾರ್ ರಾಣಾ ಅವರ ಪರವಾಗಿ ಆಗಸ್ಟ್ 2023ರಲ್ಲಿ ಜಿಲ್ಲಾ ಗ್ರಾಹಕ ಆಯೋಗ ನೀಡಿದ್ದ ಆದೇಶವನ್ನು ರಾಜ್ಯ ಆಯೋಗ ಎತ್ತಿಹಿಡಿದಿದೆ. ರೈಲು ತಡವಾಗಿರುವುದಕ್ಕೆ ಸೂಕ್ತ ಕಾರಣ ನೀಡಲು ರೈಲ್ವೆ ವಿಫಲವಾಗಿದ್ದು, ಪ್ರಯಾಣಿಕರಿಗೆ ಉಂಟಾದ ಪರಿಣಾಮಗಳಿಗೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
”ರೈಲ್ವೆ ಇಲಾಖೆಯು ದೆಹಲಿವರೆಗಿನ ಪ್ರಯಾಣಕ್ಕಾಗಿ ಪೂರ್ಣ ದರವನ್ನು ಸ್ವೀಕರಿಸಿ, ಅದಕ್ಕೆ ತಕ್ಕಂತೆ ಸೇವೆಯನ್ನು ಒದಗಿಸುವುದಾಗಿ ಭರವಸೆ ನೀಡಿತ್ತು. ಆದರೆ, ಆ ಸೇವೆಯಲ್ಲಿನ ಲೋಪದಿಂದಾಗಿ ದೂರುದಾರರು ತಮ್ಮ ಕನೆಕ್ಟಿಂಗ್ ಫ್ಲೈಟ್ (ಸಂಪರ್ಕ ವಿಮಾನ) ತಪ್ಪಿಸಿಕೊಂಡಿದ್ದಾರೆ” ಎಂದು ಮೇ 27ರಂದು ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ.
ರೈಲ್ವೆಯ ಸಮರ್ಥನೆಯನ್ನು ತಳ್ಳಿಹಾಕಿದ ಆಯೋಗ
ರೈಲು ನಾಲ್ಕು ಗಂಟೆ ತಡವಾಗಿದ್ದಕ್ಕೆ ನಿಖರವಾದ ಕಾರಣವನ್ನು ವಿವರಿಸುವ ಯಾವುದೇ ಮನವರಿಕೆಯಾಗುವಂತಹ ದಾಖಲೆಗಳನ್ನು ರೈಲ್ವೆ ಸಲ್ಲಿಸಿಲ್ಲ ಎಂದು ರಾಜ್ಯ ಆಯೋಗ ಗಮನಿಸಿದೆ. ಅಪಘಾತಗಳು, ಭಯೋತ್ಪಾದನೆ, ಪ್ರವಾಹ ಅಥವಾ ಭೂಕಂಪದಂತಹ ಅಸಾಮಾನ್ಯ ಸಂದರ್ಭಗಳಲ್ಲಿ ವಿಳಂಬವನ್ನು ಕ್ಷಮಿಸಬಹುದು, ಆದರೆ ಅಂತಹ ಸಂದರ್ಭಗಳನ್ನು ಅಧಿಕಾರಿಗಳು ಸಾಕ್ಷ್ಯಗಳೊಂದಿಗೆ ಸಾಬೀತುಪಡಿಸಬೇಕು ಎಂದು ಪೀಠ ಗಮನಿಸಿದೆ. ಪ್ರಸ್ತುತ ಪ್ರಕರಣದಲ್ಲಿ ಅಂತಹ ಯಾವುದೇ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ಆಯೋಗ ಹೇಳಿದೆ.
ಅಲ್ಲದೆ, ರೈಲು ತಡವಾಗುತ್ತಿದೆ ಎಂದು ತಿಳಿದಾಗ ಪ್ರಯಾಣಿಕರು ಅರ್ಧ ದಾರಿಯಲ್ಲಿ ರೈಲು ಬಿಟ್ಟು ಬೇರೆ ವಾಹನದಲ್ಲಿ ದೆಹಲಿಗೆ ಹೋಗಬೇಕಿತ್ತು ಎಂಬ ರೈಲ್ವೆಯ ವಾದವನ್ನು ಆಯೋಗವು ತಿರಸ್ಕರಿಸಿದೆ. ಪ್ರಯಾಣಿಕರು ಸಾಮಾನ್ಯವಾಗಿ ರೈಲ್ವೆಯ ವೇಳಾಪಟ್ಟಿ ಮತ್ತು ಭರವಸೆಗಳ ಮೇಲೆ ನಂಬಿಕೆ ಇಟ್ಟು ಕನೆಕ್ಟಿಂಗ್ ಫ್ಲೈಟ್ಗಳನ್ನು ಯೋಜಿಸುತ್ತಾರೆ ಎಂದು ಆಯೋಗ ತಿಳಿಸಿದೆ.
ಏನಾಗಿತ್ತು ಘಟನೆ?
ಅನಿಲ್ ಕುಮಾರ್ ರಾಣಾ ಮತ್ತು ಅವರ ಪತ್ನಿ ಅನಿತಾ ರಾಣಾ ಅವರು ಡಿಸೆಂಬರ್ 2017ರಲ್ಲಿ ಕೇರಳದ ತಿರುವನಂತಪುರಕ್ಕೆ ಪ್ರವಾಸ ಯೋಜಿಸಿದ್ದರು. ಅವರು 33,929 ರೂಪಾಯಿ ಮೌಲ್ಯದ ಏರ್ ಇಂಡಿಯಾ ಟಿಕೆಟ್ಗಳನ್ನು ಬುಕ್ ಮಾಡಿದ್ದರು. ದೆಹಲಿಗೆ ಸಮಯಕ್ಕೆ ಸರಿಯಾಗಿ ತಲುಪಲು ಕೋಟಾ-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಈ ರೈಲು ಬೆಳಿಗ್ಗೆ 6:55ಕ್ಕೆ ಹೊರಟು ಮಧ್ಯಾಹ್ನ 12:40ಕ್ಕೆ ದೆಹಲಿ ತಲುಪಬೇಕಿತ್ತು.
ಆದರೆ, ರಾಜಧಾನಿ ಎಕ್ಸ್ಪ್ರೆಸ್ ನಿಗದಿತ ಸಮಯಕ್ಕಿಂತ ನಾಲ್ಕು ಗಂಟೆ ತಡವಾಗಿ ಸಂಜೆ 4:50ಕ್ಕೆ ಹಜರತ್ ನಿಜಾಮುದ್ದೀನ್ ನಿಲ್ದಾಣ ತಲುಪಿತು. ದಂಪತಿ ವಿಮಾನ ನಿಲ್ದಾಣ ತಲುಪುವಷ್ಟರಲ್ಲಿ ವಿಮಾನ ತಪ್ಪಿಹೋಗಿತ್ತು. ಅನಿವಾರ್ಯವಾಗಿ ಅವರು ಅಂದು ರಾತ್ರಿ ವಿಮಾನ ನಿಲ್ದಾಣದಲ್ಲಿಯೇ ಕಳೆದು, ಮರುದಿನ 72,930 ರೂಪಾಯಿಗಳ ಹೆಚ್ಚಿನ ದರದಲ್ಲಿ ಹೊಸದಾಗಿ ವಿಮಾನದ ಟಿಕೆಟ್ಗಳನ್ನು ಬುಕ್ ಮಾಡಬೇಕಾಯಿತು. ಇದರೊಂದಿಗೆ ಹೋಟೆಲ್ ವೆಚ್ಚ, ಮಾನಸಿಕ ವೇದನೆ ಮತ್ತು ಕಿರುಕುಳಕ್ಕಾಗಿ ಅವರು ಪರಿಹಾರ ಕೋರಿದ್ದರು.
ರೈಲ್ವೆಯ ವಾದವೇನಿತ್ತು?
ರೈಲು ವಿಳಂಬಕ್ಕೆ ಕಾರ್ಯಾಚರಣೆಯ, ತಾಂತ್ರಿಕ ಮತ್ತು ಸುರಕ್ಷತಾ ಕಾರಣಗಳು ಇರಬಹುದು ಎಂದು ರೈಲ್ವೆ ವಾದಿಸಿತ್ತು. ರೈಲು ಸಮಯವು ಖಚಿತವಾಗಿರುವುದಿಲ್ಲ ಎಂಬುದು ಪ್ರಯಾಣಿಕರಿಗೆ ತಿಳಿದಿರುತ್ತದೆ ಮತ್ತು ದಂಪತಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು ಎಂದು ರೈಲ್ವೆ ಹೇಳಿತ್ತು. ಅಲ್ಲದೆ, ಗ್ರಾಹಕ ವೇದಿಕೆಯು ಈ ಪ್ರಕರಣದ ವಿಚಾರಣೆಗೆ ನ್ಯಾಯವ್ಯಾಪ್ತಿ ಹೊಂದಿಲ್ಲ ಮತ್ತು ತಮ್ಮ ಸೇವೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ವಾದಿಸಿತ್ತು.
ನೀಡಲಾದ ಪರಿಹಾರ
ದಂಪತಿಗಳು ಭರಿಸಿದ ಹೆಚ್ಚುವರಿ ವಿಮಾನದ ದರದಿಂದ ಮೂಲ ಟಿಕೆಟ್ ದರವನ್ನು ಕಡಿತಗೊಳಿಸಿ, 39,001 ರೂಪಾಯಿಗಳನ್ನು ಹೆಚ್ಚುವರಿ ವಿಮಾನ ದರಕ್ಕಾಗಿ ನೀಡುವಂತೆ ಜಿಲ್ಲಾ ಗ್ರಾಹಕ ಆಯೋಗ ಆದೇಶಿಸಿತ್ತು. ಇದರೊಂದಿಗೆ:
ಮಾನಸಿಕ ವೇದನೆ ಮತ್ತು ಕಿರುಕುಳಕ್ಕಾಗಿ 20,000 ರೂಪಾಯಿ
ಹೋಟೆಲ್ ವೆಚ್ಚಕ್ಕಾಗಿ 5,000 ರೂಪಾಯಿ
ಕಾನೂನು ವೆಚ್ಚಕ್ಕಾಗಿ 5,000 ರೂಪಾಯಿ
ಒಟ್ಟು 69,001 ರೂಪಾಯಿಗಳನ್ನು ಪರಿಹಾರವಾಗಿ ನೀಡಲು ಆದೇಶಿಸಿದೆ.







