ಮೈಸೂರು : ಇತ್ತೀಚ್ಚಿಗೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನ ಕೆತ್ತನೆಗೆ ಬಳಸಲಾದ ಶಿಲೆಯ ಗಣಿಗಾರಿಕೆ ವೇಳೆ ಅನುಮತಿ ಇಲ್ಲದೆ ಗಣಿಗಾರಿಕೆ ಮಾಡಿದ್ದಕ್ಕಾಗಿ ಗುತ್ತಿಗೆದಾರ ಶ್ರೀನಿವಾಸ್ ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 80 ಸಾವಿರ ರೂ. ದಂಡ ವಿಧಿಸಿತ್ತು. ಆ ದಂಡವನ್ನು ಬಿಜೆಪಿಯಿಂದ ಕಟ್ಟಿಕೊಡುತ್ತೇವೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಮೈಸೂರು ತಾಲೂಕಿನ ಹಾರೋಹಳ್ಳಿ- ಗುಜ್ಜೆಗೌಡನಪುರ ಗ್ರಾಮದ ರಾಮದಾಸ್ ಅವರ ಜಮೀನಿನಲ್ಲಿ ಈ ಕಲ್ಲು ದೊರಕಿತ್ತು. ಈ ಕಲ್ಲನ್ನು ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆಗೆ ಶ್ರೀನಿವಾಸ್ ನೀಡಿದ್ದರು. ಕಲ್ಲಿನ ಗಣಿಗಾರಿಕೆ ವೇಳೆ ಅನುಮತಿ ಪಡೆದಿಲ್ಲ ಎಂದು ಗುತ್ತಿಗೆದಾರ ಶ್ರೀನಿವಾಸ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 80 ಸಾವಿರ ರೂ.ದಂಡ ವಿಧಿಸಿತ್ತು. ಆ ದಂಡವನ್ನು ಬಿಜೆಪಿಯಿಂದ ಕಟ್ಟಿ ಕೊಡುತ್ತೇವೆ ಎಂದರು.
ಈ ಮಧ್ಯೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀನಿವಾಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಿಂದ ಅನುಮತಿ ಪಡೆಯದೆ ಗಣಿಗಾರಿಕೆ ಮಾಡಿದ ಕಾರಣಕ್ಕೆ ಒಂದೂವರೆ ವರ್ಷದ ಹಿಂದೆಯೇ ದಂಡ ಕಟ್ಟಿದ್ದೇನೆ. ಆಗ ಈ ಕಲ್ಲು ರಾಮಲಲ್ಲಾ ವಿಗ್ರಹಕ್ಕೆ ಆಯ್ಕೆಯಾಗುತ್ತದೆ ಎಂಬುದೇ ಗೊತ್ತಿರಲಿಲ್ಲ ಎಂದರು. ರಾಮಲಲ್ಲಾ ಮೂರ್ತಿಗೆ ಈ ಕಲ್ಲು ಆಯ್ಕೆಯಾಗಿದ್ದು 6 ತಿಂಗಳ ಹಿಂದೆಯಷ್ಟೇ. ನಾನು ದಂಡ ಕಟ್ಟಿದ್ದು, 2022ರ ಜುಲೈನಲ್ಲಿ. ಆದ್ದರಿಂದ ರಾಮನ ಮೂರ್ತಿ ವಿಚಾರಕ್ಕೆ ದಂಡ ಕಟ್ಟಿಲ್ಲ. ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಬಂದಿದೆ ಎಂದರು.