ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಐದು ತಿಂಗಳು ಕಂತು ಕಟ್ಟಿಲ್ಲವೆಂದು ಮನೆಯಿಂದ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಹೊರ ಹಾಕಿದ್ದಾರೆ. ವಿಜಯಪುರದ ರಹಮತ್ ನಗರದ ಮುನಿರಾಜು ಕುಟುಂಬ ಈಗ ಬೀದಿಪಾಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ಮುನಿರಾಜು ಬೀದಿಯಲ್ಲಿ ನಿಂತು ಕಣ್ಣೀರಿಡುತ್ತಿದ್ದಾರೆ.
2021ರಲ್ಲಿ ಎಸ್ ಬಿ ಎಸ್ ಪಿ ಮೈಕ್ರೋ ಫೈನಾನ್ಸ್ ನಿಂದ 21 ಲಕ್ಷ ಸಾಲ ಪಡೆದಿದ್ದರು. ಅಂದಿನಿಂದ ಪ್ರತಿ ತಿಂಗಳು ಕಂತು ಕಟ್ಟುತ್ತಿದ್ದರು. 2025ರ ಜನವರಿಯಿಂದ ಇದುವರೆಗೆ ಐದು ತಿಂಗಳ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಪಡೆದ ಸಾಲದ ಕಂತಿನ ಹಣವನ್ನು ಕಟ್ಟಿಲ್ಲವೆಂದು ಕುಟುಂಬವನ್ನು ಬೀದಿಗೆ ತಳ್ಳಿ ಮೈಕ್ರೋ ಫೈನಾನ್ಸ್ ಕಂಪನಿಯೊಂದು ಬೀಗ ಹಾಕಿದ ಘಟನೆ ನಡೆದಿದೆ.
ಮನೆಯಲ್ಲಿದ್ದಂತ ವಸ್ತುಗಳನ್ನು ಎತ್ತಿಕೊಳ್ಳಲು ಬಿಡದೇ ಬೀಗ ಹಾಕಿ ಸೀಲ್ ಜಡಿದು ಅಮಾನವೀಯವಾಗಿ ನಡೆದುಕೊಂಡಿದೆ.
ಯಾವುದೇ ನೋಟಿಸ್ ನೀಡದೇ ಏಕಾಏಕಿ ಮನೆಯಿಂದ ಹೊರಹಾಕಿದ್ದಾರೆ ಎಂಬುದಾಗಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಜೊತೆ ಬೀದಿಯಲ್ಲಿ ಮುನಿರಾಜು ಕಣ್ಣೀರಿಡುತ್ತಿದ್ದಾರೆ.