ಬೆಂಗಳೂರು : ಆರೋಪ ಮುಕ್ತರಾದರೂ ತಮ್ಮನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳದ ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ( KS Eshwarappa ) ಮುನಿಸಿಕೊಂಡಿದ್ದಾರೆ.
ಅದೇ ಕಾಲಕ್ಕೆ ತಾವು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಲು ಅಡ್ಡಗಾಲು ಹಾಕುತ್ತಿರುವ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಈಶ್ವರಪ್ಪ ಕೆಂಡಾಮಂಡಲಗೊಂಡಿದ್ದಾರೆ.
ಕಳೆದ ಶುಕ್ರವಾರ ಮಂತ್ರಿ ಮಂಡಲ ವಿಸ್ತರಿಸಲು ಸಮಯ ನಿಗದಿಯಾಗಿದ್ದರೂ ಇದಕ್ಕಿದ್ದಂತೆ ಅದಕ್ಕೆ ಮಾಜಿ ಮುಖ್ಯಮಂತ್ರಿಗಳು ಅಡ್ಡಗಾಲು ಹಾಕಿದರು ಎಂಬುದು ಈಶ್ವರಪ್ಪ ಅವರ ಸಿಟ್ಟು ಎನ್ನಲಾಗಿದೆ.
ಮಂತ್ರಿ ಪದವಿಯಿಂದ ನನಗೇನೂ ಆಗಬೇಕಿಲ್ಲ.ಆದರೆ ರಾಜಕಾರಣದಿಂದ ಗೌರವಯುತ ನಿರ್ಗಮನಕ್ಕೆ ಅಣಿಯಾಗುತ್ತಿರುವ ತಮಗೆ ಅದಕ್ಕೂ ಮುನ್ನ ಆರೋಪಗಳಿಂದ ಮುಕ್ತಿ ಪಡೆದ ಸಮಾಧಾನ ಬೇಕಿದೆ. ತಮ್ಮ ವಿರುದ್ದದ ಆರೋಪದಿಂದ ಕಾನೂನು ಬದ್ದವಾಗಿ ಮುಕ್ತಿ ಸಿಕ್ಕಿರಬಹುದು.ಆದರೆ ಜನತಾ ನ್ಯಾಯಾಲಯದ ಮುಂದೆ ಹಾಜರಾಗಲು ತಮಗೆ ಮರಳಿ ಅಧಿಕಾರ ನೀಡಬೇಕಿತ್ತು.
ಆದರೆ ಹಲವಾರು ಬಾರಿ ತಮಗೆ ಮಂತ್ರಿ ಮಂಡಲ ವಿಸ್ತರಿಸುವ ಡೇಟು ಕೊಟ್ಟ ಸಿಎಂ ಬೊಮ್ಮಾಯಿ ( CM Bommai ) ಈಗ ಸುಮ್ಮನಿದ್ದಾರೆ. ಮಂತ್ರಿಗಿರಿಗೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ತಾವು ಸರ್ಕಾರಿ ಬಂಗಲೆ ತ್ಯಜಿಸಲು ಸಿದ್ಧರಾದರೂ ಬಸವರಾಜ ಬೊಮ್ಮಾಯಿ ಬೇಡ ಎಂದರು.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ಆರೋಪದಿಂದ ಮುಕ್ತರಾದ ಕೂಡಲೇ ನಿಮ್ಮನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದರು.
ಆದರೆ ತಾವು ಕೊಟ್ಟ ಮಾತನ್ನು ಈಡೇರಿಸಲಾಗದ ಸ್ಥಿತಿಯಲ್ಲಿ ಬೊಮ್ಮಾಯಿ ಇದ್ದಾರೆ.ನನ್ನನ್ನು ರಾಜಕೀಯವಾಗಿ ಮುಗಿಸಲು ಬಯಸಿರುವ ಮಾಜಿ ಮುಖ್ಯಮಂತ್ರಿ ತೆರೆಯ ಹಿಂದೆ ಆಡುತ್ತಲೇ ಇದ್ದಾರೆ.
ಇದು ದಶಕಗಳ ಕಾಲದಿಂದ ಪಕ್ಷ ಕಟ್ಟಿದ ತಮಗೆ ಆಗಿರುವ ದೊಡ್ಡ ಅವಮಾನ.ಈ ಅವಮಾನ ಸಹಿಸಿಕೊಳ್ಳುವುದು ನನಗೆ ಕಷ್ಟವಾಗುತ್ತಿದೆ ಎಂದು ಈಶ್ವರಪ್ಪ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.
ಈ ಅಸಮಾಧಾನದ ಕಾರಣಕ್ಕಾಗಿಯೇ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪಕ್ಕೆ ಗೈರಾಗಿರುವ ಈಶ್ವರಪ್ಪ,ಇಂದು ಬೆಂಗಳೂರಿಗೆ ವಾಪಸಾಗಿದ್ದಾರೆ. ನಾಳೆ ಈ ಕುರಿತು ಸುದ್ದಿಗೋಷ್ಟಿ ನಡೆಸಲಿರುವ ಈಶ್ವರಪ್ಪ. ತಮಗಾದ ಅವಮಾನದ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರವರೆಗೆ ದೂರು ಕೊಂಡೊಯ್ಯುವ ಸಾಧ್ಯತೆಗಳಿವೆ.