ಶಿವಮೊಗ್ಗ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ, ಅದರಲ್ಲೂ ವಿಶೇಷವಾಗಿ ಸ್ಥಳೀಯ ಮಟ್ಟದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಇಂದು ಅತಂತ್ರ ಸ್ಥಿತಿಗೆ ತಲುಪಿವೆ. ಕರ್ನಾಟಕ ಸರ್ಕಾರವು ಇತ್ತೀಚೆಗೆ ಅನುಮೋದಿಸಿರುವ ‘ನೂತನ ಜಾಹೀರಾತು ನೀತಿ – 2026’ ಸ್ಥಳೀಯ ಪತ್ರಿಕೆಗಳ ಪಾಲಿಗೆ ಮರಣಶಾಸನವಾಗಲಿದೆ ಎಂಬ ಭೀತಿ ಎದುರಾಗಿದೆ. ಈ ನೀತಿಯನ್ನು ಕೈಬಿಡಬೇಕು ಅಥವಾ ಮರುಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ತಾಲ್ಲೂಕು ಘಟಕವು ಎಸಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿದೆ.
ಇಂದಿನ ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮನವಿಯಲ್ಲಿ ಉಲ್ಲೇಖವೇನು?
1. ಅಸ್ತಿತ್ವಕ್ಕೆ ಎದುರಾದ ಅಪಾಯ: ಇತ್ತೀಚೆಗೆ ಸಿಎಂ ಸಿದ್ಧರಾಮಯ್ಯ ಮಂಡಿಸಿದಂತ ರಾಜ್ಯ ಬಜೆಟ್ ನಲ್ಲಿ ನೂತನ ಜಾಹೀರಾತು ನೀತಿಯನ್ನು ಘೋಷಿಸಿದ್ದರು. ಇದು ಯಥಾವತ್ತಾಗಿ ಜಾರಿಗೆ ಬಂದರೆ, ವರ್ಷಗಳಿಂದ ನಾಡು-ನುಡಿ ಮತ್ತು ಸ್ಥಳೀಯ ಸಮಸ್ಯೆಗಳ ಧ್ವನಿಯಾಗಿರುವ ಸಣ್ಣ ಪತ್ರಿಕೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ನೀತಿಯು ವಾಸ್ತವಕ್ಕೆ ದೂರವಾಗಿದ್ದು, ಸಣ್ಣ ಪತ್ರಿಕೆಗಳ ಮೇಲೆ ಹೊರಲಾರದ ಆರ್ಥಿಕ ಹೊರೆಯನ್ನು ಹೊರಿಸಲಿದೆ ಎಂಬುದಾಗಿದೆ.
2. ವಾಸ್ತವಕ್ಕೆ ದೂರವಾದ ನಿಯಮಗಳು: ಈ ಹೊಸ ನೀತಿಯಲ್ಲಿರುವ ಹಲವು ಅಂಶಗಳು ಪತ್ರಿಕಾ ರಂಗದ ನೈಜ ಸ್ಥಿತಿಗೆ ಹೊಂದಿಕೆಯಾಗುತ್ತಿಲ್ಲ. ಈಗಾಗಲೇ ಡಿಜಿಟಲ್ ಮಾಧ್ಯಮಗಳ ಸ್ಪರ್ಧೆ ಮತ್ತು ಹೆಚ್ಚುತ್ತಿರುವ ಕಾಗದದ ಬೆಲೆಯಿಂದಾಗಿ ಸಂಕಷ್ಟದಲ್ಲಿರುವ ಸ್ಥಳೀಯ ಮಾಧ್ಯಮಗಳಿಗೆ, ಸರ್ಕಾರದ ಈ ನಿರ್ಧಾರವು ಗಾಯದ ಮೇಲೆ ಬರೆ ಎಳೆದಂತಾಗಿದೆ. ನೂತನ ನೀತಿಯಲ್ಲಿನ ಅಸ್ಪಷ್ಟತೆಗಳು ಪತ್ರಕರ್ತರನ್ನು ಆತಂಕಕ್ಕೆ ದೂಡಿವೆ ಎಂಬುದಾಗಿ ಎಸಿ ಮೂಲಕ ಸರ್ಕಾರಕ್ಕೆ ಸಾಗರ ತಾಲ್ಲೂಕು ಪತ್ರಕರ್ತರ ಸಂಘವು ಮನವರಿಗೆ ಮಾಡಿಕೊಡಲಾಯಿತು.
3. ಧ್ವನಿ ಅಡಗಿಸುವ ಪ್ರಯತ್ನವೇ? ಸಣ್ಣ ಪತ್ರಿಕೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗಿ ಕೆಲಸ ಮಾಡುತ್ತವೆ. ಇವುಗಳ ದೈನಂದಿನ ಕಾರ್ಯಚಟುವಟಿಕೆಗಳಿಗೆ ಪೂರಕವಾಗಿರಬೇಕಾದ ಸರ್ಕಾರಿ ಜಾಹೀರಾತುಗಳು ಈಗ ಹೊಸ ನೀತಿಯ ನೆಪದಲ್ಲಿ ಕಡಿತಗೊಳ್ಳುವ ಅಥವಾ ಕಠಿಣ ಷರತ್ತುಗಳಿಗೆ ಒಳಪಡುವ ಭೀತಿ ಇದೆ. ಇದು ಪತ್ರಿಕಾರಂಗದ ಸ್ವತಂತ್ರ ಅಸ್ತಿತ್ವವನ್ನು ಹತ್ತಿಕ್ಕುವಂತಿದೆ ಎಂಬುದು ಪತ್ರಕರ್ತರು ಆಕ್ರೋಶವನ್ನು ಹೊರ ಹಾಕಿದರು.
ಪತ್ರಕರ್ತರ ಸಂಘದ ಆಗ್ರಹ:
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಹೇಶ್ ಹೆಗಡೆ, ಜಿಲ್ಲಾ ವಿಶೇಷ ಆಹ್ವಾನಿತರಾದಂತ ನಾಗೇಶ್.ಜಿ, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ಮತ್ತು ಸಾಗರ ತಾಲ್ಲೂಕು ಕೆಯುಡಬ್ಲೂಜೆಯ ಕಾರ್ಯದರ್ಶಿ ಎಂ.ಜಿ.ರಾಘವನ್ ಅವರ ನೇತೃತ್ವದಲ್ಲಿ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಪತ್ರದಲ್ಲಿ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಮುಂದಿಡಲಾಗಿದೆ:
-
ನೂತನ ಜಾಹೀರಾತು ನೀತಿಯನ್ನು ತರಾತುರಿಯಲ್ಲಿ ಜಾರಿಗೆ ತರಬಾರದು.
-
ಈ ನೀತಿಯ ಕುರಿತು ಪತ್ರಕರ್ತರು ಮತ್ತು ಮಾಧ್ಯಮ ತಜ್ಞರೊಂದಿಗೆ ವ್ಯಾಪಕ ಚರ್ಚೆ ನಡೆಸಬೇಕು.
-
ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಹಿತದೃಷ್ಟಿಯಿಂದ ನೀತಿಯನ್ನು ಮರು ನಿರೂಪಿಸಿ ಜಾರಿಗೆ ತರಬೇಕು.
-
ಆರೋಗ್ಯಕರ ಪತ್ರಿಕೋದ್ಯಮವನ್ನು ಉಳಿಸಲು ಸರ್ಕಾರ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕು.
ಒಟ್ಟಾರೆಯಾಗಿ, ಸರ್ಕಾರದ ‘ನೂತನ ಜಾಹೀರಾತು ನೀತಿ – 2026’ ಸಣ್ಣ ಪತ್ರಿಕೆಗಳ ಪಾಲಿಗೆ ಸಿಹಿಯಾಗುವ ಬದಲು ಕಹಿಯಾಗುವ ಸಾಧ್ಯತೆಗಳೇ ಹೆಚ್ಚಿವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಪತ್ರಕರ್ತರ ಹಿತರಕ್ಷಣೆ ಮಾಡಬೇಕಿದೆ ಎಂಬುದಾಗಿ ಸಾಗರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಎಸಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿದೆ.
ಈ ವೇಳೆ ಸಾಗರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಘವೇಂದ್ರ.ಹೆಚ್, ಸತ್ಯನಾರಾಯಣ, ಇಮ್ರಾನ್ ಸಾಗರ್, ಲೋಕೇಶ್ ಗುಡಿಗಾರ್, ರಫೀಕ್ ಕೊಪ್ಪ, ಜಮೀಲ್ ಸಾಗರ್, ನಾಗರಾಜ್, ಮೂರನೆಕಣ್ಣು ನಾಗರಾಜ್, ರಾಜೇಶ್ ಬಡ್ತಿ, ಶಿವಕುಮಾರ್ ಗೌಡ, ಮಾ.ಸಾ ನಂಜುಂಡಸ್ವಾಮಿ ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಮಾ.27ರಂದು ಸಾಗರದಲ್ಲಿ ‘ಆರ್ಬಿಡಿ ಕೋ-ಆಪರೇಟಿವ್ ಸೊಸೈಟಿ’ ಉದ್ಘಾಟನೆ: ಮಾಲೀಕ ಜಲೀಲ್
ಮಂಡ್ಯದ ಮದ್ದೂರು ನಗರಸಭೆ ಬಜೆಟ್ 2025 -26; ಸ್ವಚ್ಚ, ಸುಂದರ ಹಸಿರೀಕರಣಕ್ಕೆ ಒತ್ತು








