ನವದೆಹಲಿ: ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಮಯದಲ್ಲಿ ಭಾರತವು ಪಾಕಿಸ್ತಾನದೊಂದಿಗೆ ದೀರ್ಘಕಾಲದ ಯುದ್ಧಕ್ಕೆ ಸಂಪೂರ್ಣವಾಗಿ ಸನ್ನದ್ಧವಾಗಿತ್ತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. “ನಾವು ಈ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು ನಮ್ಮ ಸಾಮರ್ಥ್ಯದ ಕೊರತೆಯಿಂದಲ್ಲ, ಬದಲಿಗೆ ನಮ್ಮದೇ ಆದ ಷರತ್ತುಗಳ ಮೇಲೆ ಸ್ವಯಂಪ್ರೇರಿತವಾಗಿ ನಿಲ್ಲಿಸಿದ್ದೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅನಿವಾರ್ಯವಾದರೆ ಸುದೀರ್ಘ ಕಾಲದ ಯುದ್ಧವನ್ನು ಎದುರಿಸಲು ಬೇಕಾದ ಮಿಲಿಟರಿ ಶಕ್ತಿ ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹ ಭಾರತದ ಬಳಿ ಇತ್ತು ಮತ್ತು ಈಗಲೂ ಅದು ಮೊದಲಿಗಿಂತ ಹೆಚ್ಚು ಸದೃಢವಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನವು ನೀಡಿದ್ದ ಅಣುಬಾಂಬ್ ದಾಳಿಯ ಬೆದರಿಕೆ ಕೇವಲ ‘ಹುಸಿ ಬೆದರಿಕೆ’ (Bluff) ಎಂದು ನಮಗೆ ತಿಳಿದಿತ್ತು. ಅದಕ್ಕೆ ನಾವು ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ ಎಂದು ಅವರು ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾರತದ ಮೇಲೆ ದಾಳಿ ಮಾಡಿದವರನ್ನು ಮಾತ್ರ ನಿಖರವಾಗಿ ಗುರಿಯಾಗಿಸಲಾಗಿತ್ತು. ಭಯೋತ್ಪಾದನೆಯ ವಿರುದ್ಧ ಪ್ರಧಾನಿ ಮೋದಿಯವರ ‘ಶೂನ್ಯ ಸಹನೆ’ (Zero Tolerance) ನೀತಿಗೆ ಇದು ಸಾಕ್ಷಿಯಾಗಿದೆ.
ಭಯೋತ್ಪಾದನಾ ದಾಳಿಗಳಾದಾಗ ಕೇವಲ ರಾಜತಾಂತ್ರಿಕ ಹೇಳಿಕೆಗಳನ್ನು ನೀಡಿ ಸುಮ್ಮನಿರುವ ಹಳೆಯ ಕಾಲ ಈಗ ಮುಗಿದಿದೆ. ಶತ್ರುಗಳಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಲು ‘ನವ ಭಾರತ’ ಸಿದ್ಧವಿದೆ ಎಂದು ಅವರು ಗುಡುಗಿದ್ದಾರೆ.








