ಹಿಂದುಳಿದ ವರ್ಗಗಳಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಿರುವ ಕುಟುಂಬಗಳು ಮೀಸಲಾತಿ ಸೌಲಭ್ಯಗಳಿಗಾಗಿ ನಿರಂತರವಾಗಿ ಬೇಡಿಕೆ ಇಡುತ್ತಿರುವುದರ ಕುರಿತು ಶುಕ್ರವಾರದಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಇಂತಹ ಕುಟುಂಬಗಳಿಗೆ ಕೋಟಾದ ಸೌಲಭ್ಯಗಳು ಸಿಗಬೇಕೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಹಿಂದುಳಿದ ವರ್ಗಗಳೊಳಗಿನ ‘ಕ್ರೀಮಿ ಲೇಯರ್’ (ಕೆನೆಪದರ) ವರ್ಗಕ್ಕೆ ಮೀಸಲಾತಿ ಸೌಲಭ್ಯಗಳನ್ನು ನೀಡುವ ಕುರಿತಾದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಅವಲೋಕನಗಳನ್ನು ಮಾಡಿದೆ.
ಇಂತಹ ಪ್ರಗತಿಯು ಸಾಮಾಜಿಕ ಚಲನಶೀಲತೆಗೆ (ಸಾಮಾಜಿಕ ಸ್ಥಾನಮಾನದ ಸುಧಾರಣೆ) ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ‘ಲೈವ್ ಲಾ’ ವರದಿಯ ಪ್ರಕಾರ, “ತಂದೆ-ತಾಯಿ ಇಬ್ಬರೂ ಐಎಎಸ್ (IAS) ಅಧಿಕಾರಿಗಳಾಗಿದ್ದರೆ ಅವರ ಮಕ್ಕಳಿಗೆ ಮೀಸಲಾತಿ ಏಕೆ ಬೇಕು? ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದಿಂದಾಗಿ ಸಾಮಾಜಿಕ ಚಲನಶೀಲತೆ ಉಂಟಾಗುತ್ತದೆ. ಆದರೂ ಅವರ ಮಕ್ಕಳಿಗೆ ಮತ್ತೆ ಮೀಸಲಾತಿಯನ್ನು ಹುಡುಕುತ್ತಾ ಹೋದರೆ, ನಾವು ಈ ವ್ಯವಸ್ಥೆಯಿಂದ ಎಂದಿಗೂ ಹೊರಬರಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
”ಇದು ನಾವು ಗಂಭೀರವಾಗಿ ಯೋಚಿಸಬೇಕಾದ ವಿಷಯವಾಗಿದೆ. ಹಾಗಾದರೆ ಮೀಸಲಾತಿ ನೀಡುವುದರ ಪ್ರಯೋಜನವಾದರೂ ಏನು? ನೀವು ಮೀಸಲಾತಿ ನೀಡುತ್ತಿದ್ದೀರಿ. ಪೋಷಕರು ಓದಿದ್ದಾರೆ, ಉತ್ತಮ ಉದ್ಯೋಗದಲ್ಲಿದ್ದಾರೆ, ಉತ್ತಮ ಆದಾಯ ಗಳಿಸುತ್ತಿದ್ದಾರೆ, ಆದರೂ ಅವರ ಮಕ್ಕಳಿಗೆ ಮತ್ತೆ ಮೀಸಲಾತಿ ಬೇಕು ಎನ್ನುತ್ತಾರೆ. ನೋಡಿ, ಅವರು ಮೀಸಲಾತಿಯಿಂದ ಹೊರಬರಬೇಕು,” ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ.
’ಲೈವ್ ಲಾ’ ವರದಿಯ ಪ್ರಕಾರ, ಈ ಪ್ರಕರಣವು ಕರ್ನಾಟಕದ ಹಿಂದುಳಿದ ವರ್ಗಗಳ ಪ್ರವರ್ಗ-೨(ಎ) (Category II-A) ಅಡಿಯಲ್ಲಿ ಬರುವ ಕುರುಬ ಸಮುದಾಯದ ಅಭ್ಯರ್ಥಿಯೊಬ್ಬರಿಗೆ ಸಂಬಂಧಿಸಿದ್ದಾಗಿದೆ. ಈ ಅಭ್ಯರ್ಥಿಯು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ (KPTCL) ಸಹಾಯಕ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದರು. ಆದರೆ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯು ಇವರು ‘ಕ್ರೀಮಿ ಲೇಯರ್’ (ಕೆನೆಪದರ) ವ್ಯಾಪ್ತಿಗೆ ಬರುತ್ತಾರೆ ಎಂದು ಪತ್ತೆಹಚ್ಚಿದ ನಂತರ, ಇವರಿಗೆ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡಲು ನಿರಾಕರಿಸಲಾಗಿತ್ತು.
ಶುಕ್ರವಾರದ ವಿಚಾರಣೆಯ ಸಂದರ್ಭದಲ್ಲಿ, ಸರ್ವೋಚ್ಚ ನ್ಯಾಯಾಲಯವು ಕ್ರೀಮಿ ಲೇಯರ್ ಕುಟುಂಬಗಳಿಗೆ ನಿರಂತರವಾಗಿ ಮೀಸಲಾತಿ ಸೌಲಭ್ಯಗಳನ್ನು ವಿಸ್ತರಿಸುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣದೊಂದಿಗೆ ವ್ಯಕ್ತಿಯ ಸಾಮಾಜಿಕ ಸ್ಥಾನಮಾನವು ಸುಧಾರಿಸುತ್ತದೆ ಎಂದು ನ್ಯಾಯಮೂರ್ತಿ ನಾಗರತ್ನ ಗಮನಿಸಿದರು. ಇಂತಹ ಸಂದರ್ಭಗಳಲ್ಲಿ ಮುಂದಿನ ಪೀಳಿಗೆಗೆ ಮೀಸಲಾತಿಯ ಅರ್ಹತೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
”ಇಲ್ಲಿ ಒಂದು ರೀತಿಯ ಸಮತೋಲನ ಇರಬೇಕಾಗುತ್ತದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಒಪ್ಪಿಕೊಳ್ಳೋಣ. ಆದರೆ ಪೋಷಕರು ಮೀಸಲಾತಿಯ ಸೌಲಭ್ಯವನ್ನು ಪಡೆದುಕೊಂಡು ಒಂದು ಹಂತವನ್ನು ತಲುಪಿದ ನಂತರವೂ, ಅಂದರೆ ಇಬ್ಬರೂ ಐಎಎಸ್ ಅಧಿಕಾರಿಗಳಾಗಿದ್ದರೆ, ಇಬ್ಬರೂ ಸರ್ಕಾರಿ ಸೇವೆಯಲ್ಲಿದ್ದರೆ ಮತ್ತು ಉತ್ತಮ ಸ್ಥಾನದಲ್ಲಿದ್ದರೆ, ಅಲ್ಲಿ ಸಾಮಾಜಿಕ ಚಲನಶೀಲತೆ ಬಂದಿರುತ್ತದೆ. ಈಗ ಅವರು ಕ್ರೀಮಿ ಲೇಯರ್ನಿಂದ ತಮ್ಮನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸುತ್ತಿದ್ದಾರೆ. ಇದನ್ನು ಸಹ ನಾವು ನೆನಪಿನಲ್ಲಿಡಬೇಕಾಗುತ್ತದೆ,” ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿರುವುದಾಗಿ ‘ಲೈವ್ ಲಾ’ ಉಲ್ಲೇಖಿಸಿದೆ.








