ಬೆಂಗಳೂರು :ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ಅಲೆಯುವುದೇಕೆ‘ ಎನ್ನುವ ಗಾದೆಯಂತೆ ಈಗ “ಅಂಗೈಯ್ಯಲ್ಲಿ ಅವಕಾಶ ಇಟ್ಟುಕೊಂಡು ಸರ್ಕಾರಿ ಕಚೇರಿಗಳಿಗೆ ಅಯುವುದೇಕೆ’ ಎಂಬ ಮಾತು ಗ್ರಾಮೀಣ ಜನರ ಮುಂದಿದೆ.
ಸರ್ಕಾರದ ಸೇವೆಗಳು ತಂತ್ರಜ್ಞಾನವನ್ನು ಅವಲಂಭಿಸಿದರೆ ಪ್ರಯೋಜನಗಳು ಹಲವಾರು. ತಂತ್ರಜ್ಞಾನದ ಅವಲಂಬನೆಯಿಂದ, ಪಾರದರ್ಶಕತೆಯನ್ನು ಕಾಯ್ದುಕೊಳ್ಳಬಹುದು, ಸಮಯದ ಉಳಿತಾಯವಾಗಲಿದೆ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ, ಸೇವೆಗಳನ್ನು ಸಾಕಾಲದಲ್ಲಿ ಒದಗಿಸಬಹುದು.
ಗ್ರಾಮೀಣಾಭಿವೃದ್ಧಿ ಇಲಾಖೆಯು ಗ್ರಾಮೀಣ ಜನತೆಗೆ ತಂತ್ರಜ್ಞಾನದ ಸಾಕ್ಷರರನ್ನಾಗಿಸುವ ಜೊತೆ ಜೊತೆಗೆ ಜನರ ಅಂಗೈನಲ್ಲೇ ಸೇವೆಗಳನ್ನು ಒದಗಿಸಲು ಕ್ರಮ ವಹಿಸಿದೆ. ಬಾಪೂಜಿ ಸೇವಾ ಕೇಂದ್ರದ ಅಪ್ಲಿಕೇಶನ್ ಇದೀಗ ಅಂಡ್ರಾಯ್ಡ್ ಮೊಬೈಲ್ ಫೋನ್’ಗಳಲ್ಲಿ ಲಭ್ಯವಿದೆ. ವಿವಿಧ ಇಲಾಖೆಗಳ ಸುಮಾರು 81 ಸರ್ಕಾರೀ ಸೇವೆಗಳು ನಮ್ಮ ಈ ಬಾಪೂಜಿ ಸೇವಾ ಕೇಂದ್ರದ ಮೊಬೈಲ್ ಅಪ್ಲಿಕೇಶನ್ ಮೂಲಕ ಪಡೆಯಬಹುದಾಗಿದೆ.
ಗ್ರಾಮೀಣ ಜನತೆಗೆ ಅಗತ್ಯವಿರುವ ಸರ್ಕಾರದ ದಾಖಲೆಗಳು, ಸೌಕರ್ಯಗಳು, ವಿವಿಧ ಸೇವೆಗಳನ್ನು ಪಡೆಯಲು ಇದೀಗ ಸರ್ಕಾರಿ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಜನನ/ಮರಣ ನೋಂದಣಿ, ಜಾತಿ/ಆದಾಯ ಪ್ರಮಾಣ ಪತ್ರಗಳು, ಬೆಳೆ/ನಿವಾಸಿ ದೃಢೀಕರಣ ಪತ್ರಗಳು, ವಿವಿಧ ಪಿಂಚಣಿ ಯೋಜನೆಗಳಿಗೆ ಇದರಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ.
ನರೇಗಾ ಜಾಬ್ ಕಾರ್ಡ್, ನರೇಗಾ ಕೆಲಸದ ಬೇಡಿಕೆ, ಕುಡಿಯುವ ನೀರಿನ ಸಂಪರ್ಕ, ನಿಮ್ಮೂರಿನ ಬೀದಿ ದೀಪ, ಚರಂಡಿ, ನೈರ್ಮಲ್ಯ ವ್ಯವಸ್ಥೆ ಹೀಗೆ ಯಾವುದೇ ಸಮಸ್ಯೆಗೂ ಜನತೆ ತಮ್ಮ ಮೊಬೈಲ್ ಮೂಲಕವೇ ಪರಿಹಾರ ಪಡೆಯಬಹುದಾಗಿದೆ. ತಂತ್ರಜ್ಞಾನದ ಮೂಲಕ ಗ್ರಾಮೀಣ ಜನತೆಯ ಬದುಕನ್ನು ಇನ್ನಷ್ಟು ಉನ್ನತಿಯೆಡೆಗೆ ಕೊಂಡೊಯ್ಯುವುದು ನಮ್ಮ ಆದ್ಯತೆಯಾಗಿದೆ.
ಈಗ ಜನರ ಅಂಗೈಯಲ್ಲಿ ಇರುವುದು ಭವಿಷ್ಯದ ರೇಖೆಗಳಲ್ಲ, ಭವಿಷ್ಯದ ಅವಕಾಶಗಳು!