ಬೆಂಗಳೂರು: ರಾಜ್ಯದಲ್ಲಿ ರೌಡಿಸಂ ಮತ್ತು ಅಸಾಮಾಜಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಭಾರಿ ಸಿದ್ಧತೆ ನಡೆಸಿದೆ. ಮುಖ್ಯಮಂತ್ರಿಯವರ ನಿರ್ದೇಶನದ ಬೆನ್ನಲ್ಲೇ, ರಾಜ್ಯಾದ್ಯಂತ ಪ್ರತಿ ಪೊಲೀಸ್ ವಲಯ ಹಾಗೂ ಠಾಣಾ ಮಟ್ಟದಲ್ಲಿ ಕಡ್ಡಾಯವಾಗಿ ‘ಆಂಟಿ ರೌಡಿ ಸ್ಕ್ವಾಡ್’ (Anti-Rowdy Squads) ರಚಿಸುವಂತೆ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ಪರಿಶೋಧಕ (DG & IGP) ಡಾ. ಎಂ.ಎ. ಸಲೀಂ, ಐಪಿಎಸ್ ಅವರು ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ರೌಡಿ ಅಂಶಗಳ ವಿರುದ್ಧ ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿಯನ್ನು ಅನುಸರಿಸುವುದು ಈ ಹೊಸ ಸ್ಕ್ವಾಡ್ಗಳ ಮುಖ್ಯ ಉದ್ದೇಶವಾಗಿದೆ.
ಭಯದ ವಾತಾವರಣಕ್ಕೆ ಬ್ರೇಕ್
ರೌಡಿ ಅಂಶಗಳು ಸಮಾಜದಲ್ಲಿ ಅನಗತ್ಯ ಭಯದ ವಾತಾವರಣ ಸೃಷ್ಟಿಸುತ್ತಿವೆ, ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡುತ್ತಿವೆ ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟುಮಾಡುತ್ತಿವೆ ಎಂದು ಸುತ್ತೋಲೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಕರ್ನಾಟಕ ಪೊಲೀಸ್ ಮ್ಯಾನುಯಲ್ ಪ್ರಕಾರ, ಸಾರ್ವಜನಿಕ ಶಾಂತಿ ಕಾಯ್ದುಕೊಳ್ಳಲು ರೌಡಿಗಳ ಗುರುತಿಸುವಿಕೆ, ನೋಂದಣಿ ಮತ್ತು ಅವರ ಮೇಲೆ ನಿರಂತರ ನಿಗಾ ಇಡುವುದು ಅತ್ಯಗತ್ಯ ಎಂದು ತಿಳಿಸಲಾಗಿದೆ.
ಸ್ಕ್ವಾಡ್ಗಳ ಸ್ವರೂಪ ಮತ್ತು ರಚನೆ ಹೇಗೆ?
- ವಲಯ ಮತ್ತು ಠಾಣಾ ಮಟ್ಟ: ಸರ್ಕಲ್ ಇನ್ಸ್ಪೆಕ್ಟರ್ಗಳ ಮೇಲ್ವಿಚಾರಣೆಯಲ್ಲಿ ಪ್ರತಿ ವಲಯದಲ್ಲಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ಗಳ ನೇತೃತ್ವದ ಠಾಣೆಗಳಲ್ಲಿ ಪ್ರತ್ಯೇಕ ಸ್ಕ್ವಾಡ್ಗಳನ್ನು ರಚಿಸಲಾಗುವುದು.
- ಸ್ಥಳೀಯ ಅಗತ್ಯಕ್ಕೆ ಆದ್ಯತೆ: ಸ್ಥಳೀಯ ಪ್ರದೇಶದ ಅಗತ್ಯತೆ ಮತ್ತು ಅಪರಾಧಗಳ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಈ ಸ್ಕ್ವಾಡ್ನಲ್ಲಿ ಎಷ್ಟು ಜನ ಇರಬೇಕೆಂಬುದನ್ನು ಆಯಾ ಉಪ ವಿಭಾಗಾಧಿಕಾರಿ (DYSP) ಅಥವಾ ಎಸಿಪಿ (ACP) ಅವರು ನಿರ್ಧರಿಸಲಿದ್ದಾರೆ.
ರೌಡಿ ಸ್ಕ್ವಾಡ್ಗಳ ಪ್ರಮುಖ ಜವಾಬ್ದಾರಿಗಳು:
- ಹೊಸ ರೌಡಿ ಶೀಟ್ ಸಿದ್ಧತೆ: ಹಳೇ ಅಪರಾಧ ಪ್ರಕರಣಗಳನ್ನು ಮರುಪರಿಶೀಲಿಸಿ, ಸಮಾಜಕ್ಕೆ ಕಂಟಕವಾಗಿರುವ ಹೊಸ ಅಪರಾಧಿಗಳ ವಿರುದ್ಧ ರೌಡಿ ಶೀಟ್ ತೆರೆಯುವುದು.
- ಕಠಿಣ ಕಾಯ್ದೆಗಳ ಪ್ರಯೋಗ: ಸಮಾಜದ ಶಾಂತಿ ಕದಡುವ ರೌಡಿಗಳ ವಿರುದ್ಧ ಪಿಎಆರ್ (PAR), ಗೂಂಡಾ ಕಾಯ್ದೆ ಹಾಗೂ ಕೆಸಿಒಸಿಎ (KCOCA) ನಂತಹ ಕಠಿಣ ಕಾನೂನುಗಳ ಅಡಿಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದು.
- ರಹಸ್ಯ ಮಾಹಿತಿ ಸಂಗ್ರಹ: ಹೊಸ ರೌಡಿ ಗ್ಯಾಂಗ್ಗಳು ಮತ್ತು ಅಪರಾಧ ಗುಂಪುಗಳನ್ನು ಪತ್ತೆಹಚ್ಚಲು ಸ್ಥಳೀಯ ಬೀಟ್ ಸಿಬ್ಬಂದಿ ಹಾಗೂ ಗುಪ್ತಚರ ಮೂಲಗಳೊಂದಿಗೆ ನಿಕಟ ಸಂಪರ್ಕದಲ್ಲಿರುವುದು.
- ಅಚ್ಚರಿ ತಪಾಸಣೆ: ಅಪರಾಧ ಪ್ರವೃತ್ತಿ ಹೆಚ್ಚಿರುವ ಜಾಗ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ (Special Drives) ಮತ್ತು ಹಠಾತ್ ದಾಳಿಗಳನ್ನು ನಡೆಸುವುದು.
ಕಟ್ಟುನಿಟ್ಟಿನ ನಿಗಾ ಮತ್ತು ವರದಿ
ಈ ಸ್ಕ್ವಾಡ್ಗಳ ಕಾರ್ಯಕ್ಷಮತೆಯ ಮೇಲೆ ಹಿರಿಯ ಅಧಿಕಾರಿಗಳು ಹದ್ದಿನ ಕಣ್ಣಿಡಲಿದ್ದಾರೆ. ಸರ್ಕಲ್ ಇನ್ಸ್ಪೆಕ್ಟರ್ಗಳು ಪ್ರತಿ ಪಕ್ಷಾವಧಿಯಲ್ಲಿ (ಹದಿನೈದು ದಿನಕ್ಕೊಮ್ಮೆ) ಇದರ ಪರಿಶೀಲನೆ ನಡೆಸಲಿದ್ದಾರೆ. ಎಸ್ಡಿಪಿಒ ಮತ್ತು ಎಸಿಪಿಗಳು ಮಾಸಿಕ ಅಪರಾಧ ಸಭೆಗಳಲ್ಲಿ ಇದರ ವಿಮರ್ಶೆ ನಡೆಸಲಿದ್ದಾರೆ. ಪ್ರತಿ ಸ್ಕ್ವಾಡ್ನ ಚಟುವಟಿಕೆಗಳನ್ನು ದಾಖಲಿಸಲು ಪ್ರತ್ಯೇಕ ರಿಜಿಸ್ಟರ್ ಇಡಲಾಗುತ್ತಿದ್ದು, ಮಾಸಿಕ ವರದಿಗಳನ್ನು ಡಿಓ (DO) ಪತ್ರದ ಮೂಲಕ ಸಲ್ಲಿಸಬೇಕಾಗುತ್ತದೆ.
ತಕ್ಷಣದ ಕ್ರಮಕ್ಕೆ ಸೂಚನೆ:
ರಾಜ್ಯದಲ್ಲಿ ಯಾವುದೇ ರೀತಿಯ ಬೆದರಿಕೆ, ಹಫ್ತಾ ವಸೂಲಿ (ಬಲವಂತದ ಹಣ ಸಂಗ್ರಹ), ಗ್ಯಾಂಗ್ ಚಟುವಟಿಕೆ ಕಂಡುಬಂದರೆ ತಕ್ಷಣವೇ ಕಠಿಣ ಕ್ರಮ ಜರುಗಿಸಬೇಕು. ಈ ಆದೇಶ ತಲುಪಿದ ಏಳು ದಿನಗಳ ಒಳಗಾಗಿ ಎಲ್ಲಾ ಘಟಕಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ರೌಡಿ ಸ್ಕ್ವಾಡ್ ರಚಿಸಿರುವ ಕುರಿತು ವರದಿ ಸಲ್ಲಿಸಬೇಕೆಂದು ಡಾ. ಎಂ.ಎ. ಸಲೀಂ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.








