ಬೆಂಗಳೂರು: ಸಿಲಿಕಾನ್ ಸಿಟಿಯ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಬೆಂಗಳೂರು ನಗರದ ಅಭಿವೃದ್ಧಿ ಮತ್ತು ನಾಗರಿಕರ ಹಿತದೃಷ್ಟಿಯಿಂದ ಸರ್ಕಾರವು ತನ್ನ ಆರನೇ ಗ್ಯಾರಂಟಿಯಾದ ‘ಭೂ ಗ್ಯಾರಂಟಿ’ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತೆಗೆ ಪರಿವರ್ತಿಸಿಕೊಳ್ಳಲು ವಿಶೇಷ ರಿಯಾಯಿತಿ ಘೋಷಿಸಲಾಗಿದೆ.
ಈ ಹಿಂದೆ ‘ಬಿ’ ಖಾತಾದಿಂದ ‘ಎ’ ಖಾತೆಗೆ ಪರಿವರ್ತನೆಗೆ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ಹಣ ಪಾವತಿಸಬೇಕಿತ್ತು. ಆದರೆ ಈಗ ಈ ಮೊತ್ತವನ್ನು ಕೇವಲ ಶೇ. 2ಕ್ಕೆ ಇಳಿಸಲಾಗಿದೆ.’ನನ್ನ ಇ-ಖಾತಾ, ನನ್ನ ಹಕ್ಕು’ ಎಂಬ ಹೆಸರಿನಲ್ಲಿ ಈ ಬೃಹತ್ ಅಭಿಯಾನ ನಡೆಯಲಿದೆ.ಮೇ 16, 2026 ರಿಂದ ಈ ಅಭಿಯಾನ ಅಧಿಕೃತವಾಗಿ ಚಾಲನೆ ಪಡೆಯಲಿದೆ.ಈ ಸುವರ್ಣಾವಕಾಶ ಕೇವಲ 100 ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ.
ಮನೆ ಬಾಗಿಲಿಗೇ ಬರಲಿದೆ ಇ-ಖಾತಾ!
ನಕಲಿ ದಾಖಲೆಗಳ ಸೃಷ್ಟಿ ಮತ್ತು ವಂಚನೆಗೆ ಕಡಿವಾಣ ಹಾಕಲು ಸರ್ಕಾರವು ಬೆಂಗಳೂರಿನ ಸುಮಾರು 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಿದೆ. ಈ ಡಿಜಿಟಲ್ ಇ-ಖಾತಾ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ‘ಬಿಬಿಎಂಪಿ’ ಅಧಿಕಾರಿಗಳು ಅಥವಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ನೇರವಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಇ-ಖಾತಾ ವಿತರಿಸಲಿದ್ದಾರೆ.
ಎಲ್ಲಿ ನಡೆಯಲಿದೆ?
ಪ್ರತಿ ಶನಿವಾರ ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ತಲಾ 10ರಂತೆ ಒಟ್ಟು 50 ಸ್ಥಳಗಳಲ್ಲಿ ಈ ಪರಿವರ್ತನಾ ಶಿಬಿರಗಳು ನಡೆಯಲಿವೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ವಲಯಗಳ ನಾಗರಿಕರು ಇದರ ಪ್ರಯೋಜನ ಪಡೆಯಬಹುದು.
ಬೆಂಗಳೂರಿನ ಆಸ್ತಿ ಮಾಲೀಕರ ಹಿತಕಾಪಾಡುವುದು ನಮ್ಮ ಸರ್ಕಾರದ ಗುರಿ. ಈ ಭೂ ಗ್ಯಾರಂಟಿ ಯೋಜನೆಯ ಮೂಲಕ ಆಸ್ತಿ ಮಾಲೀಕತ್ವದ ಗೊಂದಲಗಳಿಗೆ ತೆರೆ ಬೀಳಲಿದ್ದು, ಕಡಿಮೆ ವೆಚ್ಚದಲ್ಲಿ ನಾಗರಿಕರು ತಮ್ಮ ಆಸ್ತಿ ಹಕ್ಕನ್ನು ಭದ್ರಪಡಿಸಿಕೊಳ್ಳಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ಇ-ಖಾತಾ ಸಹಾಯವಾಣಿಗಾಗಿ ಸಾರ್ವಜನಿಕರು 94806 83695 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಬೆಂಗಳೂರು ನಗರದಲ್ಲಿರುವ ʼಬಿʼ ಖಾತಾ ಆಸ್ತಿಗಳನ್ನು ʼಎʼ ಖಾತಾವನ್ನಾಗಿ ಮಾಡಿಸಿಕೊಳ್ಳುವವರಿಗೆ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ.5ರ ಬದಲು ಶೇ.2ರಷ್ಟು ಹಣ ಪಾವತಿಸುವ ವಿಶೇಷ ರಿಯಾಯಿತಿ ದೊರೆಯಲಿದೆ. ಇದು ಸರ್ಕಾರದ 6ನೇ ಗ್ಯಾರಂಟಿ ʼಭೂ ಗ್ಯಾರಂಟಿ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. pic.twitter.com/6vBYH3Vabn
— DIPR Karnataka (@KarnatakaVarthe) May 14, 2026








