ಮೈಸೂರು : ರಾಜ್ಯದಲ್ಲಿ ಈಗಾಗಲೇ ಕೆಲವು ಹಿರಿಯ ಕಾಂಗ್ರೆಸ್ ಶಾಸಕರು ದೆಹಲಿಗೆ ಭೇಟಿ ನೀಡಿ ಕಾಂಗ್ರೆಸ್ ಹೈಕಮಾಂಡ್ ಅವರ ಜೊತೆಗೆ ಸಚಿವ ಸ್ಥಾನ ನೀಡುವ ಕುರಿತು ಸಚಿವ ಸಂಪುಟ ಪುನಾರಚನೆ ಮಾಡುವಂತೆ ಚರ್ಚೆ ಮಾಡಿದ್ದರು. ಈ ವಿಚಾರ ಒಂದು ಕಡೆ ಆದರೆ ಇದೀಗ ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಒಬ್ಬರು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದು ನನಗೆ ವಿಧಾನ ಪರಿಷತ್ ಸ್ಥಾನ ಕೊಡಿ ಇಲ್ಲ ದಯಾಮರಣ ಕೊಡಿ ಎಂದು ಪತ್ರ ಬರೆದಿದ್ದಾರೆ.
ಹೌದು ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಡಿ ಇಲ್ಲ ದಯಾಮರಣ ಕೊಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕಾರ್ಯಕರ್ತ ಮೈಸೂರು ಬಸವಣ್ಣ ಪತ್ರ ಬರೆದಿದ್ದಾರೆ. ಇದೀಗ ಇವರು ಪತ್ರ ಬರೆಯುತ್ತಿರುವುದು ಮೊದಲನೇ ಬಾರಿ ಏನಲ್ಲ ಸತತ ನಾಲ್ಕನೇ ಬಾರಿಗೆ ಬಸವಣ್ಣ ಅವರು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಹಲವಾರು ವರ್ಷಗಳಿಂದ ನಾನು ಸೇವೆ ಸಲ್ಲಿಸುತ್ತಿದ್ದೇನೆ ಆದರೂ ನನಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ ಮೈಸೂರು ದಸರಾ ಕಮಿಟಿಗೂ ನನ್ನನ್ನು ನೇಮಕ ಮಾಡಿಲ್ಲ. ಈ ಬಾರಿ ನನಗೆ ಎಂಎಲ್ಸಿ ಸ್ಥಾನ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಹೀಗಾಗಿ ರಾಹುಲ್ ಗಾಂಧಿಗೆ ಪೋಸ್ಟ್ ಮೂಲಕ ಪತ್ರ ಬರೆದಿದ್ದೇನೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೈಸೂರು ಬಸವಣ್ಣ ಹೇಳಿಕೆ ನೀಡಿದರು.








