ಮಂಡ್ಯ :- ಮದ್ದೂರು ನಗರಸಭಾ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ ಗ್ರಾಮ ಪಂಚಾಯಿತಿ ಕಛೇರಿಗಳಲ್ಲೆ ( ಉಪ ಕಛೇರಿ ) ಇ – ಖಾತಾ ಸೇವೆಯನ್ನು ಪ್ರಾರಂಭಿಸಿರುವುದಾಗಿ ನಗರಸಭೆಯ ಪೌರಾಯುಕ್ತೆ ಎಸ್.ಎನ್. ರಾಧಿಕಾ ಶುಕ್ರವಾರ ಹೇಳಿದರು.
ನಗರದ ನಗರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಈ ಹಿಂದೆ ಗ್ರಾಮ ಪಂಚಾಯಿತಿಗಳಾಗಿದ್ದ ಸೋಮನಹಳ್ಳಿ ಹಾಗೂ ಚಾಮನಹಳ್ಳಿಗಳನ್ನು ನಗರಸಭಾ ವ್ಯಾಪ್ತಿಗೆ ಸೇರ್ಪಡೆ ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳಿಯ ಸಾರ್ವಜನಿಕರು ಇನ್ನು ಮುಂದೆ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ನಗರಸಭಾ ಕಛೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕದಲ್ಲಿದ್ದರು.
ಆದರೆ, ಸಾರ್ವಜನಿಕರು ನಗರಸಭಾ ಕಛೇರಿಗೆ ಅಲೆದಾಟ ಮಾಡುವ ಸನ್ನಿವೇಶ ಎದುರಾಗಬಾರದು ಎಂಬ ಉದ್ದೇಶದಿಂದ ಈ ಸೇವೆಯನ್ನು ಆರಂಭಗೊಳಿಸಲಾಗಿದ್ದು, ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಮನೆ ಕಟ್ಟಲು ಪರವಾನಗಿ ಸೇರಿದಂತೆ ಹಲವು ಸೇವೆಗಳನ್ನು ಕೂಡ ಉಪ ಕಛೇರಿಯಲ್ಲೆ ಆರಂಭಿಸಲಾಗುವುದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಇ – ಖಾತಾ ಸೇವೆಯನ್ನು ಪಡೆಯಲು 50 ರೂ ಶುಲ್ಕ ನಿಗಧಿಪಡಿಸಲಾಗಿದೆ. ಅದಲ್ಲದೇ ಗ್ರಾಮ ಪಂಚಾಯಿತಿಯಲ್ಲಿ ಎಷ್ಟು ತೆರಿಗೆ ಪಾವತಿ ಮಾಡಲಾಗುತ್ತಿತ್ತು ಅಷ್ಟೇ ಹಣವನ್ನು ಮಾತ್ರ ಭರಿಸಬೇಕಾಗಿದ್ದು, ಹೆಚ್ಚಿನ ಹಣವನ್ನು ಯಾವುದೇ ಕಾರಣಕ್ಕೂ ಪಡೆಯುವುದಿಲ್ಲ.
ಹಾಗೂ ಅರ್ಜಿ ಸಲ್ಲಿಸಿದ ಮೂರು ದಿನಗಳಲ್ಲಿಯೇ ಪಡೆಯಬಹುದಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಏನಾದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ನನ್ನ ಗಮನಕ್ಕೆ ತಂದರೇ ಅಂತವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಸಭಾ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಇನ್ನುಳಿದ ಗ್ರಾಪಂಗಳಾದ ಗೆಜ್ಜಲಗೆರೆ ಹಾಗೂ ಗೊರವನಹಳ್ಳಿಗಳಲ್ಲಿಯೂ ಇ ಖಾತಾ ಸೇವೆಯನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಗುವುದು. ಸದ್ಯದ ಮಟ್ಟಿಗೆ ಎರಡು ಗ್ರಾಪಂ ವ್ಯಾಪ್ತಿಯ 10 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ನಗರಸಭಾ ಕಛೇರಿಯಲ್ಲಿಯೇ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ನಗರಸಭಾ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿಯಲ್ಲಿ ಸಾಕಷ್ಟು ನ್ಯೂನತೆಗಳಿದ್ದವು. ನಾನು ಅಧಿಕಾರ ವಹಿಸಿಕೊಂಡ 5 ತಿಂಗಳಲ್ಲೇ ಶೇ.30 ರಷ್ಟು ಇದ್ದದ್ದನ್ನು ಶೇ.70 ರಷ್ಟು ತೆರಿಗೆ ವಸೂಲಾತಿ ಮಾಡಲಾಗಿದ್ದು, ನಗರಸಭಾ ವ್ಯಾಪ್ತಿಯ ಅಭಿವೃದ್ಧಿ, ಮೂಲ ಸೌಕರ್ಯ ಕಲ್ಪಿಸಲು ಜನರು ತೆರಿಗೆ ಪಾವತಿ ಮಾಡುವುದು ಅತ್ಯವಶ್ಯಕವಾಗಿದ್ದು, ನಿಗಧಿತ ಸಮಯದಲ್ಲಿಯೇ ತೆರಿಗೆ ಪಾವತಿ ಮಾಡುವಂತೆ ಪೌರಾಯುಕ್ತೆ ರಾಧಿಕಾ ಮನವಿ ಮಾಡಿದರು.
ಈ ವೇಳೆ ಕಂದಾಯ ಅಧಿಕಾರಿ ಪುಟ್ಟಸ್ವಾಮಿ, ಕಂದಾಯ ನಿರೀಕ್ಷಕ ಲೋಕೇಶ್ ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ








