ಶಿವಮೊಗ್ಗ: ರಾಜ್ಯ ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿ, ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಹಾರ, ತುರಾಯಿ, ನೆನಪಿನ ಕಾಣಿಗೆ ನೀಡಿ ಅದ್ಧೂರಿಯಾಗಿ ಬೀಳ್ಕೊಡುಗೆಯನ್ನು ಪಿಡಿಓ ಒಬ್ಬರು ನೀಡಿರುವಂತ ಘಟನೆ ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯ್ತಿಯ ಸದಸ್ಯರ ಅಧಿಕಾರವಧಿ ಮುಕ್ತಾಯಗೊಂಡಿತ್ತು. ಹೀಗೆ ಅವಧಿ ಮುಕ್ತಾಯಗೊಂಡ ಗ್ರಾಮ ಪಂಚಾಯ್ತಿಗಳಿಗೆ ದಿನಾಂಕ 06-02-2026ರಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದಾರೆ. ಅದರಂತೆ ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯ್ತಿಗೆ ಸಾಗರದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜೇಶ್ವರಿ ಅವರನ್ನು ಆಡಳಿತಾಧಿಕಾರಿಯಾಗಿಯೂ ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರದ ಆದೇಶ ಏನು?
ಈ ಎಲ್ಲದರ ನಡುವೆ ಇಂದು ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯ್ತಿ ಪಿಡಿಓ ರಾಜು ಸಾಹೇಬ್ರು ಮಾತ್ರ, ಸರ್ಕಾರದ ನಿಯಮವನ್ನೇ ಗಾಳಿಗೆ ತೂರಿ ಅವಧಿ ಮುಕ್ತಾಯಗೊಂಡ ಬರೂರು ಗ್ರಾಮ ಪಂಚಾಯ್ತಿ ಸದಸ್ಯರಿಗೆ ಬೀಳ್ಗೊಡುಗೆ ಮಾಡಿದ್ದಾರೆ. ಶಾಲು ಹೊದಿಸಿ, ಹಾರ ಹಾಕಿ, ನೆನಪಿನ ಕಾಣಿಕೆಯನ್ನು ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ದಿನಾಂಕ 10-12-2025ರಂದು ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಆ ಸುತ್ತೋಲೆಯಂತೆ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಸ್ಮರಣಿಕೆ ಮತ್ತು ಟ್ರೋಫಿಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದಷ್ಟೇ ಅಲ್ಲದೇ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದೆಂಬುದಾಗಿಯೇ ಖಡಕ್ ಸೂಚನೆ ನೀಡಲಾಗಿದೆ.
ಇನ್ನೂ ಈ ಪದ್ದತಿಯು ಆರಂಭದಲ್ಲಿ ಸದ್ಭಾವನೆ ಮತ್ತು ಮೆಚ್ಚುಗೆಯ ಸಂಕೇತದ ಉದ್ದೇಶವಾಗಿದ್ದರೂ ಸಹ ಗಣ್ಯರನ್ನು ಸನ್ಮಾನಿಸುವ ಇಂತಹ ಅಭ್ಯಾಸವು ಆರ್ಥಿಕ ಮಿತವ್ಯಯ, ಪರಿಸರ ಸುಸ್ಥಿರತೆ ಮತ್ತು ಸಾಗಣೆ ದಕ್ಷತೆಯ ಕಳವಳವನ್ನು ಹೆಚ್ಚಿಸುತ್ತದೆ ಎಂಬುದಾಗಿ ಸರ್ಕಾರ ತಿಳಿಸಿದೆ.
ಜೈವಿಕವಾಗಿ ವಿಘಟನೆಯಲ್ಲದ ( Non-Biodegradable) ಲ್ಯಾಮಿನೇಟೆಡ್ ಮರ, ಪ್ಲಾಸ್ಟಿಕ್, ಲೋಹ ಮತ್ತು ಗಾಜಿನಂತಹ ಮರುಬಳಕೆ ಮಾಡಲಾಗದ ವಸ್ತುಗಳಿಂದ ತಯಾರಿಸಲ್ಪಟ್ಟ ವಸ್ತುಗಳಿಂದ ಸುತ್ತಮುತ್ತಲಿನ ನೈಸರ್ಗಿಕ ಪರಿಸರದ ಅವನತಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂಬುದಾಗಿ ಹೇಳಿದೆ.
ಈ ಎಲ್ಲಾ ಕಾರಣದಿಂದಾಗಿ ಪರಿಸರ ಸ್ನೇಹಿ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಮರಗಳ ಸಸಿಗಳು ಅಥವಾ ಕುಂಡಗಳಲ್ಲಿ ಬೆಳಸಿರುವ ಸಸ್ಯಗಳನ್ನು ವಿತರಿಸಬೇಕು. ಪುಸ್ತಕಗಳು ಅಥವಾ ಅಧಿಕೃತ ಪ್ರಕಟಣೆಗಳನ್ನು ನೀಡುವುದು. ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಕೈಮಗ್ಗ ಅಥವಾ ಕರಕುಶಲ ವಸ್ತುಗಳನ್ನು ನೀಡಬೇಕು. ಮರು ಬಳಕೆಯ ಕಾಗದದ ಮೇಲೆ ಮೆಚ್ಚುಗೆ ಪ್ರಮಾಣಪತ್ರಗಳನ್ನು ನೀಡಬಹುದು ಎಂದಿದೆ.
ಪರಿಸರ ಕಾಳಜಿ, ಸಾರ್ವಜನಿಕ ಹೊಣೆಗಾರಿಕೆ ಹಾಗೂ ಆಡಳಿತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಉಪಕ್ರಮಗಳನ್ನು ಅಳಡಿಸಿಕೊಳ್ಳುವಂತೆ ಖಡಕ್ ಸೂಚನೆಯನ್ನು ರಾಜ್ಯ ಸರ್ಕಾರ ನೀಡಿದೆ. ಹೀಗಿದ್ದರೂ ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯ್ತಿ ಪಿಡಿಓ ರಾಜು ಮಾತ್ರ, ಇಂದು ಆ ಎಲ್ಲಾ ನಿಯಮಗಳನ್ನು ಮೀರಿದ್ದಾರೆ. ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಬರೂರು ಗ್ರಾಮ ಪಂಚಾಯ್ತಿ ಸದಸ್ಯರಿಗೆ ಶಾಲು ಹೊದಿಸಿ, ಹಾರ ಹಾಕಿ, ನೆನಪಿನ ಕಾಣಿಕೆ ನೀಡಿದ್ದಾರೆ.
ಪಿಡಿಓ ರಾಜು ಹೇಳೋದೇನು?
ಈ ಬಗ್ಗೆ ಬರೂರು ಗ್ರಾಮ ಪಂಚಾಯ್ತಿ ಪಿಡಿಓ ರಾಜು ಅವರಿಗೆ ನಿಮ್ಮ ಕನ್ನಡ ನ್ಯೂಸ್ ನೌ ಪ್ರತಿಕ್ರಿಯೆ ಕೇಳಿದಾಗ, ಸಾಗರ ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ಇದೇ ರೀತಿಯಲ್ಲಿ ಮಾಡುತ್ತಿದ್ದಾರೆ. ನಾವು ಅದರಂತೆ ಮಾಡಿದ್ದೇವೆ. ನಾವೇನು ಹೊಸದಾಗಿ ಮಾಡಿಲ್ಲ. ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಬೀಳ್ಕೊಡುಗೆ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಪಿಡಿಓ ರಾಜು ಅವರ ಮಾತಿಗೆ ಮರು ಪ್ರಶ್ನೆಯನ್ನ ಹಾಕಿ ಹಾಗಾದ್ರೇ ರಾಜ್ಯ ಸರ್ಕಾರದ ಆದೇಶ ಓದಿಲ್ವ? ತಮ್ಮ ಇಂದಿನ ಕಾರ್ಯಕ್ರಮಕ್ಕೆ ಆ ಸುತ್ತೋಲೆಯ ನಿಮಗಳು ಅನ್ವಯ ಆಗೋದಿಲ್ವ ಅಂತ ಕೇಳಿದ್ರೇ ಪ್ರತ್ಯುತ್ತರವಿರಲಿಲ್ಲ. ಹೀಗಾಗಿ ಸಾಗರ ತಾಲ್ಲೂಕು ಇಓ ಅವರನ್ನು ಈ ಬಗ್ಗೆ ಮಾಹಿತಿ ಕೋರೋದಾಗಿ ಕರೆ ಕಡಿತಗೊಳಿಸಲಾಯಿತು.
ಪಿಡಿಒ ರಾಜು ಸಾಹೇಬ್ರೆ ಆರ್ಥಿಕ ಮಿತವ್ಯಯ ಕಾಪಾಡಬೇಕಿದ್ದ ತಾವೇ, ಹೀಗೆ ಮಾಡಿದ್ದು ಸರಿಯೇ?
ರಾಜ್ಯ ಸರ್ಕಾರವು ಆರ್ಥಿಕ ಮಿತವ್ಯಯದ ಜೊತೆಗೆ, ಪರಿಸರ ಸ್ನೇಹಿಯಾಗಿ ಸಭೆ, ಸಮಾರಂಭ ನಡೆಸುವಂತೆ ದಿನಾಂಕ 10-12-2025ರಂದು ಹೊರಡಿಸಿದಂತ ಆದೇಶದಲ್ಲಿ ತಿಳಿಸಲಾಗಿದೆ. ಆ ನಿಯಮ ಪಾಲಿಸಬೇಕಾದಂತ ಬರೂರು ಗ್ರಾಮ ಪಂಚಾಯ್ತಿ ಪಿಡಿಓ ರಾಜು ಅವರು ಮಾತ್ರ, ಡೋಂಟ್ ಕೇರ್ ಎನ್ನುವಂತೆ ಉಲ್ಲಂಘಿಸಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಬರೂರು ಗ್ರಾಮ ಪಂಚಾಯ್ತಿಯ 11 ಸದಸ್ಯರಿಗೆ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಶಾಲು ಹೊದಿಸಿ, ಹಾರ ಹಾಕಿ, ನೆನಪಿನ ಕಾಣಿಕೆಯನ್ನು ನೀಡಿದ್ದರ ಆರ್ಥಿಕ ಹೊರೆ ಹೋರುವವರು ಯಾರು? ಇದರ ಖರ್ಚು-ವೆಚ್ಚ ಭರಿಸೋದು ಸರ್ಕಾರವೋ ಅಥವಾ ನೀವೇ ಸ್ವಂತ ಹಣದಲ್ಲಿ ಖರ್ಚು ಮಾಡ್ತೀರಾ ಎಂಬುದು ಬರೂರು ಗ್ರಾಮಸ್ಥರ ಪ್ರಶ್ನೆಯಾಗಿದೆ. ಸರ್ಕಾರದ ಸುತ್ತೋಲೆಯಂತೆ ಪರಿಸರ ಸ್ನೇಹಿ, ಸರಳತೆಯನ್ನು ಏಕೆ ಮೆರೆದಿಲ್ಲ ಎಂಬುದಾಗಿಯೂ ಕೇಳುತ್ತಿದ್ದಾರೆ.
ಸಾಗರ ತಾಲ್ಲೂಕು ಇಒ ಶಿವಪ್ರಕಾಶ್ ಹೇಳಿದ್ದೇನು ಗೊತ್ತಾ?
ಈ ಕುರಿತು ಸಾಗರ ತಾಲ್ಲೂಕು ಇಒ ಶಿವಪ್ರಕಾಶ್ ಸಾಹೇಬ್ರನ್ನು ಕೇಳಿದಾಗ, ಯಾರೇ ಆದರೇ ರಾಜ್ಯ ಸರ್ಕಾರದ ನಿಯಮವನ್ನು ಪಾಲಿಸಲೇ ಬೇಕು. ಅದರಂತೆಯೇ ಸಭೆ, ಸಮಾರಂಭ ನಡೆಸಬೇಕು. ಈ ಬಗ್ಗೆ ಎಲ್ಲಾ ಪಿಡಿಒಗಳಿಗೆ ಸೂಚನೆ ನೀಡುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ ಬರೂರು ಗ್ರಾಮ ಪಂಚಾಯ್ತಿ ಪಿಡಿಒ ಅದ್ಧೂರಿ ಬೀಳ್ಕೊಡುಗೆಯ ಕುರಿತಂತೆ ಮಾಹಿತಿ ಪಡೆದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪಿಡಿಒ ರಾಜು ವಿರುದ್ಧ ಕ್ರಮಕ್ಕೆ ಒತ್ತಾಯ
ರಾಜ್ಯ ಸರ್ಕಾರದ ನಿಯಮವನ್ನು ಪಾಲಿಸದೇ ಪಿಡಿಒ ರಾಜು ಅವರು ಕರ್ತವ್ಯ ಲೋಪ ಎಸಗಿದ್ದಾರೆ. ಹಾರ, ತುರಾಯಿ, ನೆನಪಿನ ಕಾಣಿಕೆ ನೀಡಿದ್ದು ಸರ್ಕಾರದ ನಿಯಮವನ್ನೇ ಗಾಳಿಗೆ ತೂರಿದಂತೆ ಆಗಿದೆ. ಅವರ ವಿರುದ್ಧ ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದೆ ಹೀಗೆ ಯಾರು ನಡೆದುಕೊಳ್ಳದಂತೆ ಕ್ರಮವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಆ ನಿಟ್ಟಿನಲ್ಲಿ ಸಾಗರದ ಇಒ ಶಿವಪ್ರಕಾಶ್ ಸಾಹೇಬ್ರು ಕ್ರಮ ವಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು








