ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆದ ಮತದಾನ ಪ್ರಕ್ರಿಯೆ ನಡುವೆ, ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮತವನ್ನು ಅಸಿಂಧುಗೊಳಿಸಬೇಕೆಂದು ಕಾಂಗ್ರೆಸ್ ಸಲ್ಲಿಸಿದ್ದ ದೂರನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.
ವಿಧಾನಸೌಧದಲ್ಲಿ ಮತದಾನ ನಡೆದ ಬಳಿಕ ಯತ್ನಾಳ್ ವಿರುದ್ಧ ಚುನಾವಣಾ ಅಕ್ರಮದ ಆರೋಪ ಹೊರಿಸಿದ್ದ ಕಾಂಗ್ರೆಸ್ ನಾಯಕರು, ಅವರು ನಿಯಮ ಉಲ್ಲಂಘಿಸಿ ಮತ ಚಲಾಯಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಯತ್ನಾಳ್ ಅವರ ಮತವನ್ನು ಅಸಿಂಧು (ರದ್ದು) ಗೊಳಿಸಬೇಕು ಎಂದು ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ಅಧಿಕೃತವಾಗಿ ದೂರು ನೀಡಿದ್ದರು.
ದೂರು ತಿರಸ್ಕಾರಕ್ಕೆ ಕಾರಣವೇನು? ಕಾಂಗ್ರೆಸ್ ನೀಡಿದ್ದ ದೂರನ್ನು ಕೂಲಂಕಷವಾಗಿ ಪರಿಶೀಲಿಸಿದ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರು ದೂರನ್ನು ವಜಾಗೊಳಿಸಿದ್ದಾರೆ. “ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತದಾನದ ನಿಗದಿತ ಪ್ರದೇಶದಲ್ಲಿ (ವೋಟಿಂಗ್ ಕಂಪಾರ್ಟ್ಮೆಂಟ್) ತಮ್ಮ ಮತವನ್ನು ಬಹಿರಂಗಪಡಿಸುವ ಯಾವುದೇ ಹೇಳಿಕೆ ಅಥವಾ ನಡವಳಿಕೆ ತೋರಿಲ್ಲ. ಹಾಗಾಗಿ ನಿಯಮ ಉಲ್ಲಂಘನೆಯಾಗಿಲ್ಲ” ಎಂದು ಸ್ಪಷ್ಟಪಡಿಸಿರುವ ಅಧಿಕಾರಿ, ಯತ್ನಾಳ್ ಅವರ ಮತ ಸಿಂಧುವಾಗಿದೆ ಎಂದು ಪ್ರಕಟಿಸಿದ್ದಾರೆ.
ಇದರೊಂದಿಗೆ ಪರಿಷತ್ ಚುನಾವಣಾ ಕಣದಲ್ಲಿ ಯತ್ನಾಳ್ ಮತದಾನದ ಸುತ್ತ ಎದ್ದಿದ್ದ ರಾಜಕೀಯ ವಿವಾದಕ್ಕೆ ಸದ್ಯ ತೆರೆ ಬಿದ್ದಂತಾಗಿದೆ.








