ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಅತಿ ದೀರ್ಘಕಾಲದ ಚುನಾಯಿತ ಪ್ರಧಾನಿಯಾಗಿ ದಾಖಲೆ ನಿರ್ಮಿಸಿದ ಬೆನ್ನಲ್ಲೇ, ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅವರ ನಾಯಕತ್ವವನ್ನು ಶ್ಲಾಘಿಸಿ ನಿರ್ಣಯವನ್ನು ಅಂಗೀಕರಿಸಲಾಯಿತು. ‘ವಿಕಸಿತ ಭಾರತ’ದ ಸಂಕಲ್ಪ, ರಾಷ್ಟ್ರೀಯ ಭದ್ರತೆ, ಸರ್ವಸಮಾವೇಶದ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಮೋದಿಯವರ ದೃಷ್ಟಿಕೋನಕ್ಕೆ ಸಚಿವ ಸಂಪುಟ ಬೆಂಬಲ ವ್ಯಕ್ತಪಡಿಸಿತು.
ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಜವಾಹರಲಾಲ್ ನೆಹರು ಅವರ 4,398 ದಿನಗಳ ಚುನಾಯಿತ ಪ್ರಧಾನಿ ದಾಖಲೆಯನ್ನು ಹಿಂದಿಕ್ಕಿ 4,399 ದಿನಗಳನ್ನು ಪೂರೈಸಿರುವ ಪ್ರಧಾನಿಯವರಿಗೆ ಸಂಪುಟ ಅಭಿನಂದನೆ ಸಲ್ಲಿಸಿತು. ಅವರ ನಾಯಕತ್ವದಲ್ಲಿ ಭಾರತವು ‘ಸ್ವಾವಲಂಬಿ, ಸುರಕ್ಷಿತ ಮತ್ತು ಸಮೃದ್ಧ ರಾಷ್ಟ್ರ’ವಾಗಿ ಹೊಸ ಎತ್ತರವನ್ನು ಏರುತ್ತಿದೆ ಎಂದು ಸಚಿವ ಸಂಪುಟ ವಿಶ್ವಾಸ ವ್ಯಕ್ತಪಡಿಸಿತು.
ಪ್ರಧಾನಿ ಮೋದಿ ಅವರು ಅಧಿಕಾರದಲ್ಲಿ 4,399 ದಿನಗಳನ್ನು ಪೂರ್ಣಗೊಳಿಸುತ್ತಿದ್ದಂತೆ, ಕೇಂದ್ರ ಸಚಿವರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ (ಸ್ಟ್ಯಾಂಡಿಂಗ್ ಓವೇಶನ್) ಅವರಿಗೆ ಗೌರವ ಸಲ್ಲಿಸಿದರು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಮೋದಿಯವರ ಕಾರ್ಯಸೂಚಿಗೆ ಸಂಪುಟ ತನ್ನ “ಪೂರ್ಣ ಬೆಂಬಲ”ವನ್ನು ಘೋಷಿಸಿತು ಮತ್ತು ಅವರ “ನಿರಂತರ ಸಾರ್ವಜನಿಕ ಸೇವಾ ಮನೋಭಾವ”ವನ್ನು ಕೊಂಡಾಡಿತು.
”ಸರ್ವಸಮಾವೇಶದ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ”ಕ್ಕಾಗಿ ಮೋದಿ ಅವರು ಕೈಗೊಂಡ ಪ್ರಯತ್ನಗಳನ್ನು ನಿರ್ಣಯವು ಶ್ಲಾಘಿಸಿತು. ಅಲ್ಲದೆ, ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವಲ್ಲಿ ಮತ್ತು ಭಾರತದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಪ್ರಶಂಸಿಸಿತು.
ಬಡವರಿಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಅಂಚಿನಲ್ಲಿರುವ ವರ್ಗಗಳನ್ನು ಸಬಲೀಕರಣಗೊಳಿಸುವಲ್ಲಿ ಪ್ರಧಾನಿಯವರ ಕೊಡುಗೆಯನ್ನು ಸಂಪುಟ ಗುರುತಿಸಿತು. ಅವರ ಅವಧಿಯಲ್ಲಿ 25 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಅದು ಗಮನ ಸೆಳೆಯಿತು.
’ಅಚಲ ಕರ್ಮಯೋಗಿ’: ಐತಿಹಾಸಿಕ ಮೈಲಿಗಲ್ಲನ್ನು ಸಂಭ್ರಮಿಸುತ್ತಿರುವ
ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ 12 ವರ್ಷಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ಈ ನಿರ್ಣಯ ಬಂದಿದೆ. ಆರು ದಶಕಗಳ ನಂತರ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಸಾಧನೆಯನ್ನು ಮೋದಿ ಮಾಡಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ನಂತರ ಮೋದಿ ಅವರು ಮೊದಲ ಬಾರಿಗೆ ಮೇ 26, 2014 ರಂದು ಅಧಿಕಾರ ವಹಿಸಿಕೊಂಡರು. 2019ರಲ್ಲಿ ಹೆಚ್ಚಿನ ಬಹುಮತದೊಂದಿಗೆ ಅವರು ಮತ್ತೆ ಅಧಿಕಾರಕ್ಕೆ ಬಂದರು. ಬಿಜೆಪಿಯ ಸಂಖ್ಯಾಬಲ ಲೋಕಸಭೆಯಲ್ಲಿ ಕಡಿಮೆಯಾಗಿದ್ದರೂ, ಜೂನ್ 9, 2024 ರಂದು ಅವರು ಸತತ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದರು.
ಕಳೆದ 12 ವರ್ಷಗಳಲ್ಲಿ ಕೈಗೊಂಡ ವಿವಿಧ ಸುಧಾರಣೆಗಳು ಮತ್ತು ನೀತಿ ನಿರ್ಧಾರಗಳನ್ನು ಸಂಪುಟ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ವಿಧಿ 370 ರದ್ದು, ಜಿಎಸ್ಟಿ (GST) ಜಾರಿ, ಒನ್ ರ್ಯಾಂಕ್ ಒನ್ ಪೆನ್ಷನ್ (OROP), ಹೊಸ ಕ್ರಿಮಿನಲ್ ಕಾನೂನುಗಳು ಮತ್ತು ಉತ್ಪಾದನೆ ಹಾಗೂ ಸ್ವಾವಲಂಬನೆಯನ್ನು ಉತ್ತೇಜಿಸುವ ಕ್ರಮಗಳು ಸೇರಿವೆ.
ಜೊತೆಗೆ, ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಸರ್ಕಾರದ ಕ್ರಮಗಳು, ಎಡಪಂಥೀಯ ಉಗ್ರಗಾಮಿತ್ವವನ್ನು ನಿಭಾಯಿಸುವ ಪ್ರಯತ್ನಗಳು, ಈಶಾನ್ಯ ಭಾರತದಲ್ಲಿ ಶಾಂತಿ ಉಪಕ್ರಮಗಳು ಮತ್ತು ಜಿ-20 ನಂತಹ ವೇದಿಕೆಗಳ ಮೂಲಕ ಭಾರತದ ಜಾಗತಿಕ ವರ್ಚಸ್ಸು ಹೆಚ್ಚಾಗಿರುವುದನ್ನು ಸಚಿವ ಸಂಪುಟ ಈ ಸಂದರ್ಭದಲ್ಲಿ ಸ್ಮರಿಸಿತು.








