ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (PA) ಚಂದ್ರನಾಥ್ ಅವರ ಭೀಕರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ. ಮೇ 6 ರಂದು ನಡೆದಿದ್ದ ಈ ಹತ್ಯೆ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ತಾಂತ್ರಿಕ ಸುಳಿವು ನೀಡಿದ ಯುಪಿಐ ಪಾವತಿ: ಈ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಅತ್ಯಂತ ದೊಡ್ಡ ಸುಳಿವು ಸಿಕ್ಕಿದ್ದು ಒಂದು ಡಿಜಿಟಲ್ ಪಾವತಿಯಿಂದ. ಹತ್ಯೆಯ ನಂತರ ಆರೋಪಿಗಳು ವಾಹನದಲ್ಲಿ ಪರಾರಿಯಾಗಿದ್ದರು. ಈ ವೇಳೆ ಮಾರ್ಗಮಧ್ಯದ ಟೋಲ್ ಒಂದರಲ್ಲಿ ಆರೋಪಿಗಳ ಪೈಕಿ ಒಬ್ಬ ತನ್ನ ಮೊಬೈಲ್ ಮೂಲಕ ಯುಪಿಐ (UPI) ಬಳಸಿ ಟೋಲ್ ಶುಲ್ಕ ಪಾವತಿಸಿದ್ದ. ಈ ಡಿಜಿಟಲ್ ವಹಿವಾಟಿನ ಜಾಡನ್ನು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳ ಚಲನವಲನ ಮತ್ತು ಅವರ ಅಡಗುತಾಣಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಯಿತು.
ಅಂತರರಾಜ್ಯ ಕಾರ್ಯಾಚರಣೆ: ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ತಂಡವು ತಾಂತ್ರಿಕ ಮಾಹಿತಿಯನ್ನಾಧರಿಸಿ ಮೊದಲು ಬಿಹಾರಕ್ಕೆ ತಲುಪಿತು. ಅಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ನಂತರ, ಅವರ ನೀಡಿದ ಮಾಹಿತಿಯ ಮೇರೆಗೆ ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರನ್ನು ಸದ್ಯ ಪಶ್ಚಿಮ ಬಂಗಾಳಕ್ಕೆ ಕರೆತರಲಾಗಿದ್ದು, ಈ ಕೊಲೆಯ ಹಿಂದೆ ಕೇವಲ ವೈಯಕ್ತಿಕ ದ್ವೇಷವಿದೆಯೇ ಅಥವಾ ರಾಜಕೀಯ ಪಿತೂರಿ ಅಡಗಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹಿನ್ನೆಲೆ: ಕಳೆದ ಮೇ 6 ರಂದು ದುಷ್ಕರ್ಮಿಗಳು ಚಂದ್ರನಾಥ್ ಅವರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದರು. ಸಾರ್ವಜನಿಕವಾಗಿ ನಡೆದ ಈ ಹತ್ಯೆಯು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ದೊಡ್ಡ ಮಟ್ಟದ ಪ್ರಶ್ನೆಗಳನ್ನು ಎತ್ತಿತ್ತು. ಸುವೇಂದು ಅಧಿಕಾರಿ ಅವರು ಈ ಘಟನೆಯನ್ನು ರಾಜಕೀಯ ಪ್ರೇರಿತ ಹತ್ಯೆ ಎಂದು ಆರೋಪಿಸಿದ್ದರು. ಇದೀಗ ಆರೋಪಿಗಳ ಬಂಧನದಿಂದ ಹತ್ಯೆಯ ಹಿಂದಿನ ನೈಜ ಕಾರಣಗಳು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.








