ನವದೆಹಲಿ : ಗುಣವಾಗದಷ್ಟು ರೋಗಗ್ರಸ್ತವಾಗಿರುವ, ವ್ಯಗ್ರವಾಗಿ ವರ್ತಿಸುವ ಹಾಗೂ ಹುಚ್ಚು ಹಿಡಿದ ಬೀದಿ ನಾಯಿಗಳಿಗೆ ದಯಾಮರಣವನ್ನು ನೀಡಲು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಅನುಮತಿ ನೀಡಿದೆ. ಕೋರ್ಟ್ ಇಂಥ ಆದೇಶ ಮಾಡಿದ್ದು ದೇಶದ ಇತಿಹಾಸದಲ್ಲಿ ಮೊದಲು. ಇದೇ
ಕಳೆದ ವರ್ಷ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಪ್ರಕರಣಗಳು ವಿಪರೀತವಾದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಜು.28ರಂದು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿ ಕೊಂಡಿತ್ತು. ಈ ಬಗ್ಗೆ ನ್ಯಾ| ವಿಕ್ರಮ್ ನಾಥ್, ಸಂದೀಪ್ ಮೆಹ್ರಾ, ಎನ್.ವಿ. ಅಂಜಾರಿಯಾ ಅವರ ಪೀಠ ತೀರ್ಪು ಪ್ರಕಟಿಸಿತು. ‘ಇಂಥನಾಯಿಗಳಿಂದ ಮನುಷ್ಯರಿಗೆ ಆಗಬಹುದಾದಹಾನಿಯನ್ನು ತಪ್ಪಿಸುವ ಉದ್ದೇಶದೊಂದಿಗೆ ಈ ನಿರ್ದೇಶನ ನೀಡುತ್ತಿದ್ದೇವೆ’ ಎಂದು ನ್ಯಾಯಪೀಠ ಹೇಳಿತು.
ಬೀದಿನಾಯಿಗಳ ಸಂಖ್ಯೆ ವಿಪರೀತ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹಾಗೂ ನಾಯಿ ಕಡಿತ ಅಥವಾ ಆಕ್ರಮಣಕಾರಿ ದಾಳಿಗಳು ಆಗಾಗ್ಗೆ ಸಂಭವಿಸುತ್ತಿರುವ ಪ್ರದೇಶಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅರ್ಹ ಪಶುವೈದ್ಯ ತಜ್ಞರಿಂದ ಸೂಕ್ತ ಮೌಲ್ಯಮಾಪನ ನಡೆಸಬೇಕು. ಅದರಲ್ಲಿ ಕ್ರೋಧೋನ್ಮತ್ತ ನಾಯಿಗಳು, ಗುಣಪಡಿಸಲಾಗದಷ್ಟು ಅನಾರೋಗ್ಯಕರವಾಗಿರುವಹಾಗೂ ಹುಚ್ಚುನಾಯಿಗಳಿವೆಯೇ ಎಂಬುದನ್ನು ನಿಯಮಾನುಸಾರ ಖಚಿತಪಡಿಸಿಕೊಳ್ಳಬೇಕು. ಅಂಥ ನಾಯಿಗಳನ್ನು ಗುರುತಿಸಿ ದಯಾಮರಣ ಸೇರಿದಂತೆ ಕಾನೂನುಬದ್ದವಾಗಿ ಅನುಮತಿ ಸಬಹುದಾದ ಕ್ರಮಗಳನ್ನು ತೆಗೆದುಕೊಳ್ಳಬಹುದು’ ಎಂದು ಪೀಠ ಹೇಳಿತು.
ಇದೇ ವೇಳೆ, ‘ದಯಾಮರಣವನ್ನು ಕೊನೆ ಆಯ್ಕೆಯಾಗಿಟ್ಟುಕೊಳ್ಳಬೇಕು’ ಎಂದು ಸ್ಪಷ್ಟಪಡಿಸಿದ ಪೀಠ, ‘ವೈದ್ಯರ ಪರಿಶೀಲನೆಯ ಬಳಿಕ ಅಗತ್ಯವಿದ್ದರೆ ಮಾತ್ರ ದಯಾಮರಣ ಪ್ರಕ್ರಿಯೆಗೆ ಮುಂದಾಗಬೇಕು. ಇದು 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ನಿಬಂಧನೆಗಳು ಮತ್ತು 2023ರ ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು ಮತ್ತು ಇತರೆ ನಿಯಮಗಳಿಗೆ ಅನುಸಾರವಾಗಿ ನಡೆಯಬೇಕು. ನಾಗರಿಕರ ಸುರಕ್ಷತೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ’ ಎಂದು ಸೂಚಿಸಿತು.








