ಕಾಸರಗೋಡು: ನಗರ ಹೊರವಲಯದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದ ವೇಳೆ ನಿರೀಕ್ಷೆಗೂ ಮೀರಿ ಸೇರಿದ್ದ ಜನಸಂದಣಿಯಿಂದ ನೂಕುನುಗ್ಗಲು ಸಂಭವಿಸಿ, ಕನಿಷ್ಠ 15 ಮಂದಿ ಗಾಯಗೊಂಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ. ಗಾಯಗೊಂಡವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕಾಸರಗೋಡು ನಗರದ ಹಲವು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು ಫೀ ಯುವಜನ ಸಂಘಟನೆ ವತಿಯಿಂದ ನುಳ್ಳಿಪ್ಪಾಡಿ ಪ್ರದೇಶದಲ್ಲಿ ಆಯೋಜಿಸಿದ್ದ ಸಾಮಾಜಿಕ ಮಾಧ್ಯಮ ಪ್ರಭಾವಿ, ಗಾಯಕ ಹನಾನ್ ಷಾ ಅವರ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಸಾವಿರಾರು ಮಂದಿ ಸೇರಿದ್ದರು. ಕಾರ್ಯಕ್ರಮಕ್ಕೆ ಟಿಕೆಟ್ ವ್ಯವಸ್ಥೆ ಮಾಡಲಾಗಿತ್ತು. ಟಿಕೆಟ್ ಪಡೆದವರ ಜೊತೆ ಟಿಕೆಟ್ ಇಲ್ಲದವರೂ ಪ್ರಮುಖ ಗಾಯಕರನ್ನು ನೋಡುವ ಉತ್ಸಾಹದಲ್ಲಿ ಮೈದಾನಕ್ಕೆ ಒಳನುಗ್ಗಲು ಯತ್ನಿಸಿದಾಗ ಗೊಂದಲ ಸೃಷ್ಟಿಯಾಗಿ, ಹಲವರಿಗೆ ಉಸಿರಾಟದ ತೊಂದರೆ ಉಂಟಾಗಿ ಕುಸಿದು ಬಿದ್ದರು ಎನ್ನಲಾಗಿದೆ. ಪೊಲೀಸರು ನೀಡಿದ್ದ ಎಚ್ಚರಿಕೆಯನ್ನೂ ನಿರ್ಲಕ್ಷಿಸಿದ್ದರು ಎಂದು ಆರೋಪಿಸಲಾಗಿದೆ.
ಆ ಬಳಿಕ ಗುಂಪನ್ನು ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು. ಕಾರ್ಯಕ್ರಮದ ಆರಂಭಕ್ಕೂ ಮೊದಲೇ ಜಮಾಯಿಸಿದ್ದ ಜನಸಂದಣಿಯಿಂದ ಸಂಚಾರವೂ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು ಎಂದು ತಿಳಿದು ಬಂದಿದೆ.ಹನಾನ್ ಷಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮಾಹಿತಿ ಹರಡುತ್ತಿದ್ದಂತೆ ಜನರ ಸಂಖ್ಯೆ ಹೆಚ್ಚಾಯಿತು ಎಂದು ಮೂಲಗಳು ತಿಳಿಸಿವೆ. ನಿರೀಕ್ಷೆಗೂ ಅಧಿಕ ಜನರು ಆಗಮಿಸಿದ್ದ ಕಾರಣ ಆಯೋಜಕರು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ವೇದಿಕೆಯೇರಿ ಕಾರ್ಯಕ್ರಮ ಸ್ಥಗಿತವಾಗಿರುವ ಮಾಹಿತಿ ನೀಡಿದರು.
ಕಾರ್ಯಕ್ರಮದ ನಿರ್ವಾಹಕರು ತುರ್ತು ನಿರ್ಗಮನಗಳನ್ನು ತೆರೆದು ಜನರನ್ನು ಹೊರಗೆ ಕಳುಹಿಸುವಂತೆ ಮೈಕ್ ಮೂಲಕ ಮನವಿ ಮಾಡಿಕೊಂಡರು. ಆ ಬಳಿಕ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮೈದಾನ ಅಲ್ಲದೆ ಹೊರಗಡೆ ಜನರಿಂದ ಆಂಬುಲೆನ್ಸ್ ಸೇರಿದಂತೆ ಅಗತ್ಯ ಸೇವೆಗಳಿಗೆ ಪೊಲೀಸರು ಪರದಾಡುವಂತಾಯಿತು.








