ಬೆಂಗಳೂರು, ಮಾರ್ಚ್ 24, (ಕರ್ನಾಟಕ ವಾರ್ತೆ) : ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯುವ ಮತ್ತು ಮರ್ಯಾದಾ ಹತ್ಯೆ ಯಂತಹ ಅಮಾನವೀಯ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಕರ್ನಾಟಕ ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ-2026 ನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ವಿಧಾನ ಪರಿಷತ್ತಿನ ಕಲಾಪದ ವೇಳೆ ಮಂಡಿಸುತ್ತಾ ವಿಧೇಯಕದ ಉದ್ದೇಶಗಳು ಮತ್ತು ಕಾರಣಗಳ ಬಗ್ಗೆ ವಿವರಿಸಿದರು.
ಕರ್ನಾಟಕ ರಾಜ್ಯದಲ್ಲಿ ಜಾತಿ-ಆಧಾರಿತ ತಾರತಮ್ಯವು ನಿರಂತರವಾಗಿ, ಅಂತರ್ಜಾತಿ ವಿವಾಹಗಳ ಮೂಲಕ ಅವರ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸುವವರ, ವಿಶೇಷವಾಗಿ ಯುವ ವಯಸ್ಕರ ವಿರುದ್ಧ ಮರ್ಯಾದೆಗೇಡು ಹತ್ಯೆಗಳನ್ನು ಒಳಗೊಂಡಂತೆ ಕ್ರೂರ ಸ್ವರೂಪದ ಹಿಂಸಾಚಾರಗಳು ವ್ಯಕ್ತವಾಗುತ್ತಿರುವುದು ಮುಂದುವರಿಯುತ್ತಿರುವುದರಿಂದ ಮತ್ತು ಕೊಲೆ, ಹಲ್ಲೆ ಮತ್ತು ಅಪರಾಧಿಕ ಬೆದರಿಸುವಿಕೆಯಂತಹ ಅಪರಾಧಗಳು ಭಾರತೀಯ ನ್ಯಾಯ ಸಂಹಿತೆ, 2023 (2023ರ ಕೇಂದ್ರ ಅಧಿನಿಯಮ 45)ರಡಿ ಶಿಕ್ಷಾರ್ಹವಾಗಿದ್ದರೂ, ಈ ಉಪಬಂಧಗಳು ಜೀವಂತ ಹೆಣ್ಣುಮಕ್ಕಳಿಗೆ ಮರಣದ ಆಚರಣೆಗಳನ್ನು (ತಿಥಿ) ಮಾಡುವುದರಿಂದ, ಕಾನೂನುಬದ್ಧ ಪಿತ್ರಾರ್ಜಿತ ಹಕ್ಕುಗಳನ್ನು ನಿರಾಕರಿಸುವುದರಿಂದ, ಸಾಮಾಜಿಕ ಬಹಿಷ್ಕಾರದಿಂದ, ವಿಷಪೂಣಿಸುವ ಮೂಲಕ ಅಥವಾ ಇತರ ನಿಗೂಢ ವಿಧಾನಗಳ ಮೂಲಕ ಹಾನಿಯನ್ನುಂಟು ಮಾಡುವ ಕಪಟ ಪ್ರಯತ್ನಗಳಿಂದ ಪರಿಗಣಿಸಲಾದ “ಜಾತಿ ಮರ್ಯಾದೆ” ಯನ್ನು ಸಂರಕ್ಷಿಸುವ ನಿರ್ದಿಷ್ಟ ಸಾಮಾಜಿಕ ಉದ್ದೇಶವನ್ನು ಅಥವಾ ವ್ಯಾಪಕ ಶ್ರೇಣಿಯ ದಬ್ಬಾಳಿಕೆಯ ಅಭ್ಯಾಸಗಳನ್ನು ಸಮರ್ಪಕವಾಗಿ ಪರಿಹರಿಸುತ್ತಿಲ್ಲವಾದ್ದರಿಂದ. ಅಂಥ ಕೃತ್ಯಗಳು ಭಾರತ ಸಂವಿಧಾನದ 14, 15, 19 ಮತ್ತು 21ನೇ ಅನುಚ್ಛೇದಗಳಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ, ಜಾತಿಯ ಶ್ರೇಣೀಕರಣ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಸಾಧನವಾಗಿ ಅಂತರ್ಜಾತಿ ವಿವಾಹಗಳನ್ನು ಪ್ರತಿಪಾದಿಸಿದ ಶ್ರೀ ಬಸವಣ್ಣ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರಂತಹ ಸಮಾಜ ಸುಧಾರಕ ಯುಗಪ್ರವರ್ತಕರ ದೃಷ್ಟಿಕೋನವನ್ನು ದುರ್ಬಲಗೊಳಿಸುತ್ತವೆ.
ಹಾಗೂ ಇದರಿಂದಾಗಿ, ಈಗಾಗಲೇ ಇರುವ ಕಾನೂನುಗಳು, ಅಪಾಯದಲ್ಲಿರುವ ದಂಪತಿಗಳ ರಕ್ಷಣೆಗಾಗಿ ಪೂರ್ವಭಾವಿ ಕಾರ್ಯವ್ಯವಸ್ಥೆಗಳು, ಕಡ್ಡಾಯ ಪೊಲೀಸ್ ಹಸ್ತಕ್ಷೇಪ, ತ್ವರಿತಗತಿಯ ನ್ಯಾಯಿಕ ತೀರ್ಪು ಮತ್ತು ಆನುವಂಶಿಕವಾದ ಅಂಥ ನಾಗರಿಕ ಹಕ್ಕುಗಳ ಮರುಸ್ಥಾಪನೆಯಲ್ಲಿ ಕೆಲವು ನ್ಯೂನ್ಯತೆಗಳನ್ನು ಹೊಂದಿರುತ್ತವೆ. ಇದಕ್ಕೇಂದೇ ಮೀಸಲಾದ ಶಾಸನವು ಇಲ್ಲವಾದ್ದರಿಂದ, ದುಷ್ಕೃತ್ಯವನ್ನು ಎಸಗಿದವರು ಆಗಾಗ್ಗೆ ಕಠಿಣ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವುದರಿಂದ ಮತ್ತು ಸಂತ್ರಸ್ತರು ಅಥವಾ ಬದುಕುಳಿದವರು ಅಸಮರ್ಪಕವಾದ ಪರಿಹಾರ ಹಾಗೂ ಪುನರ್ವಸತಿಯನ್ನು ಪಡೆಯುತ್ತಿರುವುದರಿಂದಮತ್ತು ಭಾರತದ ಸಂವಿಧಾನವು ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಹಾಗೂ ಸಮಗ್ರತೆಯನ್ನು ಸುಭದ್ರಗೊಳಿಸುವ ಭ್ರಾತೃತ್ವದ ತತ್ತ್ವವನ್ನು ಪ್ರತಿಪಾದಿಸುತ್ತದೆ ಹಾಗೂ ಈ ತತ್ತ್ವವು ಜಾತಿ ಆಧಾರಿತ ತಾರತಮ್ಯವನ್ನು ನಿರ್ಮೂಲನೆ ಮಾಡಲು ಮತ್ತು ಅಂತರ್ಜಾತಿ ವಿವಾಹಗಳ ಮನ್ನಣೆ ಮತ್ತು ರಕ್ಷಣೆಯ ಮೂಲಕ ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸಲು ಒತ್ತಾಯಿಸುತ್ತದೆ.
ಆದ್ದರಿಂದ, (i) ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ಉಪಬಂಧಿಸಲು ಮತ್ತು ಜಾತಿ ಆಧಾರಿತ ಅಪರಾಧಗಳನ್ನು ಪ್ರತಿಬಂಧಿಸಲು ಮತ್ತು ನಿಷೇಧಿಸಲು, (ii) ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು, (iii) ಅಂತರ್ಜಾತಿ ವಿವಾಹಕ್ಕೆ ಗೌರವವನ್ನು ನೀಡಲು, (iv) ವೈಯಕ್ತಿಕ ಆಯ್ಕೆಗಳಲ್ಲಿ ಬಲವಂತದ ಜಾತಿ ಆಧಾರಿತ ತಾರತಮ್ಯವನ್ನು ಪ್ರತಿಬಂಧಿಸಲು ಮತ್ತು (v) ಅಂತರ್ಜಾತಿಯ ವಿವಾಹಗಳನ್ನು ವಿಧಿವತ್ತಾಗಿ ನೆರವೇರಿಸುವುದಕ್ಕೆ ‘ಇವ ನಮ್ಮವ ಇವ ನಮ್ಮವ ವೇದಿಕೆ’ ಯನ್ನು ರಚಿಸಲು, ಶಾಸನವನ್ನು ರಚಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ವಿಧೇಯಕವನ್ನು ಅಂಗೀಕರಿಸುವಂತೆ ಕೋರಿದರು.
ವಿಧೇಯಕದ ಪ್ರಮುಖ ಉದ್ದೇಶಗಳು:
12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಇವ ನಮ್ಮವ ಇವ ನಮ್ಮವ ಎಂಬ ಸಮಾನತೆಯ ಸಂದೇಶದಿಂದ ಪ್ರೇರಿತವಾಗಿರುವ ಈ ಕಾಯ್ದೆಯು ಪ್ರಮುಖ ಅಂಶಗಳನ್ನು ಒಳಗೊಂಡಿದೆ:
ಆಯ್ಕೆಯ ಸ್ವಾತಂತ್ರ್ಯ: ವಯಸ್ಕರಾದ ಇಬ್ಬರು ವ್ಯಕ್ತಿಗಳು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗುವ ಸಾಂವಿಧಾನಿಕ ಹಕ್ಕನ್ನು ಎತ್ತಿಹಿಡಿಯುವುದು. ಇದಕ್ಕೆ ಪೋಷಕರ ಅಥವಾ ಸಮಾಜದ ಪೂರ್ವಾನುಮತಿ ಅಗತ್ಯವಿಲ್ಲ ಎಂದು ವಿಧೇಯಕ ಸ್ಪಷ್ಟಪಡಿಸುತ್ತದೆ.
ಕಠಿಣ ಶಿಕ್ಷೆ: ‘ಮರ್ಯಾದೆ’ಯ ಹೆಸರಿನಲ್ಲಿ ನಡೆಯುವ ಹತ್ಯೆಗಳಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧೇಯಕವು ಪ್ರಸ್ತಾಪಿಸಿದೆ. ಗಂಭೀರ ಗಾಯಗೊಳಿಸುವ ಅಥವಾ ದೈಹಿಕ ಹಿಂಸೆ ನೀಡುವ ಅಪರಾಧಗಳಿಗೆ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
ರಕ್ಷಣೆ ಮತ್ತು ಭದ್ರತೆ: ಬೆದರಿಕೆ ಎದುರಿಸುತ್ತಿರುವ ಅಂತರ್ಜಾತಿ ಅಥವಾ ಅಂತರ್ಧರ್ಮೀಯ ದಂಪತಿಗಳಿಗೆ ದೂರು ನೀಡಿದ 6 ಗಂಟೆಗಳ ಒಳಗಾಗಿ ಪೊಲೀಸ್ ರಕ್ಷಣೆ ಒದಗಿಸಲು ಕಾಯ್ದೆ ಕಡ್ಡಾಯಗೊಳಿಸುತ್ತದೆ.
ಇವ ನಮ್ಮವ ವೇದಿಕೆ: ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ವೇದಿಕೆಗಳನ್ನು ರಚಿಸಿ, ಅಂತಹ ದಂಪತಿಗಳಿಗೆ ಕಾನೂನು ನೆರವು, ಕೌನ್ಸಿಲಿಂಗ್ ಮತ್ತು ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲಾಗುವುದು.
ಸಾಮಾಜಿಕ ಬಹಿಷ್ಕಾರಕ್ಕೆ ನಿಷೇಧ: ಮದುವೆಯಾದ ದಂಪತಿಗಳನ್ನು ಅಥವಾ ಅವರ ಕುಟುಂಬವನ್ನು ಗ್ರಾಮದಿಂದ ಅಥವಾ ಸಮುದಾಯದಿಂದ ಬಹಿಷ್ಕರಿಸುವುದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ.
ಕಾಯ್ದೆಯ ಇತರ ಪ್ರಮುಖ ವಿಶೇಷತೆಗಳು
ಜಿಲ್ಲಾ ದಂಡಾಧಿಕಾರಿಗಳ ಜವಾಬ್ದಾರಿ: ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು (DC) ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು (SP) ಅಂತರ್ಜಾತಿ/ಅಂತರ್ಧರ್ಮೀಯ ದಂಪತಿಗಳ ರಕ್ಷಣೆಗೆ ವಿಶೇಷ ಘಟಕವನ್ನು ರಚಿಸಬೇಕು.
ಸಹಾಯವಾಣಿ (Helpline): ದಂಪತಿಗಳು ತೊಂದರೆಯಲ್ಲಿದ್ದಾಗ ತಕ್ಷಣ ಕರೆ ಮಾಡಲು 24/7 ಮೀಸಲಾದ ಸಹಾಯವಾಣಿ ಸಂಖ್ಯೆಯನ್ನು ಸರ್ಕಾರ ನೀಡಲಿದೆ.
ಸೇಫ್ ಹೌಸ್ (Safe Houses): ಬೆದರಿಕೆ ಇರುವ ದಂಪತಿಗಳಿಗೆ ಸರ್ಕಾರಿ ವೆಚ್ಚದಲ್ಲಿ ಸುರಕ್ಷಿತ ವಸತಿ (Safe Houses) ವ್ಯವಸ್ಥೆಯನ್ನು ಒಂದು ತಿಂಗಳ ಕಾಲ ಅಥವಾ ಅಪಾಯ ಇರುವವರೆಗೆ ಒದಗಿಸಲಾಗುತ್ತದೆ.
ತ್ವರಿತಗತಿ ನ್ಯಾಯಾಲಯ (Fast-track Courts): ಈ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಗಳ ಮೂಲಕ 6 ತಿಂಗಳ ಒಳಗಾಗಿ ವಿಲೇವಾರಿ ಮಾಡಬೇಕು.
ಸಮಾಜದ ಮೇಲೆ ಹೊಣೆಗಾರಿಕೆ: ಯಾವುದೇ ಗುಂಪು ಅಥವಾ ಸಮುದಾಯದ ಮುಖಂಡರು ‘ಗೌರವ’ದ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡರೆ, ಆ ಇಡೀ ಗುಂಪನ್ನು ಅಪರಾಧಕ್ಕೆ ಪ್ರಚೋದನೆ ನೀಡಿದವರು ಎಂದು ಪರಿಗಣಿಸಲಾಗುತ್ತದೆ.
ಈ ವಿಧೇಯಕದ ಮುಖ್ಯ ಉದ್ದೇಶ “ವಯಸ್ಕರ ಮದುವೆಯಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ಕಾನೂನುಬಾಹಿರ” ಎಂದು ಘೋಷಿಸುವುದು. ಸಂವಿಧಾನದ 21ನೇ ವಿಧಿಯಡಿ ಇರುವ ‘ವೈಯಕ್ತಿಕ ಸ್ವಾತಂತ್ರ್ಯ’ವನ್ನು ಇದು ರಕ್ಷಿಸುತ್ತದೆ
ವಿಧೇಯಕ ಮಂಡಿಸಿ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್ ಅವರು, ಇಷ್ಟು ಮಹತ್ವ ಕೊಟ್ಟು ಸದನದಲ್ಲಿ ಚರ್ಚೆ ಆದ ವಿಧೇಯಕ ಅಂದರೆ ಈ ವಿಧೇಯಕ ಮೊದಲನೆಯದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಸುಮಾರು ಐದು ಗಂಟೆಗಳ ಕಾಲ ಈ ವಿಧೇಯಕದ ಮೇಲೆ ಇಂದು ಚರ್ಚೆ ನಡೆದಿದೆ. ಎಲ್ಲರೂ ತಮ್ಮ ವೈಯಕ್ತಿಕ ಅನುಭವ, ಆರ್ಥಿಕ, ಸಾಮಾಜಿಕ, ನೈತಿಕತೆಯನ್ನು ಮರೆ ಮಾಡದೆ, ತಮ್ಮ ಮನದಾಳದ ಮಾತುಗಳನ್ನು ಇಲ್ಲಿ ಹಂಚಿಕೊಂಡಿರುವುದಕ್ಕೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅದೇ ರೀತಿ ಈ ವಿಧೇಯಕ ಮಂಡನೆಗೆ ಸಭಾಪತಿಗಳಾಗಿ ತಾವು ತೋರಿದ ಗಾಂಭೀರ್ಯತೆಗೆ ಸರ್ಕಾರದ ಪರವಾಗಿ ಹಾಗೂ ಸಚಿವನಾಗಿ ನಾನು ತಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ತಿಳಿಸಿದರು.
“ಇದು ಕೇವಲ ಒಂದು ಕಾನೂನಲ್ಲ, ಇದೊಂದು ಸಾಮಾಜಿಕ ಕ್ರಾಂತಿ. ಪ್ರೀತಿ ಮತ್ತು ವಿವಾಹದ ಹೆಸರಿನಲ್ಲಿ ಯುವಜನತೆಯ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯುವುದು ಮತ್ತು ಸಂವಿಧಾನ ನೀಡಿದ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ,” ಎಂದು ತಿಳಿಸಿದರು.
ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕರಾದ ಛಲವಾಧಿ ಟಿ ನಾರಾಯಣಸ್ವಾಮಿ ಅವರೂ ಸೇರಿದಂತೆ, ಸದಸ್ಯರುಗಳಾದ ಶಿವಕುಮಾರ್.ಕೆ, ಕೆ.ಎಸ್. ನವೀನ್, ಐವಾನ್ ಡಿಸೋಜ, ಭೋಜೇಗೌಡ, ಹೆಚ್. ವಿಶ್ವನಾಥ, ಟಿ.ಎ. ಶರವಣ, ಅರುಣ್ ಡಿ.ಎಸ್, ಎಂ. ನಾಗರಾಜು, ರಮೇಶ್ ಬಾಬು, ಸಿ.ಟಿ. ರವಿ, ಶ್ರೀಮತಿ ಭಾರತಿಶೆಟ್ಟಿ, ಶ್ರೀಮತಿ ಉಮಾಶ್ರೀ, ಪಿ.ಹೆಚ್. ಪೂಜಾರ್, ಎಸ್.ವ್ಹಿ. ಸಂಕನೂರ, ಪ್ರತಾಪ್ ಸಿಂಹನಾಯಕ, ಡಾ. ತಿಮ್ಮಯ್ಯ, ಜಕ್ಕಪ್ಪನವರ್, ಶಾಂತರಾಮ್ ಬುಡ್ನ ಸಿದ್ದಿ, ವಸಂತ್ ಕುಮಾರ್, ಎಸ್.ರವಿ ಅವರುಗಳು ವಿಧೇಯಕವನ್ನು ಪರ್ಯಾಲೋಚಿಸಿ, ವಿಧೇಯಕನ್ನು ಕೇವಲ ಜಾರಿ ಮಾಡುವುದು ಸರ್ಕಾರದ ಉದ್ದೇಶವಾಗಬಾರದು, ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತಹ ಕೆಲಸವಾಗಬೇಕು ಹಾಗೂ ಯಾರೇ ತಪ್ಪೆಸಗಿದರೂ ಸಹ ಶಿಕ್ಷೆ ಆಗಬೇಕು ಅಂತಹ ಕೆಲವು ನಿಯಮಗಳನ್ನು ಸಹ ಈ ವಿಧೇಯಕದಲ್ಲಿ ಜಾರಿ ತರುವುದರೊಂದಿಗೆ ಪಾಲನೆಮಾಡುವಂತ ಕೆಲಸವಾಗಬೇಕು ಎಂದು ತಿಳಿಸಿ ಸಹಮತ ವ್ಯಕ್ತಪಡಿಸಿಸಿದರು.
ನಂತರ ವಿಧೇಯಕವನ್ನು ಸಭಾಪತಿ ಬಸವರಾಜ ಎಸ್ ಹೊರಟ್ಟಿ ಅವರು ವಿಧಾನಪರಿಷತ್ತಿನಲ್ಲಿ ಅಂಗೀಕರಿಸಿದರು.








