ಬೆಂಗಳೂರು : ಬೆಂಗಳೂರಿನಲ್ಲಿ ಭಾರತೀಯ ಸಶಸ್ತ್ರ ಪಡೆಯ ಅಧಿಕಾರಿಯೊಬ್ಬರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ. ಹಲ್ಲೆಗೊಳಗಾದ ಅಧಿಕಾರಿ ತಮ್ಮ ಮೇಲಾದ ಹಲ್ಲೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೀಗ ಘಟನೆ ಕುರಿತಂತೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಹೌದು ಬೆಂಗಳೂರಿನಲ್ಲಿ ಭಾರತೀಯ ಸಶಸ್ತ್ರ ಪಡೆಯ ಅಧಿಕಾರಿಯೊಬ್ಬರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಧಿಕಾರಿಯು ತಮ್ಮ ಪತ್ನಿಯೊಂದಿಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಗುಂಪೊಂದು ಹಲ್ಲೆ ಮಾಡಿದೆ ಎನ್ನಲಾಗಿದೆ. ಹಲ್ಲೆಗೊಳಾಗದ ಅಧಿಕಾರಿಯ ಮುಖ ಮತ್ತು ತಲೆಗೆ ಗಾಯಗಳಾಗಿದ್ದು, ರಕ್ತ ಹರಿದಿದೆ. ತಮ್ಮ ಮೇಲೆ ಆದ ಹಲ್ಲೆ ಕುರಿತು ವಿವರಿಸಿ ಅಧಿಕಾರಿ ವಿಡಿಯೋ ಮಾಡಿದ್ದಾರೆ.
ನಾವು ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿರುವ ಡಿಆರ್ಡಿಒ ಕಾಲೋನಿಯಲ್ಲಿ ವಾಸವಾಗಿದ್ದು, ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇವು. ಈ ವೇಳೆ ನಮ್ಮ ಕಾರನ್ನು ಹಿಂಬಾಲಿಸಿಕೊಂಡು ಬಂದ ಓರ್ವ ಬೈಕ್ ಸಾವರ, ನಮಗೆ ಅಡ್ಡ ಹಾಕಿದ್ದಾನೆ. ಆಗ ನಾನು ಕಾರು ನಿಲ್ಲಿಸಿದೆ. ನಂತರ ಆ ವ್ಯಕ್ತಿ ಏಕಾಏಕಿ ಕನ್ನಡದಲ್ಲಿ ನನ್ನನ್ನು ನಿಂದಿಸಲು ಪ್ರಾರಂಭಿಸಿದನು. ನನ್ನ ಕಾರಿನ ಮೇಲೆ ಡಿಆರ್ಡಿಒ ಸ್ಟಿಕ್ಕರ್ ನೋಡಿ ‘ನೀವು ಡಿಆರ್ಡಿಒ ಜನರು’ ಎಂದು ಹೇಳಿ, ನನ್ನ ಹೆಂಡತಿಯನ್ನೂ ಅವಾಚ್ಯ ಶಬ್ಧಗಳಿಂದ ನಿಂದಿಸಿದನು. ಮತ್ತು ನನಗೆ ಅದು ಸಹಿಸಲಾಗಲಿಲ್ಲ. ನಾನು ಕಾರಿನಿಂದ ಇಳಿದ ಕ್ಷಣ, ಆ ವ್ಯಕ್ತಿ ಕೀಲಿಯಿಂದ ನನ್ನ ಹಣೆಗೆ ಹೊಡೆದನು” ಎಂದು ಹೇಳಿದರು.