ಕಲಬುರ್ಗಿ : ಇತ್ತೀಚಿಗೆ ಕಲಬುರ್ಗಿ ಜೈಲಿನಲ್ಲಿ ಕೈದಿಗಳು ಗುಟ್ಕಾ ಸಿಗರೇಟ್ ಸರಿದಂತೆ ಮಾದಕ ವಸ್ತುಗಳನ್ನು ಬಳಸುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಕಮಿಷನರ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಇದೀಗ ಜೈಲಿನ ವಿರುದ್ಧ ಮತ್ತೊಂದು ಗಂಭೀರವಾದ ಆರೋಪ ಕೇಳಿ ಬಂದಿದ್ದು, ಜೈಲಿನಲ್ಲಿರುವ ಉಗ್ರನೊಬ್ಬ ಸಹಕೈದಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹನಿ ಟ್ರ್ಯಾಪ್ ಮಾಡಿರುವ ಆರೋಪ ಕೇಳಿ ಬಂದಿದೆ.
ಹೌದು ಭಯೋತ್ಪಾದನೆ ಪ್ರಕರಣದ ವಿಚಾರಣಾಧೀನ ಕೈದಿ ಜುಲ್ಫಿಕರ್ ಹಾಗೂ ಶಿವಮೊಗ್ಗದ ರೌಡಿ ಶೀಟರ್ ಬಚ್ಚನ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.ಕೆಲ ಕೈದಿಗಳನ್ನು ವಿಡಿಯೊ ಕಾಲ್ ನೆಪದಲ್ಲಿ ಹನಿ ಟ್ರ್ಯಾಪ್ಗೆ ಕೆಡವಿ, ಅವರಿಗೆ ಹಣದ ಬೇಡಿಕೆ ಇರಿಸುತ್ತಿದ್ದಾರೆ. ಕೈದಿಗಳಿಂದ ಹಣ ಪಡೆದ ಕೆಲ ಜೈಲು ಸಿಬ್ಬಂದಿಯ ದೃಶ್ಯಗಳನ್ನೂ ವಿಡಿಯೊ ಮಾಡಿಕೊಂಡು ಅವರಿಗೂ ಬೆದರಿಕೆ ಹಾಕುತ್ತಿದ್ದಾರೆ.
ಈ ಕುರಿತಾಗಿ ಜೈಲಿನ ಕೈದಿಯೊಬ್ಬರ ಫೋನ್ ಕರೆಯ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಭಯೋತ್ಪಾದನೆ ಪ್ರಕರಣದ ವಿಚಾರಣಾಧೀನ ಕೈದಿ ಜುಲ್ಫಿಕರ್ ಹಾಗೂ ಶಿವಮೊಗ್ಗದ ರೌಡಿ ಶೀಟರ್ ಬಚ್ಚನ್, ಕೊಲೆ ಪ್ರಕರಣದ ಸಜಾ ಕೈದಿ ಸಾಗರ ಶಿವಪ್ಪ ತನ್ನ ಸ್ನೇಹಿತ ಅಯ್ಯಪ್ಪ ಜತೆಗೆ ಪೋನ್ನಲ್ಲಿ ಮಾತನಾಡಿದ 4.50 ನಿಮಿಷಗಳ ಆಡಿಯೊದಿಂದ ಈ ವಿಷಯ ತಿಳಿದುಬಂದಿದೆ.
ಬಚ್ಚನ್ ಮತ್ತು ಜುಲ್ಫಿಕರ್ ಬಳಿ ನಾಲ್ಕೈದು ಮೊಬೈಲ್ಗಳಿವೆ. ಮೊನ್ನೆ ನನ್ನನ್ನು ಅವರ ಸೆಲ್ಗೆ ಕರೆಸಿಕೊಂಡು, ಆಂಟಿ ಜತೆಗೆ ವಿಡಿಯೊ ಕಾಲ್ನಲ್ಲಿ ಮಾತಾಡುವಂತೆ ಮೊಬೈಲ್ ಕೊಟ್ಟರು. ಇಬ್ಬರನ್ನೂ ಬೆತ್ತಲೆಯೂ ಮಾಡಿಸಿದ್ದರು. ನನ್ನ ಗಮನಕ್ಕೆ ಬಾರದಂತೆ ಮೊಬೈಲ್ ಸ್ಕ್ರೀನ್ ರೆಕಾರ್ಡಿಂಗ್ ಸಹ ಮಾಡಿಕೊಂಡಿದ್ದರು ಎಂದು ಸಾಗರ ಹೇಳಿರುವುದು ಆಡಿಯೊದಲ್ಲಿದೆ.
ಜೈಲಿನ 60-70 ಸಿಬ್ಬಂದಿ ಕೈದಿಗಳಿಂದ ಹಣ ಪಡೆದಿರುವ ದೃಶ್ಯಗಳ ವಿಡಿಯೊ ಮಾಡಿಕೊಂಡಿದ್ದಾರೆ. ತಮ್ಮ ಕೃತ್ಯಕ್ಕೆ ಅಡ್ಡಿಪಡಿಸಿದರೆ ಆ ವಿಡಿಯೊಗಳನ್ನು ಹರಿಬಿಡುವುದಾಗಿ ಅವರಿಗೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಸಿಬ್ಬಂದಿ ಸಹ ಅವರಿಗೆ ಸಾಥ್ ಕೊಡುತ್ತಿದ್ದಾರೆ. ಜುಲ್ಫಿಕರ್ಗೆ ಪಾಕಿಸ್ತಾನದ ಉಗ್ರರ ಜತೆಗೆ ನಂಟಿದ್ದು, ಮುಸ್ಲಿಂ ಆಗುವಂತೆ ಜೈಲಿನಲ್ಲಿ ಇದ್ದವರಿಗೆ ಹುರಿದುಂಬಿಸುತ್ತಾನೆ. ಸಕಲ ರೀತಿಯ ಸೌಕರ್ಯ ಪಡೆದಿದ್ದಾನೆ ಎಂದು ಸಾಗರ ಫೋನ್ ಸಂಭಾಷಣೆಯಲ್ಲಿ ಆರೋಪಿಸಿದ್ದಾನೆ.