ಬೆಂಗಳೂರು: ಸಿಲಿಕಾನ್ ಸಿಟಿಯ ತಿಗಳರಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ನಡೆದ ಯುವತಿಯ ನಿಗೂಢ ಕೊಲೆ ಪ್ರಕರಣಕ್ಕೆ ಈಗ ಭಾರಿ ತಿರುವು ಸಿಕ್ಕಿದೆ. ಆಟೋ ಚಾಲಕನೊಬ್ಬ ತನಗೆ ಈಗಾಗಲೇ ಮದುವೆಯಾಗಿರುವ ವಿಷಯವನ್ನು ಮುಚ್ಚಿಟ್ಟು ಯುವತಿಯನ್ನು ಪ್ರೀತಿಸಿ, ಕೊನೆಗೆ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ.
ಭವಾನಿ ಕೊಲೆಯಾದ ದುರ್ದೈವಿ ಯುವತಿ. ಸದ್ಯ ಆರೋಪಿ ಚಂದ್ರಶೇಖರ್ ಆಲಿಯಾಸ್ ಚಂದು ತಾನೂ ಸಹ ವಿಷ ಸೇವಿಸಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಆಟೋ ಪ್ರಯಾಣದಲ್ಲಿ ಶುರುವಾದ ಪ್ರೇಮ ಕಥೆ:
ಆರೋಪಿ ಚಂದ್ರಶೇಖರ್ ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ವಾಸವಿದ್ದು, ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಒಂದೊಮ್ಮೆ ಭವಾನಿ ಆತನ ಆಟೋ ಹತ್ತಿದಾಗ ಇಬ್ಬರ ನಡುವೆ ಪರಿಚಯವಾಗಿತ್ತು. ಈ ಪರಿಚಯ ದಿನ ಕಳೆದಂತೆ ಸ್ನೇಹಕ್ಕೆ ತಿರುಗಿ, ಬಳಿಕ ಪ್ರೀತಿಗೆ ಮುನ್ನಡೆದಿತ್ತು. ಪ್ರೀತಿ ಎಷ್ಟು ಗಾಢವಾಗಿತ್ತೆಂದರೆ, ಇಬ್ಬರೂ ತಮ್ಮ ಮನೆಯವರಿಗೆ ತಿಳಿಸದೆಯೇ ರಹಸ್ಯವಾಗಿ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದರು. ತಿಗಳರಪಾಳ್ಯದ ಬಾಡಿಗೆ ರೂಮ್ನಲ್ಲಿದ್ದ ಭವಾನಿಯನ್ನು ಭೇಟಿಯಾಗಲು ಚಂದು ಆಗಾಗ ಬರುತ್ತಿದ್ದನು.
ಬಿಗ್ ಟ್ವಿಸ್ಟ್: ಆರೋಪಿಗೆ ಈಗಾಗಲೇ ಮದುವೆಯಾಗಿತ್ತು!
ಈ ಇಡೀ ಪ್ರಕರಣಕ್ಕೆ ಮುಖ್ಯ ತಿರುವು ಸಿಗುವುದೇ ಇಲ್ಲಿ. ಆರೋಪಿ ಚಂದ್ರಶೇಖರ್ನಿಗೆ ಈಗಾಗಲೇ ಮದುವೆಯಾಗಿದ್ದು, ಆತನಿಗೆ ಆರು ವರ್ಷದ ಮಗನೂ ಇದ್ದಾನೆ! ಆದರೆ ಈ ಸತ್ಯ ಭವಾನಿಗೆ ಗೊತ್ತಿರಲಿಲ್ಲ. ಆತ ಮದುವೆಯಾದ ವಿಚಾರವನ್ನು ಮರೆಮಾಚಿ ಭವಾನಿ ಜೊತೆಗೆ ಕದ್ದುಮುಚ್ಚಿ ಸಂಸಾರ ನಡೆಸುತ್ತಿದ್ದನು.
ದೂರಾಗಲು ಯತ್ನಿಸಿದ್ದೇ ಕೊಲೆಗೆ ಕಾರಣವಾಯ್ತಾ?
ಇತ್ತೀಚೆಗೆ ಭವಾನಿಗೆ ಮದುವೆ ಮಾಡಲು ಆಕೆಯ ಪೋಷಕರು ಮುಂದಾಗಿದ್ದರು. ಈ ವಿಷಯವನ್ನು ಚಂದ್ರಶೇಖರ್ ಬಳಿ ಹೇಳಿದ್ದ ಭವಾನಿ, ಆತನಿಂದ ದೂರಾಗಲು ನಿರ್ಧರಿಸಿದ್ದಳು. ಆದರೆ “ನೀನೇ ಬೇಕು” ಎಂದು ಹಠ ಹಿಡಿದಿದ್ದ ಚಂದ್ರಶೇಖರ್ ಇದಕ್ಕೆ ಒಪ್ಪಿರಲಿಲ್ಲ. ಇದೇ ವಿಚಾರವಾಗಿ ನಿನ್ನೆ ಇಬ್ಬರ ನಡುವೆ ಭೀಕರ ಜಗಳ ನಡೆದಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ, ಇಬ್ಬರೂ ವಿಷ ಕುಡಿದಿರುವ ಶಂಕೆ ವ್ಯಕ್ತವಾಗಿದೆ. ಚಂದ್ರಶೇಖರ್ ತಾನೂ ವಿಷ ಕುಡಿದು, ಭವಾನಿಗೂ ಕುಡಿಸಿ ಆಕೆ ಒದ್ದಾಡುವಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೋ? ಅಥವಾ ಭವಾನಿಯನ್ನು ಕೊಲೆ ಮಾಡಿದ ಬಳಿಕ ಚಂದು ವಿಷ ಸೇವಿಸಿದ್ದಾನೋ ಎಂಬ ಅನುಮಾನವಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿ ಬೆಚ್ಚಿಬಿದ್ದ ಪೋಷಕರು!
ನಿನ್ನೆ ಭವಾನಿ ಕೊಲೆಯಾದ ಬಳಿಕವೂ ಆರೋಪಿ ಚಂದ್ರಶೇಖರ್ ಆಕೆಯ ಮೊಬೈಲ್ ಬಳಸಿದ್ದನು. ಭವಾನಿಯ ಇನ್ಸ್ಟಾಗ್ರಾಮ್ (Instagram) ಖಾತೆಯಿಂದ ಇಬ್ಬರ ಫೋಟೋವನ್ನು ಅಪ್ಲೋಡ್ ಮಾಡಿದ್ದ ಆತ, “ಮದುವೆ ವಾರ್ಷಿಕೋತ್ಸವ” (Wedding Anniversary) ಎಂದು ಪೋಸ್ಟ್ ಹಾಕಿದ್ದನು. ಇದನ್ನು ನೋಡಿದ ಭವಾನಿ ಕುಟುಂಬಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಕೂಡಲೇ ಪೋಷಕರು ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಆಕೆ ಫೋನ್ ಸ್ವೀಕರಿಸಿಲ್ಲ. ಸಂಶಯಗೊಂಡು ಬಾಡಿಗೆ ಮನೆಗೆ ಬಂದು ನೋಡಿದಾಗ ಭವಾನಿ ಶವವಾಗಿ ಬಿದ್ದಿರುವುದು ಮತ್ತು ಚಂದ್ರಶೇಖರ್ ಅರೆಪ್ರಜ್ಞಾವಸ್ಥೆಯಲ್ಲಿರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸದ್ಯ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Kidney Disease: ನಿಮ್ಮ ಕಿಡ್ನಿ ಸುರಕ್ಷಿತವಾಗಿದೆಯೇ? ಈ ₹300 ಟೆಸ್ಟ್ ಮೂಲಕ ಇಂದೇ ತಿಳಿದುಕೊಳ್ಳಿ!







