ಬೆಂಗಳೂರು : ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿ ವೋಟ್ ಚೋರಿ ಅಲ್ಲ. ಇದು ವೋಟ್ ಡಕಾಯಿತಿ ಆಗಿದೆ. ಅಂಚೆ ಮತ ಪತ್ರವನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೋರ್ಟ್ ಆದೇಶದಂತೆ ಪೋಸ್ಟಲ್ ಬ್ಯಾಲೆಟ್ ಮರು ಎಣಿಕೆ ಆಯಿತು.
2023ರ ಚುನಾವಣೆಯಲ್ಲಿ 201 ಮತಗಳ ಅಂತರದಿಂದ ರಾಜೇಗೌಡ ಅವರು ಗೆದ್ದಿದ್ದರು. ಅವರಿಗೆ 59,171 ಮತಗಳು ಬಂದಿದ್ದವು. ಬಿಜೆಪಿಯ ಜೀವರಾಜ್ಗೆ 58,970 ಮತಗಳು ಬಂದಿದ್ದವು. ರಾಜೇಗೌಡರಿಗೆ ಇವಿಎಂನಿಂದ ಬಂದ ಮತಗಳು 58,602. ಪೋಸ್ಟಲ್ನಿಂದ ಬಂದಿದ್ದು 569. ಜೀವರಾಜ್ಗೆ ಇವಿಎಂನಿಂದ 58,278 ಮತಗಳು ಬಂದಿದ್ದವು. ಅವರಿಗೆ ಪೋಸ್ಟಲ್ನಿಂದ ಬಂದ ಮತ 692. ಒಟ್ಟಾರೆಯಾಗಿ 201 ಮತಗಳಿಂದ ರಾಜೇಗೌಡ ಅವರು ಗೆದ್ದಿದ್ದರು. ಇವೆಲ್ಲವೂ ಸಿಂಧು ಮತಗಳೆಂದು ರಿಟರ್ನಿಂಗ್ ಅಧಿಕಾರಿಗಳು, ಚುನಾವಣಾ ಏಜೆಂಟ್ಗಳು ಸಹಿ ಹಾಕಿ ಘೋಷಿಸಿದ್ದರು ಎಂದು ತಿಳಿಸಿದರು.
ಘೋಷಣೆ ಆದ ಮೇಲೆ ಜೀವರಾಜ್ ಅವರು ಮಾಲ್ ಪ್ರಾಕ್ಟೀಸ್ ಆಗಿದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಅವರ ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್ 6 -3 – 2026ರಂದು ಮರು ಎಣಿಕೆಗೆ ನಿರ್ದೇಶನ ನೀಡಿತ್ತು. ತಿರಸ್ಕೃತ ಮತಗಳನ್ನು ಮರು ಎಣಿಕೆ ವೇಳೆ ಸೇರ್ಪಡೆಗೊಳಿಸಬೇಕು ಮತ್ತು ಎಲ್ಲಾ ಪೋಸ್ಟಲ್ ಮತ ಎಣಿಕೆ ಮಾಡಬೇಕು ಎಂದು ನಿರ್ದೇಶನ ನೀಡಿತ್ತು. ಅದರಂತೆ ಮೊನ್ನೆ ಮರು ಎಣಿಕೆ ನಡೆಯಿತು. 2023ರಲ್ಲಿ ಅಂಚೆ ಮತಪತ್ರದಲ್ಲಿ 569 ಮತಗಳು ರಾಜೇಗೌಡರಿಗೆ ಲಭಿಸಿದ್ದವು. ಮರು ಎಣಿಕೆಯಲ್ಲಿ 314 ಮತಗಳು ಮಾತ್ರ ಸಿಂಧು ಆಗುತ್ತವೆ. ಅದರಲ್ಲಿ 255 ಮತಗಳು ಅಸಿಂಧು ಆಗುತ್ತವೆ. ಅದು ಹೇಗೆ ಅಸಿಂಧು ಆಗುತ್ತವೆ? ಎಂದು ಸಿಎಂ ಪ್ರಶ್ನಿಸಿದರು.
2023ರಲ್ಲಿ ಜೀವರಾಜ್ಗೆ 692 ಅಂಚೆ ಮತ ಬಿದ್ದಿತ್ತು. ಮರು ಎಣಿಕೆಯಲ್ಲಿ 690 ಮತಗಳು ಲಭಿಸಿವೆ. 2 ಮತಗಳು ಮಾತ್ರ ಕಡಿಮೆಯಾಗಿವೆ. ಇದನ್ನು ನೋಡಿದಾಗ ಬಿಜೆಪಿಯವರು ಕ್ರಿಮಿನಲ್ ಪಿತೂರಿ ಮಾಡಿ ವೋಟ್ ಚೋರಿ ಮಾಡಿರುವುದು ಸ್ಪಷ್ಟವಾಗುತ್ತದೆ. ರಾಜೇಗೌಡರ 255 ಮತಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ. ಎರಡು ಮಾರ್ಕ್ ಇದ್ದರೆ ಅಸಿಂಧು ಮಾಡುತ್ತಾರೆ. ಹಿಂದಿನ ಚುನಾವಣಾ ಅಧಿಕಾರಿ ಸಿಂಧು ಮಾಡಿರುವುದು, ಈಗ ಹೇಗೆ ಅಸಿಂಧು ಮಾಡಿದ್ದಾರೆ?. 52 ಮತಗಳು ಜೀವರಾಜ್ಗೆ ಹೆಚ್ಚಿಗೆ ಬಂದಿವೆ. ಎಲ್ಲಾ ಮತ ದಾಖಲಾತಿಗಳನ್ನು ಟ್ರಂಕ್ನಲ್ಲಿ ಇಟ್ಟು ಕಳುಹಿಸುತ್ತಾರೆ. ಕೌಂಟಿಂಗ್ ಮಾಡಿದಾಗ ಅವರದೇ ಸರ್ಕಾರ ಇತ್ತು. ಡಬಲ್ ಇಂಜಿನ್ ಸರ್ಕಾರ ಇತ್ತು. ಬಿಜೆಪಿಯವರು ಸಿಬ್ಬಂದಿ ಮೂಲಕ ತಿದ್ದಿರುವುದು ಖಚಿತವಾಗಿದೆ ಎಂದು ಆರೋಪಿಸಿದರು.








