ಬೆಂಗಳೂರು : ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು 6 ವರ್ಷಗಳ ಕಾಲ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಉಚ್ಚಾಟನೆ ಗೊಳಿಸಿದೆ. ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾತನಾಡಿ ಎಸ್ ಟಿ ಸೋಮಶೇಖರ್ ಗೆ ಬಿಜೆಪಿಗೆ ಹೋಗಬೇಡಿ ಅಂತ ನಾನು ಹೇಳಿದ್ದೆ. ಈಗ ಬಿಜೆಪಿಗೆ ಹೋದವರು ಕೆಲವರು ನಮ್ಮನ್ನು ಸಾಯಿಸುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಹೋಗಬೇಡಿ ಎಂದು ಎಸ್ ಟಿ ಸೋಮಶೇಖರ್ ಗೆ ಹೇಳಿದ್ದೆ. ಸಿಪಿ ಯೋಗೇಶ್ವರ್ ಇದೀಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಎಮ್ ಟಿ ಬಿ ನಾಗರಾಜ್ ಹಾಗೂ ಶ್ರೀಮಂತ್ ಪಾಟೀಲ್ ಕಥೆ ಏನಾಯ್ತು? ಮಹೇಶ್ ಕುಮ್ಟಳ್ಳಿ ಪರಿಸ್ಥಿತಿ ಹೇಗಿದೆ? ಅಯ್ಯೋ ನಮ್ಮನ್ನು ಸಾಯಿಸ್ತಾರೆ ಅಂತ ಯಾರು ಹೇಳುತ್ತಿದ್ದರು ಎಂದರು.
ಮಾಡಬಾರದನ್ನು ಮಾಡಿ ಬಾಯಿ ಬಡೆದುಕೊಳ್ಳುತ್ತಿದ್ದಾರೆ. ಜೆಡಿಎಸ್ ಪಕ್ಷದ ನಾಯಕರು ನಂಬಿದರೆ ಭವಿಷ್ಯ ಇಲ್ಲ. ಜೆಡಿಎಸ್ ಅದೊಂದು ಪಕ್ಷ ಅಲ್ಲ ಕುಟುಂಬ. ದೇವೇಗೌಡರ ಅಳಿಯನನ್ನು ಕರೆದೊಯ್ದು ಬಿಜೆಪಿಗೆ ನಿಲ್ಲಿಸಿದರು. ನಮಗೆ ತಂತ್ರ ಮಾಡಲು ಬರಲ್ವಾ? ಸಿಪಿ ಯೋಗೇಶ್ವರ್ ಅವರನ್ನು ಕರೆತಂದು ಗೆಲ್ಲಿಸಲಿಲ್ವಾ? ಮುಂದೆ ಹಾಸನ ಜಿಲ್ಲೆಯಲ್ಲಿ 7ಕ್ಕೆ 7 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ತಿಳಿಸಿದರು.
ಇನ್ನು ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಯುವಕ ಅಬ್ದುಲ್ ರಹಿಮಾನ್ ಭೀಕರ ಕೊಲೆ ಪ್ರಕರಣದ ಕುರಿತು ಮಾತನಾಡಿದ ಅವರು, ಮಂಗಳೂರಲ್ಲಿ ಬರೀ ಗಲಾಟೆ ಜಾತಿ ಧರ್ಮ ಅಂತ ಒಡೆಯಲು ಹೋಗುತ್ತಾರೆ. ಅಲ್ಲಿನ ಯುವಕರು ದುಬೈ ಹಾಗೂ ಬೆಂಗಳೂರು ಕಡೆಗೆ ಬರುತ್ತಿದ್ದಾರೆ. ಬರಿ ಧರ್ಮ ಜಾತಿ ಅಂತ ಹೊಡೆಯುತ್ತಿದ್ದಾರೆ. ಬಿಜೆಪಿಯವರು ಕತ್ತರಿ ಇದ್ದಂತೆ ನಾವು ಸೂಜಿ ಇದ್ದಂತೆ. ನಾವು ಹೊಲಿಯುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.