ಬೆಂಗಳೂರು : ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ ಭಾಗದ ಜನರ ಬಹುದಿನಗಳ ಕನಸು ಶೀಘ್ರದಲ್ಲಿ ನನಸಾಗಲಿದೆ. ಹೌದು ಶೀಘ್ರದಲ್ಲಿ ಬೆಂಗಳೂರು-ಮಂಗಳೂರು ಕರಾವಳಿ ಭಾಗದ ಮಾರ್ಗದಲ್ಲಿ ಎರಡು ವಂದೇ ಭಾರತ್ ರೈಲು ಸೇವೆ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಬೆಂಗಳೂರು-ಮಂಗಳೂರುಗೆ ಶೀಘ್ರದಲ್ಲಿ ವಂದೇ ಭಾರತ್ ರೈಲು ಆರಂಭಿಸಲಾಗುವುದು ಎಂದರು. ಶಿರಾಡಿ ಘಾಟ್ ಭಾಗದ ಮಾರ್ಗದಲ್ಲಿ ವಿದ್ಯುದೀಕರಣ ಪೂರ್ಣವಾಗಿದೆ. ಇನ್ನೂ, ಹಲವು ಸುರಕ್ಷತಾ ಪರೀಕ್ಷೆಗಳು ನಡೆಯಬೇಕಿವೆ. ಸುರಕ್ಷತಾ ದೃಢೀಕರಣ ಪತ್ರ ಬಂದ ಬಳಿಕ, ಸಂಸದರು, ಜನಪ್ರತಿನಿಧಿಗಳು ಸೇರಿ ಎಲ್ಲರಿಂದ ಸಲಹೆ ಪಡೆದು ವಂದೇ ಭಾರತ್ ರೈಲು ಸೇವೆಯ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ವಂದೇ ಭಾರತ್ ಕರ್ನಾಟಕದ ಕರಾವಳಿ ಭಾಗವನ್ನು ಸಂಪರ್ಕಿಸಲಿದೆ. ಮಂಗಳೂರು, ಉಡುಪಿ ಮುಖೇನ ಕಾರವಾರದವರೆಗೆ ವಂದೇ ಭಾರತ್ ರೈಲು ಸಂಚರಿಸಲಿದೆ. ಕರಾವಳಿ ಕರ್ನಾಟಕದ ಅತಿ ಉದ್ದದ ಮಾರ್ಗವನ್ನು ಸಂಪರ್ಕಿಸುವ ಕಾರಣ ಎರಡು ವಂದೇ ಭಾರತ್ ರೈಲು ಸೇವೆಯನ್ನು ಆರಂಭಿಸಲಾಗುವುದು. ಒಂದು ಕೋಸ್ಟಲ್ ನಿಂದ ಬೆಂಗಳೂರು, ಮತ್ತೊಂದು ಬೆಂಗಳೂರಿನಿಂದ ಕೋಸ್ಟಲ್ ಜಿಲ್ಲೆಗಳಿಗೆ ವಂದೇ ಭಾರತ್ ರೈಲು ಓಡಾಡಲಿದೆ ಎಂದು ಸಚಿವರು ಮಾಹಿತಿ ನೀಡಿದರು.








