ಹಾವೇರಿ : ಹಾವೇರಿ ಜಿಲ್ಲೆಯಲ್ಲಿ ನಿಶ್ಚಿತಾರ್ಥದ ಹಿಂದಿನ ದಿನವೇ 24 ವರ್ಷದ ಯುವತಿ ಮನೆಯಿಂದ ಕಾಣೆಯಾಗಿದ್ದಾರೆ. ಬೇರೆ ಸಮುದಾಯದ ಯುವಕ ಇಬ್ರಾಹಿಂ ಎಂಬಾತ ಆಕೆಯನ್ನು ಕರೆದೊಯ್ದಿದ್ದಾನೆ ಎಂದು ಪೋಷಕರು ಆರೋಪಿಸಿದ್ದು, ಇದೊಂದು ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ನಿಶ್ಚಿತಾರ್ಥಕ್ಕೂ ಮೊದಲೇ ಯುವತಿ ಮನೆಯಿಂದ ಕಾಣೆಯಾಗಿರುವ ಪ್ರಕರಣ ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಶಂಕ್ರಿಕೊಪ್ಪ ಗ್ರಾಮದ ಶಂಕರಮ್ಮ (24) ಕೆರಿಮೆತ್ತಿಹಳ್ಳಿ ಎಂಬ ಯುವತಿಯ ನಿಶ್ಚಿತಾರ್ಥ ಇಂದು ನಿಶ್ಚಯವಾಗಿತ್ತು.
ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬಾತ ನಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಶಂಕರಮ್ಮ ಪೋಷಕರು ಆರೋಪಿಸಿದ್ದಾರೆ. ಬಿಕಾಂ ಪದವಿ ಪಡೆದುಕೊಂಡ ಬಳಿಕ ಶಂಕರಮ್ಮ ಅಕ್ಕಿಆಲೂರಿಗೆ ಕೆಲಸಕ್ಕೆ ಹೋಗ್ತಿದ್ದರು. ಈ ವೇಳೆ ಇಬ್ರಾಹಿಂನ ಪರಿಚಯವಾಗಿದೆ ಎಂದು ಹೇಳಲಾಗುತ್ತಿದೆ.
ಮೇ 11ರಂದು ಶಂಕರಮ್ಮಾಳ ಮದುವೆ ನಿಗದಿ ಮಾಡಲಾಗಿತ್ತು. ಇಂದು ನಿಶ್ಚಿತಾರ್ಥ ಫಿಕ್ಸ್ ಮಾಡಲಾಗುತ್ತಿತ್ತು. ನಿನ್ನೆ ರಾತ್ರಿ ಮನೆ ಹಿಂಬದಿ ಬಾಗಿಲಿನಿಂದ ಬಂದು ಶಂಕರಮ್ಮನ್ನು ಕರೆದುಕೊಂಡು ಹೋಗಿರುವ ಆರೋಪ ಕೇಳಿ ಬಂದಿದೆ. ಪರಿಚಯವನ್ನೇ ತನ್ನ ಲಾಭಕ್ಕೆ ಇಬ್ರಾಹಿಂ ಬಳಸಿಕೊಂಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ.
ಇದೀಗ ಶಂಕರಮ್ಮ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಮ್ಮ ಮಗಳನ್ನು ಹುಡುಕಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದೊಂದು ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದು, ಯುವಕ ಇಬ್ರಾಹಿಂ ಬಂಧನಕ್ಕೆ ಆಗ್ರಹಿಸಿವೆ.








