ಬೆಂಗಳೂರು: ರಾಜ್ಯದ ಪ್ರವಾಸಿ ತಾಣಗಳಲ್ಲಿ ಶಾಲಾ ಮಕ್ಕಳು ಹಾಗೂ ಪ್ರವಾಸಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರವಾಸಿ ತಾಣಗಳಲ್ಲಿ ಮಕ್ಕಳ ರಕ್ಷಣೆಗಾಗಿ ಸಂಸ್ಥೆಯು ಪ್ರಮುಖ 12 ಅಂಶಗಳ ಮಾರ್ಗಸೂಚಿಯನ್ನು ಪಾಲಿಸಲು ಸೂಚಿಸಿದೆ. ಅವುಗಳ ವಿವರ ಇಲ್ಲಿದೆ:
ಪ್ರಮುಖ ಮಾರ್ಗಸೂಚಿಗಳು:
ಹೆಲ್ಪ್ ಲೈನ್ ಸಂಖ್ಯೆ: ಎಲ್ಲಾ ಪ್ರವಾಸಿ ತಾಣಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.
ಎಚ್ಚರಿಕೆ ಫಲಕಗಳು: ಅಪಾಯಕಾರಿ ಪ್ರದೇಶಗಳಲ್ಲಿ ಸ್ಪಷ್ಟವಾದ ಎಚ್ಚರಿಕೆ ಮತ್ತು ಸೂಚನಾ ಫಲಕಗಳನ್ನು ಅಳವಡಿಸಬೇಕು.
ಸಿಬ್ಬಂದಿಗೆ ತರಬೇತಿ: ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ತರಬೇತಿ ನೀಡಲಾಗುವುದು.
ಸುರಕ್ಷತಾ ವಲಯ: ಬೀಚ್ ಮತ್ತು ಜಲಪಾತಗಳ ಬಳಿ ಮಕ್ಕಳಿಗಾಗಿ ಪ್ರತ್ಯೇಕ ಸುರಕ್ಷತಾ ವಲಯಗಳನ್ನು ಗುರುತಿಸಬೇಕು.
ನಿರ್ಬಂಧಗಳು: ಪ್ರವಾಸಿ ತಾಣಗಳಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಲ್ಲದೆ, 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು, ಬೀಡಿ, ಸಿಗರೇಟ್ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ತಡೆಗಟ್ಟಬೇಕು.
ದೂರು ಮತ್ತು ರಕ್ಷಣೆ: ಲೈಂಗಿಕ ದೌರ್ಜನ್ಯ ತಡೆಗೆ ಕ್ರಮ, ದೂರು ನೀಡಲು ರಹಸ್ಯ ವ್ಯವಸ್ಥೆ ಹಾಗೂ ‘ಚೈಲ್ಡ್ ಸೇಫ್ಟಿ ರೆಸ್ಪಾನ್ಸ್’ ತಂಡಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಸುರಕ್ಷತಾ ಆಡಿಟ್: ಕಾಲಕಾಲಕ್ಕೆ ಮಕ್ಕಳ ಸುರಕ್ಷತೆಯ ಬಗ್ಗೆ ಆಡಿಟ್ (ತಪಾಸಣೆ) ನಡೆಸಲು ಸೂಚಿಸಲಾಗಿದೆ.
ನೋಡಲ್ ಅಧಿಕಾರಿಗಳ ನೇಮಕ:
ಈ ಮಾರ್ಗಸೂಚಿಗಳ ಅನುಷ್ಠಾನಕ್ಕಾಗಿ ಜಂಗಲ್ ಲಾಡ್ಜಸ್ ಸಂಸ್ಥೆಯು ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.
ಸಿಬ್ಬಂದಿ ತರಬೇತಿಗೆ ಸಂಬಂಧಿಸಿದಂತೆ ನಿರ್ದೇಶಕರು (ಆಪರೇಷನ್ಸ್) ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಮಕ್ಕಳ ಸುರಕ್ಷತಾ ಆಡಿಟ್ ಜವಾಬ್ದಾರಿಯನ್ನು ಉಪ ಪ್ರಧಾನ ವ್ಯವಸ್ಥಾಪಕರಾದ ಕು. ಸಲ್ಮಾ ನಹೀದ್ ಮತ್ತು ಮುಖ್ಯ ನಿಸರ್ಗತಜ್ಞರಾದ ಶ್ರೀ ಸಿ. ಅನಿಕೇತನ್ ಅವರಿಗೆ ವಹಿಸಲಾಗಿದೆ.
ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೇಂದ್ರ ಕಚೇರಿಗೆ ವರದಿ ನೀಡುವಂತೆ ಎಲ್ಲಾ ಘಟಕಗಳ ವ್ಯವಸ್ಥಾಪಕರಿಗೆ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ನೀಡಿದ್ದಾರೆ.









