ಬೆಂಗಳೂರು: ವಿಧಾನಸೌಧದಲ್ಲಿ ಬುಧವಾರ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ, ಮೊದಲ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಂಟಿ ಮಾಧ್ಯಮಗೋಷ್ಠಿ ನಡೆಸಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಯುವ ಸಬಲೀಕರಣಕ್ಕಾಗಿ ಮಹತ್ವದ 6 ಬಂಪರ್ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಕಳೆದ ಮೂರು ವರ್ಷಗಳ ಪ್ರಗತಿಯ ವೇಗವನ್ನು ಮುಂದುವರಿಸಿಕೊಂಡು, ಜನರಿಗೆ ತ್ವರಿತ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸುತ್ತಾ ಈ ಕೆಳಗಿನ ಐತಿಹಾಸಿಕ ತೀರ್ಮಾನಗಳನ್ನು ಅಧಿಕೃತವಾಗಿ ಘೋಷಿಸಿದರು.
ಅಧಿಕೃತವಾಗಿ ಘೋಷಿಸಲಾದ 6 ಬಂಪರ್ ಯೋಜನೆಗಳ ವಿವರಗಳು:
1. ಉಚಿತ ಬಸ್ ಪಾಸ್ ಸೌಲಭ್ಯ ಎಲ್ಲಾ ವಿದ್ಯಾರ್ಥಿಗಳಿಗೆ ವಿಸ್ತರಣೆ:
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿರುವ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ವಿಸ್ತರಿಸಲಾಗುವುದು. ಈ ಮೂಲಕ ಕಡಿಮೆ ಆದಾಯ ಮೂಲದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಾರಿಗೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲು ಸರ್ಕಾರ ನೇರ ನೆರವು ನೀಡಲಿದೆ.
2. ಯುವ ಉದ್ಯೋಗ ಸೇತು (ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ):
ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದರ ಜೊತೆಗೆ, ಯುವ ಉದ್ಯೋಗಾಕಾಂಕ್ಷಿಗಳು ಖಾಸಗಿ ವಲಯದಲ್ಲಿ ಸೂಕ್ತ ಉದ್ಯೋಗಾವಕಾಶಗಳನ್ನು ಪಡೆಯಲು ಅನುವಾಗುವಂತೆ ಉದ್ಯೋಗದಾತರೊಂದಿಗೆ ನೇರವಾಗಿ ಸಂಪರ್ಕಿಸುವ ‘ಯುವ ಉದ್ಯೋಗ ಸೇತು’ ಎಂಬ ಅತ್ಯಾಧುನಿಕ ಉದ್ಯೋಗ ವಿನಿಮಯ ಕೇಂದ್ರವನ್ನು ಮುಂದಿನ 60 ದಿನಗಳ ಒಳಗಾಗಿ ಪ್ರಾರಂಭಿಸಲಾಗುವುದು.
3. ಭಾರತ ಜೋಡೋ ಯುವ ಸಂಘ ಕ್ಲಬ್ ಸ್ಥಾಪನೆ ಹಾಗೂ ಭಾರಿ ಅನುದಾನ:
ಯುವಜನರಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಭ್ರಾತೃತ್ವ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಮತ್ತು ಸಾಮುದಾಯಿಕ ಪ್ರಜ್ಞೆಯನ್ನು ಉತ್ತೇಜಿಸಲು ಪ್ರತಿ ಗ್ರಾಮ ಪಂಚಾಯತ್ ಹಾಗೂ ನಗರ ವಾರ್ಡ್ಗಳ ವ್ಯಾಪ್ತಿಯಲ್ಲಿ ತಲಾ ಒಂದರಂತೆ ರಾಜ್ಯಾದ್ಯಂತ ಒಟ್ಟು 10 ಸಾವಿರ ‘ಭಾರತ ಜೋಡೋ ಯುವ ಸಂಘ ಕ್ಲಬ್’ಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರತಿ ಕ್ಲಬ್ಗೆ ತಲಾ ರೂ. 10 ಲಕ್ಷದಂತೆ ಒಟ್ಟು ರೂ. 1,000 ಕೋಟಿ ಭಾರಿ ಅನುದಾನವನ್ನು ಒದಗಿಸಲಾಗುವುದು.
4. ಒಸಿ-ಸಿಸಿ ಸಮಸ್ಯೆಗೆ ಪರಿಹಾರ (ವಿದ್ಯುತ್ ಸಂಪರ್ಕ ಸಡಿಲಿಕೆ):
2400 ಚದರ ಅಡಿವರೆಗಿನ (+10 ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಅಳತೆಯ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ಜಿ+2 ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ +3 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ 31 ಮೇ 2026ರ ಒಳಗಾಗಿ ಅರ್ಜಿ ಸಲ್ಲಿಸಿದವರಿಗೆ ವಿದ್ಯುತ್ ಸಂಪರ್ಕ ಪಡೆಯಲು ಒಂದು ಬಾರಿಯ ‘ಸ್ವಾಧೀನಾನ್ಭವ ಪ್ರಮಾಣ ಪತ್ರ’ (OC/CC) ವಿನಾಯಿತಿ ಸೌಲಭ್ಯ ಒದಗಿಸುವ ಮೂಲಕ ಸಾರ್ವಜನಿಕರ ದೀರ್ಘಕಾಲದ ಸಮಸ್ಯೆಗೆ ದೊಡ್ಡ ಪರಿಹಾರ ನೀಡಲಾಗಿದೆ.
5. ರಾಜ್ಯಾದ್ಯಂತ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ:
ರಾಜ್ಯಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕಾನೂನು ಮತ್ತು ನಿಯಮಾವಳಿಗಳನ್ನು ಸರಳೀಕರಣಗೊಳಿಸುವ ಮೂಲಕ ಅರ್ಹ ಆಸ್ತಿಗಳನ್ನು ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು. ಈ ಮೂಲಕ ಲಕ್ಷಾಂತರ ನಾಗರಿಕರಿಗೆ ಅಧಿಕೃತ ಆಸ್ತಿ ಪತ್ರ ಸಿಗಲಿದ್ದು, ಭೂಮಿಯ ನೈಜ ಮೌಲ್ಯದ ಅರಿವಾಗಲಿದೆ ಮತ್ತು ಆಸ್ತಿ ಮಾಲೀಕರಿಗೆ ಕಾನೂನಾತ್ಮಕ ಭದ್ರತೆ ದೊರೆಯಲಿದೆ.
6. ಗ್ರೇಟರ್ ಬೆಂಗಳೂರು ರಸ್ತೆ ಅಭಿವೃದ್ಧಿಗೆ 3 ಸಾವಿರ ಕೋಟಿ ಅನುದಾನ:
ಗ್ರೇಟರ್ ಬೆಂಗಳೂರು (ಜಿಬಿಎ) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳ ಜೊತೆಯಲ್ಲಿ ಹೆಚ್ಚುವರಿಯಾಗಿ ಬರೋಬ್ಬರಿ ರೂ. 3,000 ಕೋಟಿ ವೆಚ್ಚದಲ್ಲಿ ವಾರ್ಡ್ ರಸ್ತೆಗಳು ಸೇರಿದಂತೆ ಸಮಗ್ರ ರಸ್ತೆ ಮೂಲಸೌಲಭ್ಯ ಮತ್ತು ಡಾಂಬರೀಕರಣ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು.








