ಹಾಸನ : ಕಳೆದ 7 ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳ ಬಳಿ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರೈಲ್ವೆ ಪೊಲೀಸರು ಅಂತರಾಜ್ಯ ಕಳ್ಳನನ್ನು ಅರೆಸ್ಟ್ ಮಾಡಿದ್ದಾರೆ.
ಹೌದು 2018ರಲ್ಲಿ ಸ್ವಾಮೀಜಿ ಬಾಗಲಕೋಟೆಯಿಂದ ಅರಸೀಕೆರೆಗೆ ರೈಲಿನ ಎಸಿ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದರು. ಲೆದರ್ ಬ್ಯಾಗ್ನಲ್ಲಿ 250 ಗ್ರಾಂ ಚಿನ್ನದ ಸರ, ಗೌರಿಶಂಕರ ರುದ್ರಾಕ್ಷಿ ಪದಕ, 50 ಗ್ರಾಂನ ಎರಡು ಚಿನ್ನದ ಉಂಗುರಗಳು ಹಾಗೂ 1.62 ಲಕ್ಷ ರೂ. ನಗದು ಹಣವನ್ನು ಇಟ್ಟಿದ್ದರು. ತಲೆಯ ಕೆಳಗೆ ಬ್ಯಾಗ್ ಇಟ್ಟು ನಿದ್ದೆಗೆ ಜಾರಿದ್ದ ಸ್ವಾಮೀಜಿ, ತಡರಾತ್ರಿ 2:15ಕ್ಕೆ ಎದ್ದು ನೋಡಿದಾಗ ಬ್ಯಾಗ್ ಸ್ಥಾನ ಬದಲಾಗಿ, ಅದರಲ್ಲಿದ್ದ ಚಿನ್ನಾಭರಣ ಮತ್ತು ಹಣ ಕಾಣೆಯಾಗಿತ್ತು. ಈ ಬಗ್ಗೆ ಅರಸೀಕೆರೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಜಿತೇಂದ್ರ ಕುಮಾರ್ ರೈಲಿನ ಎಸಿ ಕೋಚ್ಗಳಲ್ಲಿ ಪ್ರಯಾಣಿಕರಂತೆ ಟಿಕೆಟ್ ಖರೀದಿಸಿ, ಚಿನ್ನಾಭರಣ ಮತ್ತು ಹಣ ಇರುವವರನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ. ಇವನು ವಾಹನ ಡೀಲರ್ ಕೆಲಸದ ಜೊತೆಗೆ ಹಣದ ಅಗತ್ಯಕ್ಕೆ ತಕ್ಕಂತೆ ರೈಲುಗಳಲ್ಲಿ ಕಳ್ಳತನಕ್ಕಿಳಿಯುತ್ತಿದ್ದ. ಚಿನ್ನಾಭರಣ, ಹಣ ಇರುವರನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿ. ಇತ್ತೀಚೆಗೆ ಉಡುಪಿಯಿಂದ ಬೆಂಗಳೂರಿಗೆ ಬರ್ತಿದ್ದ ವೃದ್ದರ ಬಳಿ 65 ಸಾವಿರ ರೂ. ಮೌಲ್ಯದ ಚಿನ್ನಾಭರಣ, ಹಣ ಕಳ್ಳತನ ಮಾಡಿದ್ದ. ಈ ಕೇಸ್ ತನಿಖೆ ನಡೆಸುತ್ತಿದ್ದ ಅರಸಿಕೇರೆ ಪೊಲೀಸರಿಂದ ಜಿತೇಂದ್ರ ಬಂಧನವಾಗಿದೆ.