ಚಿಕ್ಕಮಗಳೂರು : ಕೆಲವು ಬಾರಿ ಪ್ರಪಂಚದಲ್ಲಿ ಇಂತಹ ತಂದೆ ತಾಯಂದಿರು ಇರುತ್ತಾರಾ ಅಂತ ಬೇಸರವಾಗುತ್ತೆ. ಕೇವಲ ಎರಡು ದಿನದ ಹೆಣ್ಣು ಮಗುವನ್ನು 1 ಲಕ್ಷಕ್ಕೆ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ನಡೆದಿದೆ. ರತ್ನ ಸದಾನಂದ ಎಂಬ ದಂಪತಿಗಳೇ ಮಗು ಮಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ರತ್ನ ಮತ್ತು ಸದಾನಂದ ದಂಪತಿಗಳೇ ಹಣಕ್ಕಾಗಿ ಇಂತಹ ದುಷ್ಕೃತ್ಯ ಎಸಗಿದ್ದಾರೆ. ತಮ್ಮ 2 ದಿನದ ಮಗುವನ್ನು ಕಾರ್ಕಳದ ರಾಘವೇಂದ್ರ ಎಂಬ ವ್ಯಕ್ತಿಗೆ 1 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು. 45 ವರ್ಷದ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿ, ಕೇವಲ ಎರಡು ದಿನಗಳಲ್ಲಿ ಅದನ್ನು ಹಣಕ್ಕೆ ಬದಲಾಯಿಸುವ ಮನಸ್ಥಿತಿಯು ಆಘಾತಕಾರಿಯಾಗಿದೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ರತ್ನ ಮತ್ತು ಸದಾನಂದ ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದು, ಆಶ್ಚರ್ಯಕರವಾಗಿ ಇಬ್ಬರನ್ನು ಈ ಹಿಂದೆಯೇ ಮಾರಾಟ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಘಟನೆಯಲ್ಲಿ ಸಹಕರಿಸಿದ ಕೊಪ್ಪ ತಾಲೂಕಿನ ಆಸ್ಪತ್ರೆಯ ನಿವೃತ್ತ ನರ್ಸ್ ಕುಸುಮ ಕೂಡ ಪೊಲೀಸರ ವಶಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ಕುಸುಮ, ಈ ವ್ಯಾಪಾರದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.