ಬೆಂಗಳೂರು: ರಾಜ್ಯ ಸರ್ಕಾರ ಈವರೆಗೆ ಆರೋಗ್ಯ ಇಲಾಖೆಯ ( Karnataka Health Department ) ಗುತ್ತಿಗೆ, ಹೊರಗುತ್ತಿಗೆ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಿಲ್ಲ. ಮೌಲ್ಯಮಾಪನದಂತ ಪದ್ಧತಿಯನ್ನು ರದ್ದುಗೊಳಿಸಬೇಕು. ಶ್ರೀನಿವಾಸಾಚಾರಿ ವರದಿಯನ್ನು ಸರ್ಕಾರ ಜಾರಿಗೊಳಿಸಬೇಕು ಎಂಬುದಾಗಿ ಒತ್ತಾಯಿಸಿ ಜುಲೈ.7ರಂದು ಬೆಂಗಳೂರು ಚಲೋ ( Bengaluru Chalo ) ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರೆಲ್ಲರೂ ಭಾಗವಹಿಸುವಂತೆ ರಾಜ್ಯಾಧ್ಯಕ್ಷ ವಿಶ್ವರಾಧ್ಯ ಯಾಮೋಜಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಮೂರು ತಿಂಗಳ ಮೌಲ್ಯಮಾಪವನ್ನು ರಾಜ್ಯ ಸರ್ಕಾರ ಒಂದು ವರ್ಷಕ್ಕೆ ನಿಗದಿ ಪಡಿಸಲಾಗಿದೆ. ನಮ್ಮ ಎಲ್ಲಾ ಬೇಡಿಕೆಗಳ ಸಂಬಂಧ ಮಾನ್ಯ ಆರೋಗ್ಯ ಸಚಿವರೊಂದಿಗೆ ಸಂಪೂರ್ಣ ಚರ್ಚೆ ನಡೆಸಲಾಗಿದೆ. ಆ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ, ಸರ್ಕಾರ ಆದೇಶ ಹೊರಡಿಸಬೇಕು ಎಂದರು.
ಬೆಂಗಳೂರು ಚಲೋ ನಿಶ್ಚಿತವಾಗಿದೆ. ತಮ್ಮ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಈ ಹಿಂದೆ 2019ರಲ್ಲಿ ಫ್ರೀಂ ಪಾರ್ಕಿನಲ್ಲಿ ಹೋರಾಡಿದಂತೆ, ಬೆಂಗಳೂರು ಚಲೋದಲ್ಲಿ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಪಾಲ್ಗೊಂಡು, ಬೇಡಿಕೆ ಈಡೇರಿಕೆಗೆ ಒಗ್ಗಟ್ಟಿನ ಹೋರಾಟಕ್ಕೆ ಇಳಿಯುವಂತೆ ಅವರು ಕರೆ ನೀಡಿದ್ದಾರೆ.
ಅಂದಹಾಗೇ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಸಾವಿರಾರು ನೌಕರರು ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕರಿಗೆ ನೀಡುತ್ತಿರೋ ವೇತನ ಕಡಿಮೆಯಾಗಿದೆ. ಸರ್ಕಾರಿ ನೌಕರರಿಗೆ ಹೋಲಿಕೆ ಮಾಡಿದ್ರೇ ಅರ್ಧಕ್ಕರ್ಧ ಕಡಿಮೆಯೇ ಆಗಿದೆ. ಶೇ.15ರಷ್ಟು ವೇತನ ಹೆಚ್ಚಳ ಮಾಡೋ ಬಗ್ಗೆ ಆರೋಗ್ಯ ಸಚಿವರೊಂದಿಗೆ ಸಂಘ ಅನೇಕ ಬಾರಿ ಸಭೆ ನಡೆಸಿ ಚರ್ಚಿಸಿದೆ. ಜಾರಿಗೊಳಿಸಲಾಗುತ್ತದೆ ಎಂದು ಹೇಳಿದೆಯೇ ವಿನಹ, ವೇತನ ಹೆಚ್ಚಳದ ಆದೇಶವನ್ನೇ ಮಾಡಿಲ್ಲ. ಇದಲ್ಲದೇ ವರ್ಗಾವಣೆಯೂ ಇಲ್ಲ. ಒಂದು ಬಾರಿಗೆ ಮಾತ್ರವೇ ಜಿಲ್ಲಾ ಹಂತದಲ್ಲಿ ಮಾತ್ರವೇ ವರ್ಗಾವಣೆಗೆ ಅವಕಾಶ ನೀಡಲಾಗಿದೆ. ಅದರ ಹೊರತಾಗಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶವೇ ಇಲ್ಲ.
ಇನ್ನೂ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರೋ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯವಿಲ್ಲ. ಶ್ರೀನಿವಾಸಾಚಾರಿ ನೇತೃತ್ವದ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವಂತ ವರದಿಯಲ್ಲಿ ಈ ಎಲ್ಲಾ ಸೌಲಭ್ಯವನ್ನು ಕಲ್ಪಿಸುವಂತೆ ಶಿಫಾರಸ್ಸು ಮಾಡಿದೆ. ಈ ವರದಿ ಸಲ್ಲಿಕೆಯಾಗಿ ಎರಡು ವರ್ಷಗಳೇ ಕಳೆದರು ಸರ್ಕಾರ ಮಾತ್ರ ಆ ವರದಿಯ ಅಂಶಗಳನ್ನು ಜಾರಿಗೊಳಿಸೋ ಗೋಜಿಗೆ ಹೋಗಿಲ್ಲ. ದಿನೇ ದಿನೇ ಗಗನಕ್ಕೆ ಏರುತ್ತಿರುವಂತ ಅಗತ್ಯ ವಸ್ತುಗಳ ಬೆಲೆ, ತೈಲದರಗಳ ನಡುವೆಯೂ ಜಮಾನದ ವೇತನದಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರು ಜೀವನ ನಿರ್ವಹಣೆ ಹೇಗೆ ಎಂಬುದು ಅನೇಕರ ಮಾತಾಗಿದೆ. ಈ ಕೆಲ ಬೇಡಿಕೆ ಸೇರಿದಂತೆ ಹಲವಾರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜುಲೈ 7, 2022ರಂದು ಬೆಂಗಳೂರು ಚಲೋ ಪ್ರತಿಭಟನೆ ನಡೆಸಲಾಗುತ್ತಿದೆ. ಹೀಗಾಗಿ ರಾಜ್ಯಾಧ್ಯಂತ ಆರೋಗ್ಯ ಸೇವೆಯಲ್ಲೂ ವ್ಯತ್ಯಯ ಉಂಟಾಗಲಿದೆ.
ವರದಿ : ಲೀಲಾವತಿ ವಸಂತ ಬಿ ಈಶ್ವರಗೆರೆ