ಬಳ್ಳಾರಿ : ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಬಿ.ಇಡಿ ಪದವಿಯ ಮೌಲ್ಯಮಾಪನ ಮುಗಿದ ಒಂದು ದಿನದಲ್ಲಿ ಪರೀಕ್ಷಾ ಫಲಿತಾಂಶವನ್ನು ಘೋಷಿಸಿ ಐತಿಹಾಸಿಕ ಸಾಧನೆ ಮೆರೆದಿದೆ.
ಕಳೆದ ತಿಂಗಳು ಮುಕ್ತಾಯಗೊಂಡಿದ್ದ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ನ ಬಿ.ಇಡಿ ಪದವಿ ಮೌಲ್ಯಮಾಪನವನ್ನು ಸತತ 10 ದಿನಗಳಲ್ಲಿ ಪೂರೈಸಿ ಫಲಿತಾಂಶವನ್ನು ಯುಯುಸಿಎಂಎಸ್ನಲ್ಲಿ ಗುರುವಾರ ಪ್ರಕಟಿಸಿದೆ.
ವಿವಿ ಅಧೀನದಲ್ಲಿರುವ 14 ಕಾಲೇಜುಗಳ ಸುಮಾರು 2,500 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅವರು ಬರೆದಿದ್ದ 15,000 ಉತ್ತರ ಪತ್ರಿಕೆಗಳನ್ನು ಬಿ.ಇಡಿ ಕೋರ್ಸಿನ 42 ಮೌಲ್ಯಮಾಪಕರು ಎಡೆಬಿಡದೆ ಮೌಲ್ಯಮಾಪನ ನಡೆಸಿದ್ದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ ಮುನಿರಾಜು ಅವರು ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೀಘ್ರ ಫಲಿತಾಂಶ ಪ್ರಕಟಿಸಲು ಆದ್ಯ ಕ್ರಮಗಳನ್ನು ವಿಶ್ವವಿದ್ಯಾಲಯವು ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾಂಗ ಕುಲಸಚಿವ ಪ್ರೊ.ಎನ್ ಎಂ ಸಾಲಿ ಅವರು ಫಲಿತಾಂಶ ಪ್ರಕಟಿಸಲು ಮಾರ್ಗದರ್ಶನ ನೀಡಿರುವ ಕುಲಪತಿಗಳಿಗೆ, ಮೌಲ್ಯಮಾಪನ ಮೇಲ್ವಿಚಾರಕರಿಗೆ, ಮೌಲ್ಯಮಾಪಕರಿಗೆ, ಕಚೇರಿ ಸಿಬ್ಬಂದಿಗೆ ಅಭಿನಂದಿಸಿದ್ದಾರೆ.
ಬಿ.ಇಡಿ ಪದವಿಯ ಪರೀಕ್ಷಾ ಫಲಿತಾಂಶಗಳನ್ನು ತುರ್ತಾಗಿ ಪ್ರಕಟಿಸಲು ಮುತುವರ್ಜಿ ವಹಿಸಿ ನಿಭಾಯಿಸಿದ ವಿವಿಯ ಕುಲಪತಿಗಳಿಗೆ ಮತ್ತು ಪರೀಕ್ಷಾಂಗ ಕುಲಸಚಿವರಿಗೆ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಪ್ರೊ.ತಿಪ್ಪೇರುದ್ರಪ್ಪ ಜೆ., ವಿತ್ತಾಧಿಕಾರಿ ನಾಗರಾಜ ಮತ್ತು ವಿಶ್ವವಿದ್ಯಾಲಯದ ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದನೆ ತಿಳಿಸಿದ್ದಾರೆ.








