ಬೆಂಗಳೂರು: ಮೊಬೈಲ್ ವಿಚಾರಕ್ಕೆ ಸ್ನೇಹಿತನಿಂದ ಹಲ್ಲೆಗೊಳಗಾದ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೇ 10ರಂದು ಮಾರತ್ ಹಳ್ಳಿ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ನೇಹಿತ ರಾಮು ಎಂಬಾತನಿಂದ ಚಾಕು ಇರಿತಕ್ಕೊಳಗಾಗಿದ್ದ ಪರಶುರಾಮ ಎಲ್ಲಪ್ಪ ಮಂಗಳಗಟ್ಟಿ (25) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಹುಬ್ಬಳ್ಳಿ ಮೂಲದ ಪರಶುರಾಮ ಹಾಗೂ ರಾಮು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು. ಮಾರತ್ ಹಳ್ಳಿ ಠಾಣೆ ವ್ಯಾಪ್ತಿಯ ಚೌಡೇಶ್ವರಿ ರಸ್ತೆಯಲ್ಲಿನ ಬೆಸ್ಕಾಂ ಕಚೇರಿ ಬಳಿ ಬಾಡಿಗೆ ರೂಮ್ನಲ್ಲಿ ವಾಸವಿದ್ದರು. ಮೇ 10ರಂದು ನೈಟ್ ಶಿಫ್ಟ್ ಮುಗಿಸಿ, ಪಾನಮತ್ತನಾಗಿ ಬಂದಿದ್ದ ರಾಮು, ಪರಶುರಾಮನ ಮೊಬೈಲ್ ಫೋನ್ ಬಚ್ಚಿಟ್ಟಿದ್ದ.
ಎಚ್ಚರವಾದ ಬಳಿಕ ‘ಮೊಬೈಲ್ ಎಲ್ಲಿಟ್ಟಿದ್ದೀಯಾ, ಕೊಡು’ ಎಂದು ಪರಶುರಾಮ ಕೇಳಿದ್ದ. ಈ ವೇಳೆ, ರಾಮು ಮೊಬೈಲ್ ಕೊಡಲ್ಲ ಎಂದಿದ್ದಕ್ಕೆ ಇಬ್ಬರ ನಡುವೆ ವಾಗ್ವಾದವಾಗಿತ್ತು. ಸಿಟ್ಡಿಗೆದ್ದ ರಾಮು, ಅಡುಗೆ ಕೋಣೆಯಿಂದ ಚಾಕು ತಂದು ಪರಶುರಾಮನಿಗೆ ಇರಿದಿದ್ದ. ಬಳಿಕ ಆತನ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದವನನ್ನು ಅಕ್ಕಪಕ್ಕದವರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಕುಟುಂಬಸ್ಥರು ಪರಶುರಾಮನನ್ನು ಹುಬ್ಬಳ್ಳಿಗೆ ಕರೆದೊಯ್ದಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯಲ್ಲಿ ಪರಶುರಾಮ ಸಾವನ್ನಪ್ಪಿದ್ದಾನೆ.








