ಕಲಬುರ್ಗಿ : ಸಿಮೆಂಟ್ ತುಂಬಿದ್ದ ಟ್ಯಾಂಕರ್ ಹಾಗೂ ಶಾಲಾ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಆರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಗರದ ಹೊರ ವಲಯದ ನಾಗನಹಳ್ಳಿ ರಿಂಗ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಗಾಯಾಳುಗಳನ್ನು ಆದಿತ್ಯ (12), (6), ಸುಪ್ರೀತ್ (9), ಸಾಯಿನಾಥ (13), ದಕ್ಷಿತ್ (7), ವಿಕ್ರಾಂತ (14) ಎಂದು ಗುರುತಿಸಲಾಗಿದೆ. ಆದಿತ್ಯನನ್ನು ನಗರದ ಕಾಮರೆಡ್ಡಿ ಆಸ್ಪತ್ರೆಗೆ, ಪ್ರೀತಂನನ್ನು ಬಿಲ್ವಾ ಆಸ್ಪತ್ರೆಗೆ ಹಾಗೂ ಇನ್ನುಳಿದ ನಾಲ್ವರು ಮಕ್ಕಳನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಕಾಂತ ಪಾಟೀಲ ಪಬ್ಲಿಕ್ ಶಾಲೆಗೆ ಸೇರಿದ ಶಾಲಾ ವಾಹನ ರಾಮಮಂದಿರ ಕಡೆಯಿಂದ ನಾಗನಹಳ್ಳಿ ರಿಂಗ್ ರಸ್ತೆಯತ್ತ ಬರುತ್ತಿತ್ತು. ವಾಡಿಯಿಂದ ಸಿಮೆಂಟ್ ತುಂಬಿಕೊಂಡು ಹೊರಟ್ಟಿದ್ದ ವೇಳೆ ಅಪಘಾತ ಸಂಭವಿಸಿದೆ’ ಎಂದು ಮೂಲಗಳು ಹೇಳಿವೆ. ಅಪಘಾತದಲ್ಲಿ ಶಾಲಾ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು, ಮುಂದಿನ ಗಾಜು ಒಡೆದಿದೆ. ಘಟನೆ ಕಲಬುರಗಿ ನಗರ ಸಂಚಾರ ಪೊಲೀಸ್ ಠಾಣೆ-2ರ ವ್ಯಾಪ್ತಿಯಲ್ಲಿ ನಡೆದಿದೆ.