ದಕ್ಷಿಣ ಕನ್ನಡ: ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 596 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ 4ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದ ಸುಳ್ಯದ ಪ್ರತಿಭಾವಂತ ವಿದ್ಯಾರ್ಥಿನಿ ಅಭಿಜ್ಞಾ ಭಟ್ (19) ಅವರು ಅನಾರೋಗ್ಯದಿಂದ ಬುಧವಾರ (ಜೂನ್ 10) ನಿಧನರಾಗಿದ್ದಾರೆ. ಸಾಧನೆಯ ಶಿಖರ ಏರಬೇಕಿದ್ದ ಹಸನ್ಮುಖಿ ಯುವತಿಯ ಅಕಾಲಿಕ ಅಗಲಿಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಶಿಕ್ಷಕರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಮೃತ ಅಭಿಜ್ಞಾ ಭಟ್ ಅವರು ಸುಳ್ಯದ ಹೆಸರಾಂತ ಕಿವಿ, ಮೂಗು ಮತ್ತು ಗಂಟಲು (ENT) ತಜ್ಞ ವೈದ್ಯರಾದ ಡಾ. ರವಿಶಂಕರ್ ಅವರ ಹಿರಿಯ ಪುತ್ರಿಯಾಗಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದ ಸಾವು: ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಭಿಜ್ಞಾ ಭಟ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಅವರ ಆರೋಗ್ಯದಲ್ಲಿ ದಿಡೀರ್ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ.
ತಾಲೂಕಿಗೆ ಪ್ರಥಮ, ರಾಜ್ಯಕ್ಕೆ 4ನೇ ರ್ಯಾಂಕ್: ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ (PCMB) ವಿದ್ಯಾರ್ಥಿನಿಯಾಗಿದ್ದ ಅಭಿಜ್ಞಾ ಭಟ್ ಅವರು ಓದಿನಲ್ಲಿ ಸದಾ ಮುಂಚೂಣಿಯಲ್ಲಿದ್ದರು. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದಾಗ ಅವರು 595 ಅಂಕ ಗಳಿಸಿದ್ದರು. ಆದರೆ ಹಿಂದಿ ವಿಷಯದ ಮರು ಮೌಲ್ಯಮಾಪನಕ್ಕೆ (Revaluation) ಅರ್ಜಿ ಸಲ್ಲಿಸಿದ ಬಳಿಕ ಅವರಿಗೆ ಹೆಚ್ಚುವರಿಯಾಗಿ ಒಂದು ಅಂಕ ಲಭಿಸಿತ್ತು.
ಇದರಿಂದಾಗಿ ಹಿಂದಿಯಲ್ಲಿ 99 ಅಂಕಗಳೊಂದಿಗೆ ಅವರ ಒಟ್ಟು ಅಂಕ 596ಕ್ಕೆ ಏರಿತು. ಈ ಮೂಲಕ ಅವರು ಸುಳ್ಯ ತಾಲೂಕಿಗೆ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ 4ನೇ ರ್ಯಾಂಕ್ ಗಳಿಸಿ ಸುಳ್ಯ ತಾಲೂಕ ಕೀರ್ತಿ ಹೆಚ್ಚಿಸಿದ್ದರು. ಅವರು ಭೌತಶಾಸ್ತ್ರ (Physics), ಗಣಿತ (Mathematics), ರಸಾಯನಶಾಸ್ತ್ರ (Chemistry) ಹಾಗೂ ಜೀವಶಾಸ್ತ್ರ (Biology) ಹೀಗೆ ನಾಲ್ಕೂ ಪ್ರಮುಖ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದರು. ಕೇವಲ ಪಿಯುಸಿ ಮಾತ್ರವಲ್ಲದೆ ಜೆಇಇ ಮೈನ್ಸ್ (JEE Mains) ಪರೀಕ್ಷೆಯಲ್ಲೂ ಶೇ. 94.29 ರಷ್ಟು ಅತ್ಯುತ್ತಮ ಅಂಕ ಗಳಿಸಿದ್ದರು.
ಕಂಬನಿ ಮಿಡಿದ ಸುಳ್ಯ: ತಮ್ಮ ಶ್ರಮ, ಅಪಾರ ಪ್ರತಿಭೆ ಹಾಗೂ ಶಿಸ್ತಿನ ಮೂಲಕ ಶಿಕ್ಷಕರು ಮತ್ತು ಸಹಪಾಠಿಗಳ ನೆಚ್ಚಿನ ವಿದ್ಯಾರ್ಥಿನಿಯಾಗಿದ್ದ ಅಭಿಜ್ಞಾ ಅವರ ಸಾಧನೆಗೆ ಇಡೀ ತಾಲೂಕಿನ ಜನತೆ ಹೆಮ್ಮೆ ಪಟ್ಟಿದ್ದರು. ಇತ್ತೀಚೆಗಷ್ಟೇ ರಾಜ್ಯ ಮಟ್ಟದ ರ್ಯಾಂಕ್ ಪಡೆದು ದೊಡ್ಡ ಭವಿಷ್ಯದ ಕನಸು ಕಂಡಿದ್ದ ಕುವರಿ ಇಷ್ಟು ಬೇಗ ಇಹಲೋಕ ತ್ಯಜಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಸುಳ್ಯ ಭಾಗದ ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.








