ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮತ್ತು ಸ್ಥಳೀಯವಾಗಿ ಸರ್ಕಾರಿ ಆಸ್ತಿಗಳ ದುರ್ಬಳಕೆ ಆಗುತ್ತಿರುವ ಕುರಿತು ಸಾಗರ ಬಿಜೆಪಿ ನಗರಾಧ್ಯಕ್ಷ ಗಣೇಶ್ ಪ್ರಸಾದ್ ಕೆ.ಆರ್. ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆ ಬಗ್ಗೆ ಮುಂದೆ ಓದಿ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು…
ಗೃಹಲಕ್ಷ್ಮಿ ಯೋಜನೆಯಲ್ಲಿನ ಲೋಪಗಳು ಮತ್ತು ಗ್ಯಾರಂಟಿ ಸಮಿತಿಗಳ ವೈಫಲ್ಯ
ರಾಜ್ಯದಲ್ಲಿ 2023ರಲ್ಲಿ ಹತ್ತಾರು ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುತ್ತೇವೆ ಎಂದು ಹೇಳಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿಗಳನ್ನು ನೇಮಕ ಮಾಡಲಾಗಿದೆ. ಈ ಸಮಿತಿಗಳ ಪದಾಧಿಕಾರಿಗಳಿಗೆ ತಿಂಗಳಿಗೆ 75,000 ದಿಂದ 5 ಲಕ್ಷ ರೂಪಾಯಿಗಳವರೆಗೆ ಸಂಬಳ ನೀಡಲಾಗುತ್ತಿದೆ. ಸಾಗರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಬಿ.ಆರ್. ಜಯಂತ್ ಅವರಿಗೂ ಸುಮಾರು 40,000 ರೂಪಾಯಿ ಹಾಗೂ ಸದಸ್ಯರಿಗೆ 10,000 ರೂಪಾಯಿ ಸಂಬಳ ನೀಡಲಾಗುತ್ತಿದೆ ಎಂದು ನಾವು ಕೇಳಿದ್ದೇವೆ ಎಂದರು.
ಆದರೆ, ಇವತ್ತು ಅದೇ ರಾಜ್ಯ ಸರ್ಕಾರವು ಈ ಯೋಜನೆಯು ಸಮರ್ಪಕವಾಗಿ ಜಾರಿಯಾಗಿಲ್ಲ, ಸುಮಾರು 1,71,000 ಜನ ಮೃತಪಟ್ಟವರ ಹೆಸರಿಗೆ ಹಣ ಹೋಗುತ್ತಿದೆ ಎಂದು ಹೇಳಿ ಪರಿಷ್ಕರಣೆ ಮಾಡಲು ಹೊರಟಿದೆ. ಇದು ಕೇವಲ ಯೋಜನೆಯನ್ನು ನಿಲ್ಲಿಸಲು ಮಾಡುತ್ತಿರುವ ಹುನ್ನಾರವಾಗಿದೆ. ಹಾಗಾದರೆ, ಈ ಗ್ಯಾರಂಟಿ ಸಮಿತಿಗಳು ಇಷ್ಟು ದಿನ ಏನು ಕೆಲಸ ಮಾಡುತ್ತಿದ್ದವು? ಸಾಗರದಲ್ಲಿ ತಿಂಗಳು ತಿಂಗಳು ಸಭೆ ನಡೆಸಿ ಫೋಟೋ ತೆಗೆಸಿಕೊಳ್ಳುವ ಈ ಸಮಿತಿಯವರು ಯಾರಿಗೆ ಹಣ ತಲುಪುತ್ತಿದೆ ಎಂಬ ಕನಿಷ್ಠ ಮಾಹಿತಿಯನ್ನೂ ಹೊಂದಿಲ್ಲವೇ? ಸ್ಥಳೀಯ ಶಾಸಕರು ಈ ಗ್ಯಾರಂಟಿ ಸಮಿತಿಯ ಕಾರ್ಯವೈಖರಿ ಕುರಿತು ತಕ್ಷಣವೇ ಪರಿಶೀಲನಾ ಸಭೆ (ರಿವ್ಯೂ ಮೀಟಿಂಗ್) ನಡೆಸಬೇಕು. ಮುಂಚೆ ಎಲ್ಲರಿಗೂ ಉಚಿತ ಎಂದು ಹೇಳಿ, ಈಗ ತೆರಿಗೆ ಪಾವತಿದಾರರು, ಹೊರ ರಾಜ್ಯದವರು ಎಂದು ನೆಪ ಹೇಳಿ ಗೊಂದಲ ಸೃಷ್ಟಿಸುತ್ತಿರುವ ಸರ್ಕಾರದ ಕ್ರಮವನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಮತ್ತು ಅನುದಾನ ತಾರತಮ್ಯ
ಹಾಲಿ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. 2008 ರಿಂದ 2013 ರವರೆಗೆ ಹಾಗೂ 2019 ರಿಂದ 2023 ರವರೆಗೆ ಇದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲಾ ಸಮಾಜಗಳಿಗೆ, ಮಠ-ಮಂದಿರಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಸಣ್ಣ ಸಣ್ಣ ಜಾತಿಗಳಿಗೆ 50 ಲಕ್ಷದಿಂದ 5 ಕೋಟಿ ರೂಪಾಯಿಗಳವರೆಗೆ ಹೇರಳವಾಗಿ ಅನುದಾನ ನೀಡಲಾಗಿತ್ತು. ಇದಕ್ಕೆ ಸಾಗರದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನಗಳು ಮತ್ತು ಅಭಿವೃದ್ಧಿಗೊಂಡ ದೇವಸ್ಥಾನಗಳೇ ಸಾಕ್ಷಿ ಎಂದು ಆಕ್ರೋಶ ಹೊರ ಹಾಕಿದರು.
ಸಿದ್ದರಾಮಯ್ಯನವರ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಹಾಗೂ ಇಂದಿನ ಮೂರು ವರ್ಷಗಳ ಅವಧಿಯಲ್ಲಿ ಹಿಂದೂ ಸಮಾಜದ ಯಾವುದೇ ದೇವಸ್ಥಾನಕ್ಕಾಗಲಿ ಅಥವಾ ಕಡು ಬಡತನದಲ್ಲಿರುವ ಸಮುದಾಯಗಳಿಗಾಗಲಿ ಒಂದೇ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ಬಿಜೆಪಿ ಇದ್ದಾಗ ಮಾತ್ರ ಹಣ ಬರುತ್ತದೆ ಎನ್ನುವುದಾದರೆ, ಉಳಿದ ಅವಧಿಯಲ್ಲಿ ಈ ಹಣ ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆ ಇವತ್ತು ಎಲ್ಲಾ ಸಮಾಜಗಳನ್ನು ಕಾಡುತ್ತಿದೆ ಎಂದರು.
ಮತ್ತೊಂದೆಡೆ, ಅಲ್ಪಸಂಖ್ಯಾತರ ಓಲೈಕೆಗಾಗಿ ಅಲ್ಪಸಂಖ್ಯಾತರ ಕಾಲೋನಿ ರಸ್ತೆಗಳು ಮತ್ತು ವಕ್ಫ್ ಕಮಿಟಿಗೆ ಕೋಟ್ಯಂತರ ರೂಪಾಯಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಇದು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇಡುವ ನೀತಿಯಾಗಿದ್ದು, ಹಿಂದೂಗಳನ್ನು ತುಳಿಯುವ ಈ ಕ್ರಮದ ವಿರುದ್ಧ ಶೀಘ್ರದಲ್ಲೇ ವಿವಿಧ ಮೋರ್ಚಾಗಳ ಮೂಲಕ ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಉಗ್ರ ಹೋರಾಟ ರೂಪಿಸಲಿದೆ. ಕೇಂದ್ರ ಸರ್ಕಾರವು ಅರ್ಹ ಮತದಾರರನ್ನು ಸೇರಿಸಲು ಮತ್ತು ಅನರ್ಹರನ್ನು ಪಟ್ಟಿಯಿಂದ ತೆಗೆಯಲು ಎಸ್ಐಆರ್ (SIR) ಕ್ರಮಕ್ಕೆ ಮುಂದಾದಾಗ ವಿರೋಧಿಸುವ ಕಾಂಗ್ರೆಸ್, ಇವತ್ತು ಗೃಹಲಕ್ಷ್ಮಿ ಯೋಜನೆಯಲ್ಲಿ ಇಂತಹದ್ದೇ ಪರಿಷ್ಕರಣೆಗೆ ಕೈಹಾಕಿರುವುದು ಅವರ ಇಬ್ಬಂದಿ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ವಿಜಯನಗರದ ಸರ್ಕಾರಿ ಬಾವಿ ಮುಚ್ಚುವಿಕೆ ಮತ್ತು ಶಾಸಕರ ನಡೆ
ವಿಜಯನಗರದಲ್ಲಿ ಸ್ಥಳೀಯ ಶಾಸಕರು ತಮ್ಮ ಮನೆ ನಿರ್ಮಾಣ ಅಥವಾ ನವೀಕರಣದ ಸಂದರ್ಭದಲ್ಲಿ, ಅಲ್ಲಿನ ಖಾಸಗಿ ಸಂಸ್ಥೆಯೊಂದಕ್ಕೆ ಸೇರಿದ ಜಾಗದಲ್ಲಿದ್ದ ಹಾಗೂ ನಗರಸಭೆಯಿಂದ ಮಂಜೂರಾಗಿದ್ದ ಜಾಗದಲ್ಲಿದ್ದ ಪುರಾತನ ಸರ್ಕಾರಿ ಬಾವಿಯನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ. ಶಾಸಕರು ತಮ್ಮ ವಾಸ್ತು ನಂಬಿಕೆಗೆ ಅನುಗುಣವಾಗಿ ಏನನ್ನಾದರೂ ಮಾಡಿಕೊಳ್ಳಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಸಾರ್ವಜನಿಕರು ಬಳಸುತ್ತಿದ್ದ ಸರ್ಕಾರಿ ಬಾವಿಯನ್ನು ಮುಚ್ಚುವ ಅವಶ್ಯಕತೆ ಇರಲಿಲ್ಲ. ಕಳೆದ ಬಾರಿ ಬಾವಿ ಮುಚ್ಚಲು ಬಂದಾಗ ಸ್ಥಳೀಯ ನಾಗರಿಕರಾದ ಸುರೇಶ್ ಕುಂಬ್ಳೆ, ನಿವೃತ್ತ ಅಧ್ಯಾಪಕರಾದ ನಾರಾಯಣಮೂರ್ತಿ ಮುಂತಾದವರು ಬಾವಿಗೆ ಹಾರುವುದಾಗಿ ಪ್ರತಿಭಟಿಸಿದಾಗ ಕೆಲಸ ನಿಲ್ಲಿಸಲಾಗಿತ್ತು ಎಂದರುಯ
ಇತ್ತೀಚೆಗೆ ಬಾವಿಯ ಸುತ್ತ ಕಾಂಪೌಂಡ್ ಹಾಕಿ ಅದನ್ನು ಮುಚ್ಚುವ ಕೆಲಸ ಮಾಡಲಾಗಿದ್ದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಈ ಹಿಂದೆ ಬಾವಿಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಪತ್ರ ಬರೆದಿದ್ದ ಅದೇ ಸಂಸ್ಥೆಯ ಕಾರ್ಯದರ್ಶಿಗಳು, ಇತ್ತೀಚೆಗೆ ಬಾವಿ ಮುಚ್ಚುವುದರಿಂದ ತೊಂದರೆಯಾಗುತ್ತಿಲ್ಲ ಎಂಬರ್ಥದಲ್ಲಿ ಪತ್ರ ನೀಡಿರುವುದು ಅವರ ದ್ವಂದ್ವ ನೀತಿಯನ್ನು ಹಾಗೂ ಅವರ ಮೇಲಾಗಿರುವ ರಾಜಕೀಯ ಒತ್ತಡವನ್ನು ಎತ್ತಿ ತೋರಿಸುತ್ತದೆ. ಜನಸಾಮಾನ್ಯರಿಗೆ ತೊಂದರೆ ನೀಡುತ್ತಿರುವ ಈ ಜನವಿರೋಧಿ ನೀತಿಯನ್ನು ಮತ್ತು ಬಾವಿ ಮುಚ್ಚಿರುವ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಗರ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದೇವೇಂದ್ರಪ್ಪ ಯಲಕುಂದ್ಲಿ, ಗ್ರಾಮಾಂತರ ಉಪಾಧ್ಯಕ್ಷರಾದ ಗಿರೀಶ್, ಪ್ರಮುಖರಾದ ಸೂರಜ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಮೊಗವೀರ್ ಹಾಗೂ ಸಂತೋಷ್ ರಾಯ್ ಉಪಸ್ಥಿತರಿದ್ದರು.








