ಶಿವಮೊಗ್ಗ: ಸಾಗರ ತಾಲೂಕಿನಲ್ಲಿರುವ ಮಳೆ ಮಾಪನ ಕೇಂದ್ರಗಳು ದುರಸ್ತಿಯಿಲ್ಲದೆ ಸಂಪೂರ್ಣ ಹಾಳಾಗಿದ್ದು, ಇದರಿಂದ ರೈತರಿಗೆ ಬೆಳೆ ವಿಮೆ ಸಿಗದೆ ಭಾರಿ ಅನ್ಯಾಯವಾಗುತ್ತಿದೆ ಎಂದು ಸಾಗರ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಪ್ರಮುಖ ಜ್ವಲಂತ ಸಮಸ್ಯೆಗಳು ಹಾಗೂ ಸರ್ಕಾರದ ವೈಫಲ್ಯಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಪ್ರಮುಖ ಸಮಸ್ಯೆಗಳು ಹಾಗೂ ಸರ್ಕಾರದ ವೈಫಲ್ಯಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಳೆ ಮಾಪನ ಕೇಂದ್ರಗಳ ದುರಸ್ತಿ ನಿರ್ಲಕ್ಷ್ಯ; ರೈತರಿಗೆ ತಪ್ಪಿದ ಬೆಳೆ ವಿಮೆ
ತಾಲೂಕಿನಲ್ಲಿ ಒಟ್ಟು 36 ಮಳೆ ಮಾಪನ ಕೇಂದ್ರಗಳಿದ್ದು, ಈ ಪೈಕಿ ಕೇವಲ 11 ಕೇಂದ್ರಗಳು ಮಾತ್ರ ಪ್ರಸ್ತುತ ಕೆಲಸ ಮಾಡುತ್ತಿವೆ. ಇನ್ನುಳಿದ 25 ಕೇಂದ್ರಗಳು ದುರಸ್ತಿಯಿಲ್ಲದೆ ಸಂಪೂರ್ಣವಾಗಿ ಹಾಳಾಗಿವೆ. ಈ ಬಗ್ಗೆ ತಾಲೂಕು ಕಚೇರಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ತಹಶೀಲ್ದಾರರನ್ನು ವಿಚಾರಿಸಿದರೆ, ಉಳಿದ ಕೇಂದ್ರಗಳ ದುರಸ್ತಿಗೆ ಟೆಂಡರ್ ಆಗಿದ್ದು ಅವರು ಬಂದು ಸರಿ ಮಾಡಬೇಕು ಎಂಬ ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ. ಮಳೆಗಾಲ ಈಗಾಗಲೇ ಆರಂಭವಾಗಿದ್ದರೂ ಇವು ಯಾವಾಗ ಸರಿಹೋಗುತ್ತವೆ ಎಂಬ ಕನಿಷ್ಠ ಮಾಹಿತಿಯೂ ಅಧಿಕಾರಿಗಳ ಬಳಿ ಇಲ್ಲ. ಮಳೆ ಮಾಪನ ಕೇಂದ್ರಗಳು ಸರಿಯಾದ ವರದಿ ನೀಡದ ಕಾರಣ, ಇಲ್ಲಿನ ರೈತರಿಗೆ ಬೆಳೆ ಹಾನಿಯಾಗಿದ್ದರೂ ಹವಾಮಾನ ಆಧಾರಿತ ಬೆಳೆ ವಿಮೆ ಹಣ ವಾಪಸ್ ಸಿಗುತ್ತಿಲ್ಲ. ಈ ವರದಿಯನ್ನು ನೀಡಬೇಕಾದವರು ರಾಜ್ಯ ಸರ್ಕಾರದ ನೌಕರರೇ ಆಗಿದ್ದು, ಅವರ ನಿರ್ಲಕ್ಷ್ಯದಿಂದ ರೈತರು ಕಷ್ಟಪಡುವಂತಾಗಿದೆ. ಈ ಬಾರಿ ರೈತರಿಗೆ ವಿಮೆ ಹಣ ಸಿಗದಿದ್ದರೆ, ಪಕ್ಷದ ವತಿಯಿಂದ ಹಾಗೂ ರೈತ ಮೋರ್ಚಾ ಮುಖಾಂತರ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಮೆಸ್ಕಾಮ್ ಖಾಸಗೀಕರಣದಿಂದ ರೈತರು ಹಾಗೂ ಗ್ರಾಹಕರಿಗೆ ಭಾರಿ ಅನ್ಯಾಯ
ಮೆಸ್ಕಾಮ್ (ಕೆಇಬಿ) ಸಂಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರದ ನೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಖಾಸಗೀಕರಣದಿಂದ ಉತ್ತಮ ಸೇವೆ ಅಥವಾ 24 ಗಂಟೆ ಕರೆಂಟ್ ಸಿಗಬಹುದು. ಆದರೆ, ಇದರಿಂದ ರೈತರಿಗೆ ಮತ್ತು ಬಡ ಗ್ರಾಹಕರಿಗೆ ಭಾರಿ ಅನ್ಯಾಯವಾಗಲಿದೆ. ಮಾಜಿ ಸಿಎಂ ಬಂಗಾರಪ್ಪನವರ ಕಾಲದಿಂದಲೂ ರೈತರ 10 ಹೆಚ್.ಪಿ ವರೆಗಿನ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಖಾಸಗಿಯವರು ಇದನ್ನು ಮುಂದುವರಿಸುತ್ತಾರೆಯೇ ಎಂಬ ಆತಂಕ ಮೂಡಿದೆ. ಈಗಾಗಲೇ ವಿದ್ಯುತ್ ದರ ಏರಿಕೆಯಾಗಿದ್ದು, ಖಾಸಗೀಕರಣವಾದರೆ ಮತ್ತಷ್ಟು ದರ ಏರಿಕೆಯಾಗಿ ಸಾರ್ವಜನಿಕರಿಗೆ ಹೊರೆಯಾಗಲಿದೆ. ಅಷ್ಟೇ ಅಲ್ಲದೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನೌಕರರ ಹಿತರಕ್ಷಣೆ ಮತ್ತು ಉದ್ಯೋಗ ಭದ್ರತೆಗೂ ಧಕ್ಕೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಸರ್ಕಾರ ಖಾಸಗೀಕರಣದ ಹೆಸರಿನಲ್ಲಿ ಜನಸಾಮಾನ್ಯರಿಗೆ ತೊಂದರೆ ನೀಡಿದರೆ ಇದರ ವಿರುದ್ಧವೂ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದರು.
ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬ ಹಾಗೂ ಸರ್ಕಾರದ ಬೇಜವಾಬ್ದಾರಿತನ
ಹಸಿರುಮಕ್ಕಿ ಸೇತುವೆ ಕಾಮಗಾರಿಯನ್ನು ದಿನದಿಂದ ದಿನಕ್ಕೆ ಮುಂದೂಡುತ್ತಾ ಬರಲಾಗುತ್ತಿದೆ. ಈ ಹಿಂದೆ ನಮ್ಮ ನಾಯಕರಾದ ಹರತಾಳು ಹಾಲಪ್ಪನವರು ಹಾಗೂ ಸಂಸದರು ಸ್ಪಷ್ಟಪಡಿಸಿದಂತೆ, ಈ ಸೇತುವೆ ಕಾಮಗಾರಿಗೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ, ಇದು ಸಂಪೂರ್ಣವಾಗಿ ರಾಜ್ಯ ಸರ್ಕಾರಕ್ಕೆ ಸೇರಿದ್ದಾಗಿದೆ. ಆದರೆ ಈ ಬಗ್ಗೆ ಶಾಸಕರಿಗೆ ಕನಿಷ್ಠ ಜ್ಞಾನವಿದ್ದಂತೆ ಕಾಣುತ್ತಿಲ್ಲ. ಶಾಸಕರು ಮತ್ತು ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸಾಗರಕ್ಕೆ ಬಂದಾಗ “ಮೇ ತಿಂಗಳಲ್ಲಿ ಕಾಮಗಾರಿ ಮಾಡುತ್ತೇವೆ” ಎಂದು ಹೇಳಿದ್ದರು. ಆದರೆ ಅದು ಯಾವ ವರ್ಷದ ಮೇ ತಿಂಗಳು ಎಂದು ಅವರು ಇನ್ನು ಸ್ಪಷ್ಟಪಡಿಸಿಲ್ಲ. ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಶಾಸಕರ ಬದ್ಧತೆಯ ಕೊರತೆಯೇ ನೇರ ಕಾರಣ ಎಂದು ದೂರಿದರು.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಹಾಗೂ ಅಧಿಕಾರಿಗಳಿಗೆ ಶಾಸಕರ ತಾಕೀತು
ಸಂಸದರು ಬಂದಾಗ ಸಭೆಗಳಿಗೆ ಅಧಿಕಾರಿಗಳು ಹೋಗಬಾರದು ಎಂದು ಶಾಸಕರು ತಾಕೀತು ಮಾಡಿರುವುದನ್ನು ಪತ್ರಿಕೆಗಳಲ್ಲಿ ನೋಡಿದ್ದೇವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾರ್ವಜನಿಕರು ಸಮಸ್ಯೆ ಹಿಡಿದು ಬಂದಾಗ ಅಧಿಕಾರಿಗಳನ್ನು ಕರೆಯುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಆದರೆ, ತಾವೊಬ್ಬರೇ ಮಂತ್ರಿಯಾಗಬೇಕೆಂದು ಬೆಂಗಳೂರಿನಲ್ಲಿ ಕುಳಿತುಕೊಂಡರೆ ಇಲ್ಲಿನ ಜನರ ಕಷ್ಟ ಕೇಳುವವರು ಯಾರು ಎಂದು ಪ್ರಶ್ನಿಸಿದ ಅವರು, ಶಾಸಕರಿಗೆ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯ ಅರಿವಿಲ್ಲ ಎಂದು ಟೀಕಿಸಿದರು.
ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ತಕ್ಷಣ ಸರ್ಕಾರವನ್ನು ವಿಸರ್ಜಿಸಲಿ ಎಂದು ಅವರು ಸವಾಲು ಹಾಕಿದರು. ಇದೇ ಸಂದರ್ಭದಲ್ಲಿ ನಗರದ ಗಾಂಧಿನಗರದಲ್ಲಿ ವಾಸ್ತು ಸರಿ ಇಲ್ಲ ಎಂಬ ಕಾರಣಕ್ಕೆ ಬಾವಿಯೊಂದನ್ನು ಮುಚ್ಚಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ ರ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಗ್ರಾಮಾಂತರ ಉಪಾಧ್ಯಕ್ಷರಾದ ಗಿರೀಶ್, ಪ್ರಮುಖರಾದ ಸೂರಜ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಮೊಗವೀರ್ ಹಾಗೂ ಸಂತೋಷ್ ರಾಯ್ ಉಪಸ್ಥಿತರಿದ್ದರು.








