ಹೈದರಾಬಾದ್: ಪುಷ್ಪ-2: ದಿ ರೂಲ್ ಚಿತ್ರದ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ಮತ್ತು ಮಹಿಳಾ ಅಭಿಮಾನಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ಗೆ ಸಂಕಷ್ಟ ಎದುರಾಗಿದೆ. ಹೈದರಾಬಾದ್ನ ನಾಂಪಲ್ಲಿ ನ್ಯಾಯಾಲಯವು ನಟನಿಗೆ ಸಮನ್ಸ್ ಜಾರಿ ಮಾಡಿದ್ದು, ಜೂನ್ ೨೨ರ ಸೋಮವಾರದಂದು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಕಡಕ್ ಸೂಚನೆ ನೀಡಿದೆ.
ಚಿಕ್ಕಡಪಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ (ಚಾರ್ಜ್ಶೀಟ್) ಅಲ್ಲು ಅರ್ಜುನ್ ಅವರನ್ನು ಆರೋಪಿ ನಂಬರ್ 11 (A11) ಎಂದು ಉಲ್ಲೇಖಿಸಿದ್ದಾರೆ. ಇನ್ನು ಘಟನೆ ನಡೆದ ಸಂಧ್ಯಾ ಥಿಯೇಟರ್ನ ಆಡಳಿತ ಮಂಡಳಿಯನ್ನು ಪ್ರಮುಖವಾಗಿ 1 ರಿಂದ 10 ರವರೆಗಿನ (A1-A10) ಆರೋಪಿಗಳನ್ನಾಗಿ ಮಾಡಲಾಗಿದೆ. ನಟ ಅಲ್ಲು ಅರ್ಜುನ್ ಮಾತ್ರವಲ್ಲದೆ, ಈ ದುರಂತಕ್ಕೆ ಸಂಬಂಧಿಸಿದಂತೆ ಒಟ್ಟು 19 ಜನರಿಗೆ ನಾಂಪಲ್ಲಿ ಕೋರ್ಟ್ ಸಮನ್ಸ್ ನೀಡಿದೆ.
ಏನಿದು ಘಟನೆ?
2024ರ ಡಿಸೆಂಬರ್ 4 ರಂದು ಹೈದರಾಬಾದ್ನ ಆರ್ಟಿಸಿ ಕ್ರಾಸ್ ರೋಡ್ಸ್ನಲ್ಲಿರುವ ಸಂಧ್ಯಾ ಥಿಯೇಟರ್ನಲ್ಲಿ ‘ಪುಷ್ಪ 2’ ಚಿತ್ರದ ವಿಶೇಷ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಈ ವೇಳೆ ನಟ ಅಲ್ಲು ಅರ್ಜುನ್ ಥಿಯೇಟರ್ಗೆ ಆಗಮಿಸುತ್ತಿದ್ದಂತೆ ಅವರ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದರು. ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದ ಕಾರಣ ಥಿಯೇಟರ್ ಆವರಣದಲ್ಲಿ ಭಾರೀ ಕಾಲ್ತುಳಿತ ಉಂಟಾಗಿತ್ತು. ಈ ನೂಕುನುಗ್ಗಲಿನಲ್ಲಿ ಸಿಲುಕಿದ ರೇವತಿ (35) ಎಂಬ ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಅವರ ಸಣ್ಣ ಮಗ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದನು.
ಪೊಲೀಸರ ತನಿಖೆ:
ಈ ಕಾರ್ಯಕ್ರಮ ಅಥವಾ ನಟನ ಭೇಟಿಯ ಬಗ್ಗೆ ಥಿಯೇಟರ್ ಆಡಳಿತ ಮಂಡಳಿಯಾಗಲಿ ಅಥವಾ ನಟನ ವೈಯಕ್ತಿಕ ತಂಡವಾಗಲಿ ಪೊಲೀಸರಿಗೆ ಯಾವುದೇ ಮುಂಚಿತ ಮಾಹಿತಿ ನೀಡಿರಲಿಲ್ಲ. ಹೀಗಾಗಿ ನಿರ್ಲಕ್ಷ್ಯ ಮತ್ತು ಸೂಕ್ತ ಜನಸಂದಣಿ ನಿಯಂತ್ರಣ ವ್ಯವಸ್ಥೆ ಮಾಡದ ಕಾರಣಕ್ಕಾಗಿ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ಸಿಬ್ಬಂದಿ ಮತ್ತು ಥಿಯೇಟರ್ ಮಂಡಳಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಬಂಧನ ಮತ್ತು ಜಾಮೀನು:
ದುರಂತ ನಡೆದ ಒಂದು ವಾರದ ನಂತರ, ಅಂದರೆ 2024ರ ಡಿಸೆಂಬರ್ 13 ರಂದು ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದರು. ಆದರೆ, ಅದೇ ದಿನ ತೆಲಂಗಾಣ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಅಲ್ಲು ಅರ್ಜುನ್, ಮೃತ ರೇವತಿ ಅವರ ಕುಟುಂಬಕ್ಕೆ ಆರ್ಥಿಕ ಸಹಾಯವನ್ನೂ ಘೋಷಿಸಿದ್ದರು. ಆದರೆ ಈಗ ಪೊಲೀಸರ ಚಾರ್ಜ್ಶೀಟ್ ಬೆನ್ನಲ್ಲೇ ಕೋರ್ಟ್ ಖುದ್ದಾಗಿ ಹಾಜರಾಗಲು ಸಮನ್ಸ್ ನೀಡಿರುವುದು ನಟನಿಗೆ ಹೊಸ ತಲೆನೋವು ತಂದಿದೆ.
ಅಟ್ಲಿ ಸಿನಿಮಾದಲ್ಲಿ ಅಲ್ಲು ಅರ್ಜುನ್:
ಒಂದೆಡೆ ಕಾನೂನು ಸಂಕಷ್ಟ ಎದುರಾಗಿದ್ದರೆ, ಮತ್ತೊಂದೆಡೆ ಅಲ್ಲು ಅರ್ಜುನ್ ಅವರು ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರ ‘ರಾಕಾ’ ಚಿತ್ರದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ರಶ್ಮಿಕಾ ಮಂದಣ್ಣ, ಮೃಣಾಲ್ ಠಾಕೂರ್ ಮತ್ತು ಜಾನ್ವಿ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಸದ್ಯದಲ್ಲೇ ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.








