ಶಿವಮೊಗ್ಗ: ಸಾಗರದ ತಹಶೀಲ್ದಾರ್ ಆಗಿರುವಂತ ಡಾ.ಪ್ರತಿಭಾ ಅವರನ್ನು ಗ್ರೇಡ್-2 ಹುದ್ದೆಯಿಂದ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶಿಸಿದೆ. ಆ ಮೂಲಕ ಹಲವು ವರ್ಷಗಳಿಂದ ಮುಂಬಡ್ತಿ ನಿರೀಕ್ಷೆಯಲ್ಲಿದ್ದಂತ ಅವರಿಗೆ ಸಿಹಿಸುದ್ದಿಯನ್ನು ಸರ್ಕಾರ ನೀಡಿದೆ.
ಕಳೆದ ಮೇ.27ರಂದು ಸಾಗರ ತಾಲ್ಲೂಕಿಗೆ ನೂತನ ತಹಶೀಲ್ದಾರ್ ಆಗಿ ಡಾ.ಪ್ರತಿಭಾ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿತ್ತು. ಆ ಬಳಿಕ ಅವರು ಜೂನ್.3ರಂದು ಸಾಗರದ ನೂತನ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇಂತಹ ಅವರಿಗೆ ಸಿಹಿಸುದ್ದಿ ಎನ್ನುವಂತೆ ಇಂದು ರಾಜ್ಯ ಸರ್ಕಾರವು ಗ್ರೇಡ್-2 ಹುದ್ದೆಯಿಂದ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.
ಒಟ್ಟು 232 ಅಧಿಕಾರಿಗಳಿಗೆ ಗ್ರೇಡ್-1 ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮಹತ್ವದ ನಿರ್ಧಾರವು ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಮತ್ತು ನೌಕರರ ಅರ್ಹತೆಯನ್ನು ಗೌರವಿಸುವ ಸರ್ಕಾರದ ದೃಢ ಸಂಕಲ್ಪವನ್ನು ಬಿಂಬಿಸಿದೆ.
ಸಾಗರ ತಹಶೀಲ್ದಾರ್ ಡಾ.ಪ್ರತಿಭಾ ಬಗ್ಗೆ ಸಂಕ್ಷಿಪ್ತ ಮಾಹಿತಿ
ಡಾ.ಪ್ರತಿಭಾ ಅವರು ಶಿಕ್ಷಣ ತಜ್ಞೆ, ಸಾಹಿತ್ಯ ಕಳಕಳಿಯ ಚಿಂತಕಿ ಹಾಗೂ ಆಡಳಿತ ಯಂತ್ರದಲ್ಲಿ ದಕ್ಷತೆಯ ಮುದ್ರೆ ಒತ್ತಿರುವ ಕೆಎಎಸ್ (KAS) ಅಧಿಕಾರಿ. ಕೇವಲ ಕಚೇರಿಯ ಕಡತಗಳಿಗಷ್ಟೇ ಸೀಮಿತವಾಗದೆ, ಸಾರ್ವಜನಿಕ ವಲಯದಲ್ಲಿ ವಿಶೇಷ ಸಾಮಾಜಿಕ ಕಾಳಜಿ ಹೊತ್ತು ಜನಮನ್ನಣೆ ಗಳಿಸಿದ್ದಾರೆ.
ಮೂಲತಃ ಕಲ್ಪತರು ನಾಡು ತುಮಕೂರಿನವರಾದ ಪ್ರತಿಮಾ ಅವರು ಶೈಕ್ಷಣಿಕವಾಗಿ ಅತ್ಯಂತ ಉನ್ನತ ಸಾಧನೆ ಮಾಡಿದವರು. ಸ್ನಾತಕೋತ್ತರ ಪದವಿಯಲ್ಲಿ (Post Graduation) ‘ಗೋಲ್ಡ್ ಮೆಡಲಿಸ್ಟ್’ (Gold Medalist) ಆಗಿರುವ ಇವರು, ಇನ್ನೂ ಹಲವು ಉನ್ನತ ಪದವಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಆಡಳಿತ ಸೇವೆಗೆ ಬರುವ ಮುನ್ನ ಶಿಕ್ಷಣ ಇಲಾಖೆಯಲ್ಲಿ ವಿಷಯ ಪರಿವೀಕ್ಷಕರಾಗಿ ಹಾಗೂ ಡಯಟ್ (DIET) ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅಪಾರ ಅನುಭವ ಇವರಿಗಿದೆ. ಆನಂತರ ಕಠಿಣವಾದ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಂದಾಯ ಇಲಾಖೆಯನ್ನು ಪ್ರವೇಶಿಸಿದರು.
ಜನಸ್ನೇಹಿ ಆಡಳಿತಕ್ಕೆ ಸಾಕ್ಷಿಯಾದ ಕರಾವಳಿ-ಮಾಗಡಿ ಜರ್ನಿ
ತಹಶೀಲ್ದಾರ್ ಆಗಿ ಜವಾಬ್ದಾರಿ ವಹಿಸಿಕೊಂಡ ನಂತರ ಪ್ರತಿಮಾ ಅವರು ಹೋದ ಕಡೆಯಲ್ಲೆಲ್ಲಾ ಜನಸಾಮಾನ್ಯರ ಅಧಿಕಾರಿಯಾಗಿ ಗುರುತಿಸಿಕೊಂಡರು. ಮಾಗಡಿ ತಾಲೂಕು, ಕರಾವಳಿಯ ಕಾಪು ಹಾಗೂ ಕಾರ್ಕಳ ತಾಲೂಕುಗಳಲ್ಲಿ ತಹಶೀಲ್ದಾರ್ ಆಗಿ ಇವರು ಸಲ್ಲಿಸಿರುವ ಸೇವೆ ಅನನ್ಯವಾದದ್ದು. ತಾಲೂಕಿನ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ಸಿಗಬೇಕು ಎಂದು ಶ್ರಮಿಸಿದ ಇವರ ಜನಪರ ಕಾರ್ಯವೈಖರಿ ಇಂದಿಗೂ ಆ ಭಾಗದ ಜನರ ಮನಸ್ಸಿನಲ್ಲಿ ಹಸಿರಾಗಿದೆ.
ಜೀ ಕನ್ನಡ ವಾಹಿನಿಯ ‘ವೀರ ಕನ್ನಡತಿ – 2025’ ಪ್ರಶಸ್ತಿಯ ಗರಿ!
ಇವರ ನಿಸ್ವಾರ್ಥ ಸೇವೆ ಹಾಗೂ ದಕ್ಷ ಆಡಳಿತವನ್ನು ಗುರುತಿಸಿ ಜೀ ಕನ್ನಡ ನ್ಯೂಸ್ ವಾಹಿನಿಯು ಇವರಿಗೆ ‘ವೀರ ಕನ್ನಡತಿ ಪ್ರಶಸ್ತಿ – 2025’ ನೀಡಿ ಗೌರವಿಸಿದೆ. ಒಬ್ಬ ಸರ್ಕಾರಿ ಅಧಿಕಾರಿಯಾಗಿ ರಾಜ್ಯ ಮಟ್ಟದ ಇಂತಹ ಪ್ರತಿಷ್ಠಿತ ಮನ್ನಣೆಗೆ ಪಾತ್ರರಾಗಿರುವುದು ಇವರ ಕರ್ತವ್ಯ ನಿಷ್ಠೆಗೆ ಹಿಡಿದ ಕೈಗನ್ನಡಿಯಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಇವರ ಸಾಧನೆಯ ಯಶೋಗಾಥೆಯನ್ನು ಕಂಡು ಇಡೀ ಕರ್ನಾಟಕವೇ ಹೆಮ್ಮೆ ಪಟ್ಟಿತ್ತು. ವೀರ ಕನ್ನಡತಿಯ ಕಾರ್ಯವನ್ನು ಮನದುಂಬಿ ಕೊಂಡಾಡಿದೆ.
“ಕನ್ನಡ ಕೇವಲ ಆಡುಭಾಷೆಯಾಗದೆ ಅದು ಅಮೃತ ಭಾಷೆಯಾಗಬೇಕು. ಸಮಾಜದಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ; ಎಲ್ಲರೂ ಸಮಾನರು.” — ತಹಶೀಲ್ದಾರ್ ಪ್ರತಿಮಾ ಅವರ ವಿಚಾರಧಾರೆ.
ಸಾಮಾಜಿಕ ಸಮಾನತೆ ಮತ್ತು ಭಾಷಾಭಿಮಾನದ ಕಹಳೆ
ಪ್ರತಿಮಾ ಅವರು ಕೇವಲ ಅಧಿಕಾರ ಚಲಾಯಿಸುವ ಅಧಿಕಾರಿಯಲ್ಲ; ಬದಲಿಗೆ ಸಮಾಜದಲ್ಲಿ ಸಮಾನತೆ, ಮಹಿಳಾ ಸಬಲೀಕರಣ ಹಾಗೂ ಕನ್ನಡ ಭಾಷಾಭಿಮಾನದ ಬಗ್ಗೆ ಕಳಕಳಿ ಹೊಂದಿರುವ ಉತ್ತಮ ವಾಗ್ಮಿ. ತಮ್ಮ ಪ್ರಭಾವಶಾಲಿ ಉಪನ್ಯಾಸಗಳ ಮೂಲಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಜಾಗೃತಿ ಮೂಡಿಸುತ್ತಿರುವ ಇವರು, ಸಾಮಾಜಿಕ ಸಮಾನತೆಯ ತತ್ವವನ್ನು ಆಡಳಿತದಲ್ಲೂ ಅಳವಡಿಸಿಕೊಂಡಿದ್ದಾರೆ.
ಡಾ.ಪ್ರತಿಭಾಗೆ ಗ್ರೇಡ್-2 ಹುದ್ದೆಯಿಂದ ಗ್ರೇಡ್-1 ತಹಶೀಲ್ದಾರ್ ಆಗಿ ಮುಂಬಡ್ತಿ
ಸಾಹಿತ್ಯಿಕವಾಗಿ ಸದಾ ಜಾಗೃತವಾಗಿರುವ ಸಾಗರ ತಾಲೂಕಿಗೆ ಇಂತಹದೊಂದು ಸಾಂಸ್ಕೃತಿಕ ಮನಸ್ಸಿನ, ಸೈದ್ಧಾಂತಿಕ ಸ್ಪಷ್ಟತೆಯಿರುವ ಹಾಗೂ ಶೈಕ್ಷಣಿಕ ಹಿನ್ನೆಲೆಯುಳ್ಳ ‘ವೀರ ಕನ್ನಡತಿ’ ಅಧಿಕಾರಿ ಬಂದಿರುವುದು ಸಾಗರದ ಕಂದಾಯ ಆಡಳಿತಕ್ಕೆ ಮತ್ತಷ್ಟು ವೇಗವನ್ನು ತಂದಂತೆ ಆಗಿದೆ. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲೇ ಸಾಗರ ತಾಲ್ಲೂಕಿನ ಅಕ್ರಮ ಕಲ್ಲು ಕ್ವಾರಿ, ಮರಳು ಮಾಫಿಯಾ ವಿರುದ್ಧವೂ ಡಾ.ಪ್ರತಿಭಾ ಸಮರವನ್ನೆ ನಡೆಸಿದ್ದರು ಇಲ್ಲಿ ಸ್ಮರಿಸಬೇಕಾಗಿದೆ. ಇಂತಹ ಅವರಿಗೆ ಇದೀಗ ಸರ್ಕಾರವು ಗ್ರೇಡ್-2 ತಹಶೀಲ್ದಾರ್ ಹುದ್ದೆಯಿಂದ, ಗ್ರೇಡ್-1 ಹುದ್ದೆಗೆ ಮುಂಬಡ್ತಿ ನೀಡಿದೆ. ಆ ಮೂಲಕ ಅವರಿಗೆ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದ್ದು, ಉತ್ತಮ ಜನಸೇವೆಯ ಕಾಯಕವನ್ನು ಮಾಡಲೆಂದು ಆಶಿಸೋಣ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…


BREAKING: ರಾಜ್ಯದ 232 ಗ್ರೇಡ್-2 ತಹಶೀಲ್ದಾರ್ ಗಳಿಗೆ ಗ್ರೇಡ್-1 ಹುದ್ದೆಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ
ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಹಾಕಲು ಬಿಜೆಪಿಯ SIR ಸಂಚು: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಂಭೀರ ಆರೋಪ!








