ಛತ್ತರ್ಪುರ: ಮಧ್ಯಪ್ರದೇಶದ ಛತ್ತರ್ಪುರದಲ್ಲಿ ನಡೆದ ಕೌಟುಂಬಿಕ ಕಲಹವು ರಕ್ತಪಾತದಲ್ಲಿ ಅಂತ್ಯಗೊಂಡಿದ್ದು, ಪತ್ನಿಯೊಬ್ಬಳು ತನ್ನ ಪತಿಯನ್ನು ಕೋಲಿನಿಂದ ಹೊಡೆದು ಕೊಂದ ಘಟನೆ ವರದಿಯಾಗಿದೆ. ಕೊಲೆ ಮಾಡಿದ ನಂತರ ಮಹಿಳೆಯು ಶವದ ಪಕ್ಕ ಸುಮಾರು ಎಂಟು ಗಂಟೆಗಳ ಕಾಲ ಕುಳಿತು, ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ.
ಆರೋಪಿ ದೀನ್ದಯಾಳ್ ಕುಶ್ವಾಹ ಮತ್ತು ಆತನ ಪತ್ನಿ ನೀಲಂ ಕುಶ್ವಾಹ ಕಳೆದ ನಾಲ್ಕು ವರ್ಷಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ನೀಲಂ ಅವರು ತಮ್ಮ ತವರು ಮನೆಯಲ್ಲಿ ನೆಲೆಸಿದ್ದರು. ಜೂನ್ 1ರಂದು, ಕುಡಿದ ಮತ್ತಿನಲ್ಲಿದ್ದ ದೀನ್ದಯಾಳ್, ನೀಲಂ ಅವರ ತವರು ಮನೆಗೆ ಬಲವಂತವಾಗಿ ನುಗ್ಗಿದ್ದಾನೆ.
ಮನೆಯೊಳಗೆ ನುಗ್ಗಿದ ಆತ, ತಮ್ಮ ಮಗನನ್ನು ಹಿಡಿದು ತಲೆಕೆಳಗಾಗಿ ನೇತುಹಾಕಿದ್ದಾನೆ. ಪತಿಯ ಕ್ರೌರ್ಯದಿಂದ ಮಗನಿಗೆ ಅಪಾಯವಾಗಬಹುದು ಎಂದು ಆತಂಕಗೊಂಡ ನೀಲಂ, ಮಗನನ್ನು ಉಳಿಸಿಕೊಳ್ಳುವ ಭರದಲ್ಲಿ ಸಮೀಪದಲ್ಲಿದ್ದ ಮರದ ಕೋಲನ್ನು ತೆಗೆದುಕೊಂಡು ದೀನ್ದಯಾಳ್ ಮೇಲೆ ಹಲ್ಲೆ ನಡೆಸಿದ್ದಾಳೆ. ಮೊದಲ ಏಟಿಗೆ ಆತ ಮಂಚದ ಮೇಲೆ ಬಿದ್ದಿದ್ದಾನೆ. ಆದರೂ ನಿಲ್ಲದ ನೀಲಂ, ಆತ ಸಾಯುವವರೆಗೂ ಕೋಲಿನಿಂದ ಹೊಡೆದಿದ್ದಾಳೆ.
ಪತಿಯನ್ನು ಕೊಂದ ನಂತರ ನೀಲಂ ಸುಮಾರು ಎಂಟು ಗಂಟೆಗಳ ಕಾಲ ಆ ಶವದ ಪಕ್ಕದಲ್ಲೇ ಕುಳಿತಿದ್ದಳು. ನಂತರ ಆಕೆ ಸ್ಥಳೀಯ ದೇವಾಲಯವೊಂದಕ್ಕೆ ಹೋಗಿ, ದೇವತೆಯ ಮುಂದೆ ಸುಮಾರು 10 ನಿಮಿಷಗಳ ಕಾಲ ಪ್ರಾರ್ಥನೆ ಸಲ್ಲಿಸಿ ಕ್ಷಮೆಯಾಚಿಸಿದ್ದಾಳೆ. ಅಲ್ಲಿಂದ ನೇರವಾಗಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ತೆರಳಿದ್ದಾಳೆ.
ರಾತ್ರಿ ಸುಮಾರು 8 ಗಂಟೆಗೆ ಪೊಲೀಸ್ ಠಾಣೆಗೆ ತಲುಪಿದ ಆಕೆ, ಸ್ಟೇಷನ್ ಹೌಸ್ ಆಫೀಸರ್ (SHO) ಗೆ ತಾನು ತನ್ನ ಪತಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾಳೆ. ಪೊಲೀಸರು ಆಕೆಯ ಮನೆಗೆ ಹೋಗಿ ಪರಿಶೀಲಿಸಿದಾಗ, ಮಂಚದ ಮೇಲೆ ಶವ ಪತ್ತೆಯಾಗಿದೆ.
ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನೀಲಂ ಆರೋಪಿಸಿರುವ ದೌರ್ಜನ್ಯ ಮತ್ತು ಹಲ್ಲೆಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.








